ಕೊಡಗು ಅಹಿಂದ ಒಕ್ಕೂಟದ ಸಭೆ : ಕಾಲೆಳೆಯುವ ತಂತ್ರದಿಂದ ಯಾರಿಗೂ ಲಾಭವಿಲ್ಲ : ಟಿ.ಪಿ.ರಮೇಶ್ ಅಸಮಾಧಾನ : ಪ್ರಮುಖ ನಿರ್ಣಯಗಳ ಮಂಡನೆ

ಮಡಿಕೇರಿ ಫೆ.14 : ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಮಾತ್ರ ಅಹಿಂದ ಸಮುದಾಯಕ್ಕೆ ಸೌಲಭ್ಯಗಳು ಸಿಗುತ್ತವೆ, ಪರಸ್ಪರ ಕಾಲೆಳೆಯುವ ತಂತ್ರದಿಂದ ಯಾರಿಗೂ ಲಾಭವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಅಹಿಂದ ಒಕ್ಕೂಟ ಮತ್ತೆ ಪುನಶ್ಚೇತನಗೊಳ್ಳಲು ದೊಡ್ಡ ಪ್ರಯತ್ನವನ್ನೇ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.
ನಗರದ ಕೊಹಿನೂರು ರಸ್ತೆಯ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಅಹಿಂದ ಒಕ್ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಮಾಜಕ್ಕೆ ಹೋರಾಟದ ಮೂಲಕ ಸೌಲಭ್ಯ ತಲುಪಿಸಲು ಮುಂದಾದರೆ ಕೆಲವರು ಪಿತೂರಿ ನಡೆಸುತ್ತಾರೆ, ಹೋರಾಟವನ್ನು ಹತ್ತಿಕ್ಕಿ ಗೊಂದಲದ ಗೂಡಾಗಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಾಕಷ್ಟು ಕಷ್ಟಪಟ್ಟಿದ್ದೇವೆ, ಕೆಲಸಕ್ಕೆ ಇಳಿದ ಮೇಲೆ ನೋವು ಉಂಡಿದ್ದೇವೆ. ಕೆಲಸಕ್ಕೆ ಇಳಿದ ಮೇಲೆ ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು. ಸಮಾಜದ ಬೆಳವಣಿಗೆಗೆ ಆಯಾ ಸಮಾಜದ ಮುಖಂಡರೇ ಶ್ರಮಿಸಬೇಕು. ಆ ಮನೋಭೂಮಿಕೆ ಅವರಲ್ಲಿ ಬರಬೇಕು', ಒಕ್ಕೂಟ ಬೇಕು? ಬೇಡ ಎಂಬ ಪ್ರಶ್ನೆ ನಮ್ಮ ಎದುರಿಗಿಲ್ಲ. ಕರ್ನಾಟಕದಲ್ಲಿ ಅಹಿಂದ ಒಕ್ಕೂಟ ಸ್ಥಾಪನೆಗೂ ಮೊದಲೇ ಕೊಡಗಿನಲ್ಲಿ ಇದು ಕಾರ್ಯಾರಂಭ ಮಾಡಿತ್ತು. ಸೊಸೈಟಿ ಕಾಯ್ದೆಯ ಅಡಿಯು ನೋಂದಣಿಯಾಗಿದೆ. ಸಮಾಜದ ಪ್ರತಿನಿಧಿಸಿಕೊಂಡು, ಈ ಒಕ್ಕೂಟದಲ್ಲಿ ಯಾರು ಬೇಕಾದರೂ ಇರಬಹುದು. ಆದರೆ, ರಾಜಕೀಯ ವಿಷಯ ಪ್ರಸ್ತಾಪಿಸುವಂತೆ ಇಲ್ಲ' ಎಂದು ಕೋರಿದರು.
ಸಮಸ್ಯೆ ಎದುರಾಗಿದ್ದ ವೇಳೆ, ಅಹಿಂದ' ಒಕ್ಕೂಟವು ಬಹಳ ಪ್ರಬಲವಾಗಿ ಹೋರಾಟ ನಡೆಸಿದೆ. ಅದೇ ಕಾರಣಕ್ಕೆ ಹಲವು ಸಮಾಜಕ್ಕೆ ಸೌಲಭ್ಯಗಳೂ ಸಿಕ್ಕಿವೆ. ಒಂದು ಸ್ಕೂಟರ್ ಮೂಲಕ ಕೊಡಗಿನಾದ್ಯಂತ ಓಡಾಟ ನಡೆಸಿ ಸಂಘಟನೆ ಮಾಡಿದ್ದೆ. ವಾಸ್ತವ ಸ್ಥಿತಿ ಅರ್ಥ ಮಾಡಿಕೊಂಡು ಒಕ್ಕೂಟ ಒಳಗೆ ಕರೆತಂದಿದ್ದೆ. ಅಂದು ಅಭೂತಪೂರ್ವ ಸ್ಪಂದನೆ ಸಿಕ್ಕಿತ್ತು' ಎಂದು ಹೇಳಿದರು.
ಕೊಡಗಿನ 18 ಮೂಲ ನಿವಾಸಿಗಳಿಗೆ ಮೀಸಲಾತಿ ಸೌಲಭ್ಯವೇ ಇರಲಿಲ್ಲ. ನಮ್ಮ ಹೋರಾಟದ ಫಲವಾಗಿ ಎರಡು ಸಮುದಾಯಕ್ಕೆ ಮೀಸಲಾತಿ ಅಡಿ ಬಂದವು. ರವಿವರ್ಮ ಆಯೋಗದ ಎದುರು ಬಣ್ಣ ಹಾಗೂ ಹೆಗ್ಗಡೆ ಸಮುದಾಯದ ಸ್ಥಿತಿಗತಿ ವಿವರಿಸಿದ್ದ ಪರಿಣಾಮ ಪ್ರವರ್ಗ 2ರ ಅಡಿ ಸೇರಿದವು, ಶಿಕ್ಷಣ ಹಾಗೂ ಉದ್ಯೋಗದ ಮೀಸಲಾತಿ ಸಿಕ್ಕಿತ್ತು. ಆದರೆ, ರಾಜಕೀಯ ಮೀಸಲಾತಿ ಸಿಗಲಿಲ್ಲ. ಅದೇ ರೀತಿ ಅರಮನೆ ಕಾಯುವ ಕಾಪಾಳ ಜನಾಂಗ'ಕ್ಕೆ ಪ್ರವರ್ಗ 1ರ ಅಡಿ ಮೀಸಲಾತಿ ಸೌಲಭ್ಯ ಸಿಕ್ಕಿದೆ. ಅನೇಕ ಒಳ್ಳೆಯ ಕಾರ್ಯಕ್ರಮ ಮಾಡಿದ್ದೇವೆ. ಕೆಂಬಟ್ಟಿ ಜನಾಂಗದವರು ಪರಿಶಿಷ್ಟ ಜಾತಿ ಅಡಿ ಸಿಗುವ ಸೌಲಭ್ಯಕ್ಕೆ ಹೋರಾಟ ನಡೆಸಿದ್ದರೂ ಅವರಿಗೆ ಸ್ಥಾನಮಾನ ಸಿಕ್ಕಿಲ್ಲ. ಅದೇ ರೀತಿ ಕೇರಳದಲ್ಲಿ ಮಲಯ ಸಮಾಜದ ಬೇಡಿಕೆಯೂ ಈಡೇರಿಲ್ಲ ಎಂದು ಹೇಳಿದರು. ::: ವರದಿ ಬಿಡುಗಡೆ ಮಾಡಿ ::: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಗಣತಿಯನ್ನು ಶಾಶ್ವತ ಆಯೋಗವು ನಡೆಸಿದೆ. ಅದನ್ನು ಬಿಡುಗಡೆ ಮಾಡದಿದ್ದರೆ ಯಾವ ಜನಾಂಗದ ಸ್ಥಿತಿ ಹೇಗಿದೆ ಎಂಬುದು ತಿಳಿಯುವುದಿಲ್ಲ. ಅದನ್ನೂ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಇದೇ 18ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ' ಎಂದು ಟಿ.ಪಿ.ರಮೇಶ್ ಆಗ್ರಹಿಸಿದರು. ಶಾಶ್ವತ ಆಯೋಗದ ವರದಿ ತಯಾರಿಸಲು 158 ಕೋಟಿ ಖರ್ಚಾಗಿದೆ. 1 ಲಕ್ಷ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ರಮೇಶ್ ಮಾಹಿತಿ ನೀಡಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ಮಾತನಾಡಿ, ನಮ್ಮ ಬೇಡಿಕೆ ಈಡೇರಿಕೆ ಕುರಿತು ಇರುವ ಆವೇಶ ತಣ್ಣಗೆ ಆಗಬಾರದೆಂದು ಅತಿ ಶೀಘ್ರದಲ್ಲಿಯೇ ಬೃಹತ್ ಪ್ರತಿಭಟನೆ ಆಯೋಜಿಸಿದ್ದೇವೆ. 1991ರಲ್ಲಿ ಅಹಿಂದ ಒಕ್ಕೂಟವು ಸ್ಥಾಪನೆಯಾದ ಮೇಲೆ ಬೃಹತ್ ಪ್ರತಿಭಟನೆ ನಡೆದಿತ್ತು. ಅದಾದ ಮೇಲೆ ಅಂತಹ ಹೋರಾಟ ನಡೆದಿಲ್ಲ. ಅಂಥದ್ದೇ ಭೂಮಿಕೆ ಸೃಷ್ಟಿಯಾಗಬೇಕಿದೆ' ಎಂದು ಹೇಳಿದರು. ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ ಮಾತನಾಡಿ,
ಒಕ್ಕೂಟದ ಹೋರಾಟವು ಅನಿವಾರ್ಯ ಕಾರಣದಿಂದ ಸ್ಥಗಿತಗೊಂಡಿತ್ತು. ಮತ್ತೆ ಹೋರಾಟ ಆರಂಭವಾಗಿದೆ. ನಿವೇಶನ ರಹಿತರ, ಆಶ್ರಯ ರಹಿತರಿಗೆ ನ್ಯಾಯ ಕಲ್ಪಿಸುವ ಸಲುವಾಗಿ ಹೋರಾಟ ನಡೆಯುತ್ತಿದೆ’ ಎಂದು ತಿಳಿಸಿದರು.
ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರವು ದುಬಾರಿಯಾಗಿದೆ. ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಯಾರೊಬ್ಬರೂ ಪ್ರಶ್ನೆ ಮಾಡುವ ಪರಿಸ್ಥಿತಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಾಧ್ಯಕ್ಷ ಬೇಬಿ ಮ್ಯಾಥ್ಯು ಸ್ವಾಗತಿಸಿದರು. ಸಭೆಯಲ್ಲಿ ಸುರಯ್ಯ ಅಬ್ರಾರ್, ಕೆ.ಎಂ.ಬಿ.ಗಣೇಶ್, ಇಸ್ಮಾಯಿಲ್, ಲೀಲಾ ಶೇಷಮ್ಮ, ಡಿ.ಪಿ.ರಾಜೇಶ್, ಲಿಯಾಕತ್ ಅಲಿ, ಇಬ್ರಾಹಿಂ, ಸವಿತಾ ಸಮಾಜದ ರಂಗಯ್ಯ, ಪೀಟರ್, ಸುನಿಲ್, ಕೊಡಗು ನಾಯರ್ ಸಮಾಜದ ಕೆ.ಎಂ.ಬಿ.ಗಣೇಶ್, ಅಬ್ದುಲ್ಲಾ. ಮಿನಾಜ್ ಪ್ರವೀಣ್, ಪ್ರೇಮಾ, ಯಶೋಧ ಹಾಜರಿದ್ದರು.
::: ಅಹಿಂದ' ಒಕ್ಕೂಟದ ಸಭೆಯ ಪ್ರಮುಖ ನಿರ್ಣಯಗಳು ::: ಹೊಸದಾಗಿ ಮಹಿಳಾ ಸಂಘಟನೆ ಸ್ಥಾಪನೆ ಹೋಬಳಿ ಸಮಿತಿ ರಚನೆ, ಹೋಬಳಿ ಮಟ್ಟದಲ್ಲೂ ಸಭೆ ಶಾಶ್ವತ ಆಯೋಗದ ವರದಿ ಬಿಡುಗಡೆಗೆ ಆಗ್ರಹಿಸಿ ಫೆ.18ರಂದು ಪ್ರತಿಭಟನೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ರಾಜಕೀಯ ರಹಿತವಾಗಿ
ಅಹಿಂದ ಒಕ್ಕೂಟ’ ಬೆಳೆಸುವ ಉದ್ದೇಶ
ಬೇಡಿಕೆ ಈಡೇರಿಸಲು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರಿಗೆ ಮನವಿ ಸಲ್ಲಿಕೆ
::: ಸೇಂದಿ ಇಳಿಸಲು ಅವಕಾಶ ಕೊಡಿ :::
ಮಡಿಕೇರಿ: `ಕುಡಿಯ ಸಮಾಜದ ಕುಲಕಸುಬು ಬೈನೆ ಸೇಂದಿ ಇಳಿಸುವುದು. ಆದರೆ, ಕೊಡಗಿನಲ್ಲಿ ಬೈನೆ ಸೇಂದಿ ಇಳಿಸಲು ಅವಕಾಶವೇ ಇಲ್ಲವಾಗಿದೆ. ಅದೇ, ಕೊಡಗಿನ ಸಮೀಪದ ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಸೇಂದಿ ಇಳಿಸಿ, ಮಾರಾಟಕ್ಕೆ ಅವಕಾಶವಿದೆ. ಇದು ತಾರತಮ್ಯ ಅಲ್ಲವೇ? ನಮಗೂ ಸೇಂದಿ ಇಳಿಸಲು ಅವಕಾಶ ಬೇಕಿದೆ. ಜೊತೆಗೆ, ಅರಣ್ಯ ಹಕ್ಕು ಕಾಯ್ದೆ ಸಮಪರ್ಕವಾಗಿ ಅನುಷ್ಠಾನವಾಗಿಲ್ಲ. ಅರಣ್ಯ ವಾಸಿಗಳಿಗೆ ನನ್ನ ಅಂದಾಜಿನಂತೆ 20 ಸಾವಿರ ಎಕರೆ ಭೂಮಿ ಹಂಚಿಕೆ ಆಗಬೇಕಿತ್ತು. ಆದರೆ, ಆಗಿರುವುದು ಬರೀ 13 ಸಾವಿರ ಎಕರೆ ಮಾತ್ರ’ ಎಂದು ಕುಡಿಯ ಸಮಾಜದ ಮುಖಂಡ ಕುಡಿಯರ ಮುತ್ತಪ್ಪ ಹೇಳಿದರು.