“ಭಾರತ” ಅಥವಾ “ಹಿಂದೂಸ್ಥಾನ” ವಿಚಾರಣೆ

ನವದೆಹಲಿ ಮೇ 29 : ಸಂವಿಧಾನವನ್ನು ತಿದ್ದುಪಡಿ ಮಾಡಿ “ಇಂಡಿಯಾ” ಎಂಬ ಹೆಸರನ್ನು “ಭಾರತ” ಅಥವಾ “ಹಿಂದೂಸ್ಥಾನ” ಎಂದು ಬದಲಾಯಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿರುವ ಮನವಿಯನ್ನು ಜೂನ್ 2 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಸಮ್ಮತಿಸಿದೆ.
“ಒಕ್ಕೂಟದ ಹೆಸರು ಮತ್ತು ಭೂಪ್ರದೇಶದೊಂದಿಗೆ ವ್ಯವಹರಿಸುವ ಸಂವಿಧಾನದ 1 ನೇ ಪರಚ್ಚೇಧದ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಮನವಿಯಲ್ಲಿ ಕೋರಲಾಗಿದೆ.ನಮ್ಮದೇ ರಾಷ್ಟ್ರೀಯತೆಯಲ್ಲಿ ಹೆಮ್ಮೆಯ ಭಾವವನ್ನು ಮೂಡಿಸುವಂತೆ “ಇಂಡಿಯಾ” ಎನ್ನುವ ಬದಲು “ಬಾರತ” ಅಥವಾ “ಹಿಂದೂಸ್ಥಾನ” ಎಂದು ದೇಶವನ್ನು ಸಂಬೋಧಿಸುವಂತೆ” ಮನವಿ ಕೇಳಿದೆ.
ಶುಕ್ರವಾರಈ ಅರ್ಜಿ ಸುಪ್ರೀಂ ಕೋರ್ಟ್ ಮುಂದೆ ಬಂದಿದ್ದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಎ ಬೊಬ್ಡೆ ಲಭ್ಯವಿಲ್ಲದ ಕಾರಣ ಅದನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.ಸರ್ವೋಚ್ಚ ನ್ಯಾಯಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ ನೋಟಿಸ್ನ ಪ್ರಕಾರ, ಈ ವಿಷಯವನ್ನು ಜೂ.2 ರಂದು ಸಿಜೆಐ ನೇತೃತ್ವದ ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು.
ದೆಹಲಿ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಮನವಿಯಲ್ಲಿ, ಇಂತಹ ತಿದ್ದುಪಡಿಯು “ಈ ದೇಶದ ನಾಗರಿಕರು ವಸಾಹತುಶಾಹಿ ಭೂತಕಾಲದಿಂದ ಹೊರಬರುವುದನ್ನು ಖಚಿತಪಡಿಸಲಿದೆ” ಎಂದು ಹೇಳಿದ್ದಾರೆ.