ಜಲಜೀವನ ಅಭಿಯಾನ ಯಶಸ್ವಿ

24/07/2020

ನವದೆಹಲಿ ಜು.24 : ದೇಶದಲ್ಲಿ ಪ್ರತಿದಿನ ಒಂದು ಲಕ್ಷ ಜನರಿಗೆ ನೀರಿನ ಸಂಪರ್ಕ ಒದಗಿಸಲಾಗುತ್ತಿದ್ದು, ಜಲಜೀವನ ಅಭಿಯಾನದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಣಿಪುರ ಜಲ ಪೂರೈಕೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಇಂದು ಪ್ರತಿದಿನ ಸುಮಾರು 1 ಲಕ್ಷ ಜನರಿಗೆ ನೀರಿನ ಸಂಪರ್ಕವನ್ನು ದೇಶಾದ್ಯಂತ ನೀಡಲಾಗುತ್ತಿದೆ.ಇದರಿಂದ ಅನೇಕ ತಾಯಂದಿರಿಗೆ, ಸಹೋದರಿಯರಿಗೆ ನೀರಿಗೆ ಏನು ಮಾಡುವುದು, ಎಲ್ಲಿಗೆ ಹೋಗುವುದು ಎಂಬ ಚಿಂತೆ ದೂರಾಗಿದೆ ಎಂದರು.
ಜಲ ಜೀವನ ಅಭಿಯಾನವನ್ನು ಒಂದು ಸಾಮೂಹಿಕ ಚಳವಳಿಯನ್ನಾಗಿ ಮಾಡಿಕೊಂಡಿದ್ದಕ್ಕೆ ಇದು ಸಾಧ್ಯವಾಗಿದೆ. ಗ್ರಾಮಗಳಲ್ಲಿ ಜನರು ಮತ್ತು ಜನಪ್ರತಿನಿಧಿಗಳು ಎಲ್ಲಿ ಪೈಪ್ ಹಾಕಬೇಕು, ಎಲ್ಲಿ ನೀರು ಸಿಗಬಹುದು, ಟ್ಯಾಂಕ್ ಎಲ್ಲಿ ಕಟ್ಟಬಹುದು, ಎಷ್ಟು ಬಜೆಟ್ ಬೇಕಾಗಬಹುದು ಎಂದು ನಿರ್ಧರಿಸುತ್ತಾರೆ. ಇದರಿಂದ ನೀರಿನ ಪೂರೈಕೆ ಚೆನ್ನಾಗಿ ಒದಗಿಸಲು ಸಾಧ್ಯವಾಗಿದೆ ಎಂದರು.