ಗೋಮಾಂಸ ವಿವಾದ : ಕೊಡವರ ಕ್ಷಮೆಯಾಚಿಸಲು ಜಿ.ಪಂ ಮಾಜಿ ಸದಸ್ಯೆ ಕಾಂತಿ ಸತೀಶ್ ಆಗ್ರಹ

ಮಡಿಕೇರಿ ಡಿ. 19 : ಕೊಡವರೂ ಗೋಮಾಂಸ ತಿನ್ನುತ್ತಾರೆ ಎಂಬ ತಮ್ಮ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಹಿಂಪಡೆಯಬೇಕು ಮತ್ತು ಕೊಡವ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಜಿ.ಪಂ ಮಾಜಿ ಸದಸ್ಯೆ ಮನೆಯಪಂಡ ಕಾಂತಿ ಸತೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮಾತ್ರವಲ್ಲದೆ, ವಿರೋಧ ಪಕ್ಷದ ನಾಯಕರೂ ಆಗಿರುವ, ಜವಾಬ್ದಾರಿ ಸ್ಥಾನ ದಲ್ಲಿರುವ ಸಿದ್ದರಾಮಯ್ಯ ಅವರು ಕೊಡವರು ಗೋವಿನ ಮಾಂಸ (ಬೀಫ್ ) ತಿನ್ನುತ್ತಾರೆ ಎಂಬ ಬೇಜಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಲ್ಲದೆ, ಇದನ್ನು ಬಹಳ ಹಗುರವಾಗಿ ತೇಲಿಬಿಟ್ಟಿದ್ದಾರೆ. ಇವರು ಕೊಡವರ ಸ್ವಾಭಿಮಾನವನ್ನು ಕೆಣಕುವ ರೀತಿಯಲ್ಲಿ ಹೇಳಿದ್ದು,ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕೊಡವರಾದ ನಾವು ಗೋವನ್ನು ಮಾತೆ ಎಂದು ಪೂಜಿಸುವವರು. ಸಿದ್ದರಾಮಯ್ಯ ಹೇಳಿಕೆಯನ್ನು ಕೊಡವರಾದ ನಾವುಗಳು ರಾಜಕೀಯ ರಹಿತವಾಗಿ ಖಂಡಿಸಲಿದ್ದು, ಮುಂದಿನ ದಿನಗಳಲ್ಲಿ ಕೊಡವ ಜನಾಂಗ ಸೇರಿದಂತೆ ಇತರ ಯಾವುದೇ ಜನಾಂಗದ ಬಗ್ಗೆ ಇಂತಹ ಹಗುರವಾದ ಹೇಳಿಕೆ ನೀಡಬಾರದು. ಈ ನಿಟ್ಟಿನಲ್ಲಿ ಕೊಡವರು ಡಿ.21ರಂದು ಬೆಳಿಗ್ಗೆ 10.30 ಕ್ಕೆ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿ ಪ್ರತಿಭಟನೆ ಹಮ್ಮಿಕೊಳ್ಳಲಿರುವುದಾಗಿ ಕಾಂತಿ ಸತೀಶ್ ತಿಳಿಸಿದ್ದಾರೆ.
