ಮಡಿಕೇರಿ ಜ.20 : ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ತೋಟವನ್ನಾಗಿ ಪರಿವರ್ತಿಸಿರುವ ಪ್ರಕರಣಗಳಲ್ಲಿ, ಗುತ್ತಿಗೆ ಆಧಾರದಲ್ಲಿ 30 ವರ್ಷಗಳ ಅವಧಿಗೆ ಜಾಗ ನೀಡುವ ಕುರಿತು ಸರ್ಕಾರ ಹೊರಡಿಸಿರುವ ಆದೇಶದಂತೆ ಕ್ರಮ ಕೈಗೊಳ್ಳಬೇಕೆ ಹೊರತು ಬಡಕೃಷಿಕರನ್ನು ತೆರವುಗೊಳಿಸಬಾರದೆಂದು ಕರ್ನಾಟಕ ರಾಜ್ಯ ರೈತ ಸಂಘದ ಸೋಮವಾರಪೇಟೆ ತಾಲ್ಲೂಕು ಶಾಖೆಯ ಸಂಚಾಲಕ ಗರಗಂದೂರು ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಣ್ಣ ಬೆಳೆಗಾರರು ಅತಿಕ್ರಮಿಸಿ ತೋಟವನ್ನಾಗಿ ಪರಿವರ್ತಿಸಿರುವ ಸರ್ಕಾರಿ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಒತ್ತುವರಿ ಜಾಗದ ಕೃಷಿಯನ್ನು ನಾಶ ಪಡಿಸುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಫಿ ತೋಟಗಳಲ್ಲಿ ಸಾಕಷ್ಟು ಮರಗಿಡಗಳನ್ನು ಬೆಳೆಸುವುದರಿಂದ ಅದು ಪರಿಸರ ಸಂರಕ್ಷಣೆಗೂ ಪೂರಕವಾಗಿದೆ. ಸರ್ಕಾರಿ ಪೈಸಾರಿ ಜಾಗದಲ್ಲಿರುವ ಕಾಫಿ ತೋಟಗಳನ್ನು ತೆರವುಗೊಳಿಸುವ ಭಾಗವಾಗಿ ಅಲ್ಲಿನ ಗಿಡಗಳನ್ನು ಕಡಿದು ಹಾಕುವುದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾಷ್ಟ್ರಕ್ಕೆ ದೊಡ್ಡ ಮಟ್ಟದ ವಿದೇಶಿ ವಿನಿಮಯ ಗಳಿಸಿಕೊಡುವ ಕಾಫಿ ಉತ್ಪಾದನೆಯ ಮೇಲೂ ಇದು ಕೆಟ್ಟ ಪರಿಣಾಮ ಉಂಟು ಮಾಡಲಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಯ ವಿವಿಧೆಡೆ ತೋಟಗಳಾಗಿ ಪರಿವರ್ತಿತವಾಗಿರುವ ಸರ್ಕಾರಿ ಜಮೀನನ್ನು ಕಂದಾಯ, ಅರಣ್ಯ ಇಲಾಖೆ ಹಾಗೂ ಕೆಲವೆಡೆಗಳಲ್ಲಿ ಗ್ರಾಮಸ್ಥರೆ ರಾಜಕೀಯ ಕಾರಣಗಳ ಹಿನ್ನೆಲೆ ತೆರವುಗೊಳಿಸುವ ಮೂಲಕ ಬಡಕೃಷಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಫಿ ಗಿಡಗಳನ್ನು ಕಡಿದು ಒತ್ತುವರಿ ತೆರವುಗೊಳಿಸಿ ಕೃಷಿಕರ ಬದುಕನ್ನು ಸಂಕಷ್ಟಕ್ಕೆ ತಳ್ಳಿರುವ ಕೆಲವು ಪ್ರಕರಣಗಳ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸೋಮವಾರಪೇಟೆ ತಾಲ್ಲೂಕಿನ ಹರಗ ಗ್ರಾಮ, ಹಾನಗಲ್ಲು ಶೆಟ್ಟಳ್ಳಿ, ಭಾಗಮಂಡಲ ಮತ್ತಿತರ ಗ್ರಾಮಗಳಲ್ಲಿ ಸಣ್ಣ ಕೃಷಿಕರಿಗೆ ಅನ್ಯಾಯವಾಗಿದೆ ಎಂದು ಲಕ್ಷ್ಮಣ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಸದಸ್ಯ ನಾಪಂಡ ಸುಬ್ಬಯ್ಯ ಉಪಸ್ಥಿತರಿದ್ದರು.









