ಸಂಕಷ್ಟದಲ್ಲಿರುವವರಿಗೆ ಶಾಸಕರು ಸ್ಪಂದಿಸಲಿ : ಕೊಡಗು ಜೆಡಿಎಸ್ ಒತ್ತಾಯ

ಮಡಿಕೇರಿ ಜೂ.30 : ಕೊರೋನಾ ಲಾಕ್ಡೌನ್ ಸಡಿಲಿಕೆ ನಂತರ ಕೊಡಗು ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸೀಲ್ಡೌನ್ ಪ್ರದೇಶಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು, ಇಲ್ಲಿನ ನಿವಾಸಿಗಳ ಸಂಕಷ್ಟಕ್ಕೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲವೆಂದು ಆರೋಪಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಜಿಲ್ಲೆಯ ಶಾಸಕರುಗಳು ನೊಂದವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ.
ಸೀಲ್ಡೌನ್ ಆಗಿರುವ ಸೋಮವಾರಪೇಟೆಯ ಶಿರಂಗಾಲ ಗ್ರಾಮದ ನಿವಾಸಿಗಳಿಗೆ ಜೆಡಿಎಸ್ ವತಿಯಿಂದ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸೋಂಕಿತರು ಪತ್ತೆಯಾದ ತಕ್ಷಣ ಅಧಿಕಾರಿಗಳು ಏಕಾಏಕಿ ಇಡೀ ಬಡವಾಣೆಯನ್ನೇ ಸೀಲ್ಡೌನ್ ಮಾಡಿ ನಿವಾಸಿಗಳು ಇತರ ಪ್ರದೇಶಗಳ ಸಂಪರ್ಕವನ್ನೇ ಹೊಂದಂತೆ ಮಾಡುತ್ತಿದ್ದಾರೆ. ಇದರಿಂದ ಪ್ರತಿದಿನ ದುಡಿದು ತಿನ್ನುವ ಕೂಲಿ ಕಾರ್ಮಿಕರು, ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತ್ತಾಗಿದೆ. ಸೀಲ್ಡೌನ್ ಪ್ರದೇಶಗಳಿಗೆ ಉಚಿತ ದಿನಸಿ ಸಾಮಾಗ್ರಿಗಳನ್ನು ನೀಡುವುದಿಲ್ಲವೆಂದು ಸರ್ಕಾರ ಹಟ ಹಿಡಿದು ಕುಳಿತ್ತಿದೆ. ನಿತ್ಯ ಬಳಕೆಯ ಸಾಮಾಗ್ರಿಗಳನ್ನು ಅಂಗಡಿಯಿಂದ ಖರೀದಿಸಿಕೊಂಡು ಬರಲು ಕೂಡ ಅವಕಾಶವೇ ನೀಡುತ್ತಿಲ್ಲ ಎಂದು ಆರೋಪಿಸಿದ ಗಣೇಶ್, ಜನ ಹಸಿವಿನಿಂದ ಸಾಯಬೇಕೆ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿಟ್ಟಿರುವ ಹಣವನ್ನು ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರವನ್ನು ನೀಡಲು ವಿನಿಯೋಗಿಸುವ ಮೂಲಕ ಸರ್ಕಾರ ಮೊದಲು ಬಡವರ ಜೀವ ಉಳಿಸಲು ಮುಂದಾಗಲಿ ಎಂದು ಒತ್ತಾಯಿಸಿದರು.
ಇತರ ಜಿಲ್ಲೆಗಳ ಶಾಸಕರುಗಳು ತಮ್ಮ ತಮ್ಮ ಆಸ್ತಿಯನ್ನೇ ಅಡವಿಟ್ಟು ಬಡವರ ಸೇವೆಯಲ್ಲಿ ತೊಡಗಿದ್ದಾರೆ. ಆದರೆ ಕೊಡಗಿನ ಶಾಸಕರುಗಳು ಜನರ ಸಂಕಷ್ಟವನ್ನೇ ಗಂಭೀರವಾಗಿ ಪರಿಗಣಿಸಿಲ್ಲ. ಸೀಲ್ಡೌನ್ ಪ್ರದೇಶಗಳ ನಿವಾಸಿಗಳ ಸಮಸ್ಯೆಗಳಿಗೆ ಖುದ್ದು ಸ್ಪಂದಿಸುವ ಬದಲು ಫೋನ್ ಮೂಲಕ ಮಾಹಿತಿ ಪಡೆಯುತ್ತಿರುವ ಶಾಸಕರುಗಳು ಬಡವರ ಕೂಗನ್ನು ಲಘುವಾಗಿ ಪರಿಗಣಿಸಿದ್ದಾರೆÉ ಎಂದು ಟೀಕಿಸಿದರು.
ಕಳೆದ 25 ವರ್ಷಗಳಿಂದ ಗೆಲ್ಲಿಸುತ್ತಲೇ ಬಂದಿರುವ ಜಿಲ್ಲೆಯ ಮತದಾರರ ನೋವಿಗೆ ಸ್ಪಂದಿಸುವ ದೊಡ್ಡ ಗುಣವನ್ನು ಇವರು ತೋರಿಲ್ಲ. ತಮ್ಮ ಸ್ವಂತ ಹಣದ ಮೂಲಕ ಸಹಾಯವನ್ನೂ ಮಾಡಿಲ್ಲವೆಂದು ಗಣೇಶ್ ಆರೋಪಿಸಿದರು. ಜಿಲ್ಲೆಯ ಜನರ ಮೇಲೆ ಶಾಸಕರುಗಳಿಗೆ ನೈಜ ಕಾಳಜಿ ಇದ್ದರೆ 20 ಕ್ಕೂ ಹೆಚ್ಚು ಸೀಲ್ಡೌನ್ ಪ್ರದೇಶಗಳ ನಿವಾಸಿಗಳಿಗೆ ಸರ್ಕಾರದ ಮೂಲಕವೇ ಉಚಿತವಾಗಿ ಆಹಾರ ಸಾಮಾಗ್ರಿಗಳನ್ನು ಕೊಡಿಸಲಿ ಎಂದು ಒತ್ತಾಯಿಸಿದರು.
ಮಡಿಕೇರಿಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳು ಮಿತಿ ಮೀರುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ರೋಗಿಗಳನ್ನು ಉಳಿಸುವ ಮತ್ತು ಸೋಂಕು ವ್ಯಾಪಿಸದಂತೆ ತಡೆಯುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.
::: ಶುಕ್ರವಾರ ಪ್ರತಿಭಟನೆ :::
ಸೀಲ್ಡೌನ್ ನಿವಾಸಿಗಳಿಗೆ ಸರ್ಕಾರದ ವತಿಯಿಂದಲೇ ಉಚಿತ ದಿನಸಿ ಸಾಮಾಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿ ಮತ್ತು ಶಾಸಕರುಗಳ ನಿರ್ಲಕ್ಷ್ಯವನ್ನು ಖಂಡಿಸಿ ಜು.3 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜೆಡಿಎಸ್ ವತಿಯಿಂದ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಯಲಿದೆ ಎಂದು ಗಣೇಶ್ ಇದೇ ಸಂದರ್ಭ ತಿಳಿಸಿದರು.
ಜಿ.ಪಂ ಸದಸ್ಯ ಪುಟ್ಟರಾಜು, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಭಾಷ, ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನೀಲ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಪಾಪಣ್ಣ, ಶನಿವಾರಸಂತೆ ಜಮಾತ್ ಅಧ್ಯಕ್ಷ ಅಮಿರ್ ಸಾಬ್, ಅಬ್ದುಲ್ ರಜಾಕ್, ಶನಿವಾರಸಂತೆ ನಗರಾಧ್ಯಕ್ಷ ಮೊಯಿದು ಮತ್ತಿತರರು ಈ ಸಂದರ್ಭ ಹಾಜರಿದ್ದರು.