ಅನುಮಾನಾಸ್ಪದವಾಗಿ ಗರ್ಭಿಣಿ ಯುವತಿ ಸಾವು : ಮಡಿಕೇರಿಯ ಮಹದೇವಪೇಟೆಯಲ್ಲಿ ಘಟನೆ
06/05/2020

ಮಡಿಕೇರಿ ಮೇ 6 : ಗರ್ಭಿಣಿ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ಮಹದೇವಪೇಟೆಯಲ್ಲಿ ವಾಸವಿದ್ದ ಶಾಹುಲ್ ಎಂಬವರ ಪತ್ನಿ ಭಾಗ್ಯಶ್ರೀ (18)ಎಂಬಾಕೆ ಮೃತ ಯುವತಿ. ಶಾಹುಲ್ ನನ್ನು ನೋಂದಣಿ ಮೂಲಕ ವಿವಾಹವಾಗಿದ್ದ ಭಾಗ್ಯಶ್ರೀ ನಗರದ ಸಂಪಿಗೆಕಟ್ಟೆ ನಿವಾಸಿ ಯಶೋಧ ಎಂಬುವವರ ಪುತ್ರಿಯಾಗಿದ್ದಾರೆ.
ಬುಧವಾರ ಪೂರ್ವಾಹ್ನ 8.30ಕ್ಕೆ ತಾಯಿಗೆ ಕರೆ ಮಾಡಿ ಮಾತನಾಡಿದ್ದ ಭಾಗ್ಯಶ್ರೀ ಕೆಲವು ಗಂಟೆಗಳ ಬಳಿಕ ತನ್ನ ಮನೆಯ ಕೊಠಡಿಯಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಆಕೆಯ ಸಾವು ಸಹಜವಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ತಾಯಿ ಯಶೋದಾ ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣೆ ಪೊಲೀಸರು ನಗರದ ಚಿಕನ್ ಸ್ಟಾಲ್ ಒಂದರಲ್ಲಿ ಕೆಲಸಕ್ಕಿರುವ ಶಾಹುಲ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.