ತಾಳತ್ತಮನೆಯ ಶ್ರೀದುರ್ಗಾಭಗವತಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಧೃಢ ಕಲಶ ಪೂಜೆ : ಹಿರಿಯ ಅರ್ಚಕ ಬಿ.ಬಿ. ಕೃಷ್ಣಭಟ್ಗೆ ಸನ್ಮಾನ

ಮಡಿಕೇರಿ ಫೆ. 11 : ತಾಳತ್ತಮನೆಯ ಶ್ರೀದುರ್ಗಾಭಗವತಿ ದೇವಾಲಯದಲ್ಲಿ ದೃಢ ಕಲಶ ಹಾಗೂ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು.
ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹಾಂತ, ಮಹಾಬಲಿ ಪೀಠಾಧಿವಾಸದ, ಗಣಪತಿ ಹೋಮ, ಧೃಢ ಕಲಶ ಪೂಜೆ, ಗುಳಿಗ ಪ್ರತಿಷ್ಠೆ, ಧೃಡ ಕಲಶಾಭಿಷೇಕ, ಮಹಾಬಲಿ ಪೀಠ ಪ್ರತಿಷ್ಠೆ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ ಸೇರಿದಂತೆ ವಿವಿಧ ಪೂಜಾ ವಿದಿವಿಧಾನಗಳು ನಡೆದವು.
ನಂತರ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ರಮೇಶ್ ತಂತ್ರಿ ಹಾಗೂ ದೇವಾಲಯದ ಹಿರಿಯ ಅರ್ಚಕ ಹಾಗೂ ಪ್ರಧಾನ ಸಲಹೆಗಾರ ಬಿ.ಬಿ. ಕೃಷ್ಣಭಟ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಗಣ್ಯರ ಉಪಸ್ಥಿತಿಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಸಂಜೆ ಭಜನಾ ಕಾರ್ಯಕ್ರಮ ಹಾಗೂ ಹರಟೆ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ಯಾಲದಾಳು ಪದ್ಮಾವತಿ, ತಾ.ಪಂ. ಸದಸ್ಯ ಕೊಡಪಾಲು ಗಣಪತಿ, ಮದೆ ಗ್ರಾ.ಪಂ. ಸದಸ್ಯ ಬಿ.ಎಸ್ ನವೀನ ಹಾಜರಿದ್ದರು.


