ಶನಿವಾರಸಂತೆ ಆ.28 : ಆತ್ಮೀಯತೆ ಮತ್ತು ಅಭಿಮಾನದಿಂದ ಕನ್ನಡ ಉಳಿಸಿ, ನಾವು ಕನ್ನಡ ನಾಡಿನವರು ಎಂದು ನಮಗೆ ಹೆಮ್ಮೆ ಇರಬೇಕು. ವೈಜ್ಞಾನಿಕವಾಗಿ ಇಂದಿನ ಕಾಲ ಪ್ರಗತಿ ಹೊಂದುತ್ತಿದೆ. ಪ್ರಪಂಚ ನಮ್ಮ ಕರ್ನಾಟಕದ ಕಡೆ ನೋಡುವಂತೆ ನಮ್ಮ ವಿಜ್ಞಾನಿಗಳು ಚಂದ್ರಯಾನ-3 ಯೋಜನೆ ಸಾಧನೆ ಮಾಡಿದ್ದಾರೆ. ನಮ್ಮ ಕನ್ನಡ ನೆಲದಿಂದ ಇದು ಸಾಧ್ಯವಾಯಿತು ಎಂದು ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೊಡ್ಲಿಪೇಟೆ ಹಲಸಿನ ಮರ ಶ್ರೀಮತಿ ಗೌರಮ್ಮ ಶಾಂತ ಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ಸಂಯುಕ್ತಶ್ರಯದಲ್ಲಿ ಆರೋಢ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂ.ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ, ಸಂಸ್ಕೃತಿ, ನೆಲಜಲ ಉಳಿಸಿಕೊಂಡು ಹೋಗಬೇಕು. ಕನ್ನಡ ಭಾಷೆ ಉಳಿಸಲು ಇಂದು ಸಂಘಟನೆ ಮೂಲಕ ಹೋರಾಟ ಮಾಡುವ ಪರಿಸ್ಥಿತಿ ಇದೆ. ಪ್ರೀತಿಯಿಂದ ಎಲ್ಲರೂ ಕನ್ನಡ ಭಾಷೆ ಬಳಸಿ, ಕನ್ನಡ ಮನಸ್ಸುಗಳು ಶ್ರದ್ಧೆಯಿಂದ ಸಾಹಿತ್ಯ ಬೆಳೆಸಬೇಕು ಎಂದರು.
ಸಾಹಿತ್ಯ ಅಭಿಮಾನಿಯಾಗಲು ದಿನ ನಿತ್ಯ ಪುಸ್ತಕವನ್ನು ಓದುವ ಹವ್ಯಾಸ ಬೆಳಸಿಕೊಳ್ಳಿ. ಸಾಹಿತ್ಯ ಅಭಿಮಾನಿಗಳಿಂದ ಸಮೃದ್ಧ ಕರ್ನಾಟಕ ನಿರ್ಮಾಣ ಮಾಡಲು ಸಾಧ್ಯ. ಕನ್ನಡ ಭಾಷೆಯಲ್ಲಿ ವೈವಿದ್ಯತೆ ಇದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯಲು ಯುವಸಾಹಿತಿಗಳು ಹೊರಬರಬೇಕಿದೆ. ಇಂದಿನ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶವಿದೆ. ನಾಲ್ಕು ಜನ ಗುರುತು ಮಾಡುವಂತೆ ಕನ್ನಡ ಬೆಳೆಸಬೇಕು. ಪ್ರಯತ್ನದಿಂದ ಸಫಲತೆ ಸಾಧ್ಯ ಎಂದು ಕರೆ ನೀಡಿದರು.
ಶರಣ ಸಂಸ್ಕೃತಿಯ ಕುರಿತು ಪತ್ರಕರ್ತ ಎಸ್.ಮಹೇಶ್ ಉಪನ್ಯಾಸ ನೀಡಿ 12ನೇ ಶತಮಾನದಲ್ಲಿ ಭಿನ್ನ ಭೇದ ಇತ್ತು. ಬಸವಣ್ಣನವರು ಹೋರಾಟ ಮಾಡಿ ಜಗತ್ತಿಗೆ ಹೆಣ್ಣು ಗಂಡು ಭೇದ ಬಿಟ್ಟರೆ ಯಾವುದೇ ಜಾತಿ ಭೇದ ಮರೆತು ಜೀವನ ನಡೆಸಿ ಎಂದು ಸಾರಿದರು. ಆದರೂ ಇಂದಿನ ಕಾಲಘಟ್ಟದಲ್ಲಿ ಜಾತಿ ಭೇದದಲ್ಲಿ ಸಂವಿಧಾನ ನಿರ್ಮಾಣವಾಗುತ್ತಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮಾತನಾಡಿ, ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಯಾಗಲು ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಅಪಾರವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಯಿಂದ ಕನ್ನಡ ಅಭಿವೃದ್ಧಿಗೆ ಚಿಂತಿಸಿ ಸಾಹಿತ್ಯ ಅಭಿಮಾನಿಗಳನ್ನು ಉದ್ಬವವಾಗುವಂತೆ ಮಾಡಿದರು. ಕರ್ನಾಟಕ ಉದ್ಬವವಾಗಲು ಕನ್ನಡ ಭಾಷೆ ಪ್ರಮುಖ ಪಾತ್ರವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡ್ಲಿಪೇಟೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಅಧ್ಯಕ್ಷ ಶಾಂತಮಲ್ಲಪ್ಪ ವಹಿಸಿದರು. ಕೊಡ್ಲಿಪೇಟೆ ಹೋಬಳಿಯಲ್ಲಿ ಕಳೆದ 2022-23 ಸಾಲಿನಲ್ಲಿ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್, ನಿರ್ದೇಶಕ ಅಬ್ದುಲ್ ರಬ್ಬ್, ಜಯರಾಜ್, ನಾಗೇಶ್, ಯತೀಶ್ ಇದ್ದರು.








