ಹೊರ ಜಿಲ್ಲೆ-ರಾಜ್ಯಗಳಿಗೆ ಕರ್ತವ್ಯಕ್ಕೆ ತೆರಳುವ ನೌಕರರಿಗೆ ಅವಕಾಶ

ಮಡಿಕೇರಿ ಮೇ 1 : ಕೋವಿಡ್-19ರ ಲಾಕ್ಡೌನ್ ಸಂಬಂಧ ಕೇಂದ್ರ ಒಳಾಡಳಿತ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಸಿರುವ ಕಂಪೆನಿಗಳು, ಇಲಾಖೆಗಳು, ಕಾರ್ಖಾನೆ ಮತ್ತು ಇತರೆ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಅವರ ಕೆಲಸದ ಸ್ಥಳಗಳಿಗೆ ತೆರಳಲು ಒಂದು ಬಾರಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕೇಂದ್ರ ಒಳಾಡಳಿತ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಸಿರುವ ಕಂಪೆನಿಗಳು, ಇಲಾಖೆಗಳು, ಕಾರ್ಖಾನೆ ಮತ್ತು ಇತರೆ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಹಾಲಿ ಕೊಡಗು ಜಿಲ್ಲೆಯಲ್ಲಿದ್ದು, ಕರ್ತವ್ಯದ ಸ್ಥಳಗಳಿಗೆ (ಅಂದರೆ ರಾಜ್ಯದ ಇತರೆ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯದ ಸ್ಥಳಗಳಿಗೆ) ತೆರಳಲು ತೆರಳುವವರು ಸಂಬಂಧಪಟ್ಟ ಇಲಾಖೆ/ಕಂಪೆನಿ/ಕಾರ್ಖಾನೆ ಮತ್ತು ಇತರೆ ಕಚೇರಿಗಳಿಂದ ಕರ್ತವ್ಯಕ್ಕೆ ಮರು ಹಾಜರಾಗುವ ಬಗ್ಗೆ ಹೊರಡಿಸಲಾದ ಪತ್ರ ಮತ್ತು ಸದರಿ ಕಚೇರಿಯಿಂದ ನೀಡಲಾದ ಛಾಯಾಚಿತ್ರವಿರುವ ಗುರುತಿನ ಚೀಟಿಯನ್ನು ಕೊಡಗು ಜಿಲ್ಲೆಯ ಚೆಕ್ ಪೋಸ್ಟ್ಗಳಲ್ಲಿ ಹಾಜರುಪಡಿಸಿದಲ್ಲಿ ಮಾತ್ರ ತೆರಳಲು ಅವಕಾಶ ಮಾಡಿಕೊಡಲಾಗುವುದು. ಇದಕ್ಕೆ ಪ್ರತ್ಯೇಕ ಪಾಸ್/ಅನುಮತಿ ಪತ್ರದ ಅಗತ್ಯ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೇಲಿನಂತೆ ಕಲ್ಪಿಸಲಾದ ಅವಕಾಶ ಕೊಡಗು ಜಿಲ್ಲೆಯಿಂದ ಹೊರ ತೆರಳಲು ಮಾತ್ರ ಅನ್ವಯಿಸುತ್ತಿದ್ದು, ನೌಕರರು ಹೊರ ರಾಜ್ಯ/ಜಿಲ್ಲೆಗಳಿಗೆ ಪ್ರವೇಶಿಸಲು ಅವಕಾಶ ಇರುವ ಬಗ್ಗೆ ಪರಿಶೀಲಿಸಿಕೊಂಡು, ಪ್ರವೇಶಕ್ಕೆ ಪ್ರತ್ಯೇಕ ಅನುಮತಿ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ರಾಜ್ಯ/ಜಿಲ್ಲೆಗಳ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪತ್ರ/ನಿರಾಕ್ಷೇಪಣಾ ಪತ್ರ ಪಡೆದುಕೊಂಡು ತೆರಳುವುದು ಸಂಬಂಧಪಟ್ಟವರ ಜವಾಬ್ದಾರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಮೇಲ್ಕಂಡ ಅವಕಾಶವನ್ನು ಜಿಲ್ಲೆಯಿಂದ ಒಂದು ಬಾರಿ ತೆರಳಲು ಮಾತ್ರ ನೀಡಲಾಗಿದ್ದು, ಲಾಕ್ ಡೌನ್ ಅವಧಿ ಮುಕ್ತಾಯದವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಜಿಲ್ಲೆಗೆ ಹಿಂತಿರುಗಲು ಅವಕಾಶ ಇರುವುದಿಲ್ಲ. ಮತ್ತು ನೌಕರರೊಂದಿಗೆ ಕುಟುಂಬದ ಇತರೆ ಸದಸ್ಯರುಗಳು ಸಂಚರಿಸಲು ಅವಕಾಶ ಇರುವುದಿಲ್ಲ. ಕುಟುಂಬದ ಸದಸ್ಯರು ತೆರಳಬೇಕಾದಲ್ಲಿ ಸಂಬಂಧಪಟ್ಟ ರಾಜ್ಯ/ಜಿಲ್ಲೆಗಳನ್ನು ಪ್ರವೇಶಿಸಲು ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪತ್ರ/ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.