ರಾಜ್ಯ ತೊರೆಯದಂತೆ ಕಾರ್ಮಿಕರಿಗೆ ಮನವಿ
06/05/2020

ಬೆಂಗಳೂರು ಮೇ 5 : ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೊನಾ ಸೋಂಕು ಹತೋಟಿಯಲ್ಲಿದ್ದು, ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆರ್ಥಿಕ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಯಾವುದೇ ಅಡ್ಡಿಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಕೆಂಪುವಲಯ ಹೊರತುಪಡಿಸಿ ಇತರ ಕಡೆ ಆರಂಭಿಸಲಿದ್ದು ವಲಸೆ ಕಾರ್ಮಿಕರು ಗಾಳಿಸುದ್ದಿಗೆ ಕಿವಿಗೊಟ್ಟು ರಾಜ್ಯ ತೊರೆಯಬಾರದು ಎಲ್ಲರಿಗೂ ಉದ್ಯೋಗ ಹಾಗು ವಸತಿ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ನಗರದಲ್ಲಿಂದು ನಿರ್ಮಾಣ ವಲಯದ ಪ್ರಮುಖರ ಜೊತೆ ಸಭೆ ನಡೆಸಿದ ಅವರು, ಕೆಂಪು ವಲಯ ಹೊರತುಪಡಿಸಿ ಇತರೆಡೆ ವ್ಯಾಪಾರ, ವಹಿವಾಟು, ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಕೈಗಾರಿಕೆಗಳನ್ನು ಅಗತ್ಯ ಪ್ರಮಾಣದಲ್ಲಿ ಆರಂಭಿಸಬಹುದಾಗಿದ್ದು, ಇದಕ್ಕಾಗಿ ಸೂಕ್ತ ವೇದಿಕೆ ಸಿದ್ಧಪಡಿಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.