ಕೊಡಗು ಗ್ರಾಮೀಣ ಮತದಾರರ ಒಲವು ಕಾಂಗ್ರೆಸ್ ಬೆಂಬಲಿತರ ಮೇಲಿದೆ : ಮೊಹಮ್ಮದ್ ಹಾರಿಸ್ ವಿಶ್ವಾಸ

ಮಡಿಕೇರಿ ಡಿ.20 : ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ದೊರೆಯದೆ ಇರುವುದರಿಂದ ಕೊಡಗಿನ ಗ್ರಾಮೀಣ ಮತದಾರರು ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಒಲವು ತೋರಿದ್ದಾರೆ ಎಂದು ಕೆಪಿಸಿಸಿಯ ಚುನಾವಣಾ ವೀಕ್ಷಕ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಹಾರಿಸ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ತಾವು ಸಂಚರಿಸಿದ್ದು, ಹಿಂದಿನ ಆಡಳಿತ ವ್ಯವಸ್ಥೆಯ ವೈಫಲ್ಯದಿಂದ ಬೇಸತ್ತಿರುವ ಗ್ರಾಮಸ್ಥರು ಕಾಂಗ್ರೆಸ್ ಬೆಂಬಲಿತರ ಪರ ನಿಂತಿರುವುದು ಗೋಚರಿಸಿದೆ ಎಂದು ಹೇಳಿದ್ದಾರೆ. ಪಕ್ಷವು ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗಳ ಪರವಾಗಿದ್ದು, ಜನರು ಕೂಡ ಇವರನ್ನೇ ಗೆಲ್ಲಿಸುವ ಭರವಸೆ ನೀಡಿದ್ದಾರೆ. ಇತರ ಪಕ್ಷಗಳ ಅಪಪ್ರಚಾರ ಅಥವಾ ಒತ್ತಡಕ್ಕೆ ಈ ಬಾರಿ ಮತದಾರರು ಮರುಳಾಗುವುದಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿರುವ ಮೊಹಮ್ಮದ್ ಹಾರಿಸ್, ಅಭಿವೃದ್ಧಿ ಪರ ಮತ್ತು ನ್ಯಾಯಪರ ಮತದಾರರ ಬೆಂಬಲದಿಂದ ಹೆಚ್ಚಿನ ಸಂಖ್ಯೆಯ ಗ್ರಾ.ಪಂ ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ನಡೆಸಲಿದ್ದಾರೆ ಎಂದರು.
ಹುಸಿ ಭರವಸೆ ಮತ್ತು ಕ್ಷುಲ್ಲಕ ರಾಜಕಾರಣಕ್ಕಾಗಿ ಹಾದಿ ತಪ್ಪಿಸುವ ತಂತ್ರಗಳಿಗೆ ಯಾರೂ ಮಣಿಯಬಾರದೆಂದು ಅವರು ಮನವಿ ಮಾಡಿದ್ದಾರೆ.