ಟಿಂಬರ್ ವ್ಯವಹಾರದಲ್ಲಿನ ನಷ್ಟದ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಲಿ : ಕೊಡಗು ಟಿಂಬರ್ ವ್ಯಾಪಾರಿಗಳ ಸಂಘ ಒತ್ತಾಯ

29/07/2020

ಪೊನ್ನಂಪೇಟೆ, ಜು.29: ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಟಿಂಬರ್ ಸಾಗಾಟಕ್ಕೆ ಜಿಲ್ಲಾಡಳಿತ ಹೇರಿರುವ ನಿರ್ಬಂಧವನ್ನು ನಿಗದಿತ ಅವಧಿಗಿಂತ ಮುಂದೆ ವಿಸ್ತರಿಸಬಾರದು. ಈಗಾಗಲೇ ಭಾರಿ ನಷ್ಟ ಅನುಭವಿಸಿರುವ ಟಿಂಬರ್ ಕ್ಷೇತ್ರದ ವ್ಯವಹಾರದಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಕೊಡಗು ಟಿಂಬರ್ ವ್ಯಾಪಾರಿಗಳ ಮತ್ತು ಟಿಂಬರ್ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಎಂ.ಎ. ಸಮೀರ್ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಳೆದ 4 ತಿಂಗಳಿನಿಂದ ಕೋವಿಡ್-19ರ ತಲ್ಲಣದಿಂದ ಟಿಂಬರ್ ಕ್ಷೇತ್ರ ಭಾರಿ ನಷ್ಟ ಅನುಭವಿಸಿದೆ. ಇದೀಗ ಜಿಲ್ಲಾಡಳಿತ ಮಳೆಗಾಲದಲ್ಲಿ ಜಿಲ್ಲೆಯಿಂದ ಟಿಂಬರ್ ಸಾಗಿಸುವುದನ್ನು ಆಗಸ್ಟ್ 8ರವರೆಗೆ ನಿಷೇಧಿಸಿದೆ. ಇದು ಮತ್ತೊಂದು ರೀತಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಆದರೆ ಈಗಾಗಲೇ ಜಿಲ್ಲಾಡಳಿತ ನಿಗದಿಪಡಿಸಿರುವ ದಿನಾಂಕದ ನಂತರ ಯಾವುದೇ ಕಾರಣಕ್ಕೂ ನಿರ್ಬಂಧವನ್ನು ವಿಸ್ತರಿಸಬಾರದು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಕೋವಿಡ್-19ರ ನಿಯಂತ್ರಣಕ್ಕಾಗಿ ಸರಕಾರ ಜಾರಿಗೊಳಿಸಿರುವ ಲಾಕ್ ಡೌನ್ ನಿಯಮಾವಳಿಗೆ ಎಲ್ಲರಂತೆ ತೀವ್ರ ಅನಾನುಕೂಲಗಳ ನಡುವೆಯೂ ಕೊಡಗು ಟಿಂಬರ್ ವ್ಯಾಪಾರಿಗಳ ಮತ್ತು ಟಿಂಬರ್ ಲಾರಿ ಮಾಲೀಕರ ಸಂಘವು ಪೂರ್ಣ ಸಹಕಾರವನ್ನು ನೀಡಿದೆ ಎಂದು ಹೇಳಿದ ಸಮೀರ್ ಅವರು, ಕಳೆದ ಮಾರ್ಚ್ ತಿಂಗಳಿನಿಂದ ಆರಂಭಗೊಂಡ ಲಾಕ್ ಡೌನ್ ನಿಂದಾಗಿ ಕೊಡಗಿನ ಟಿಂಬರ್ ವ್ಯಾಪಾರಿಗಳಿಗೆ ಕೋಟ್ಯಾಂತರ ಹಣ ನಷ್ಟವಾಗಿರುತ್ತದೆ. ಆದರೂ ಕೊರೋನಾ ಮುಕ್ತ ವಾತಾವರಣಕ್ಕಾಗಿ ನಾವು ಎಲ್ಲಾ ತೊಂದರೆಗಳನ್ನು ಸಹಿಸಿಕೊಂಡು ನಿಯಮಾವಳಿಗಳನ್ನು ಪಾಲಿಸುವುದರ ಮೂಲಕ ಪೂರ್ಣವಾಗಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸರಕಾರದ ಅನುಮತಿ ಪಡೆದು ನಡೆಸುವ ಟಿಂಬರ್ ವ್ಯವಹಾರ ಸರಕಾರಕ್ಕೆ ಹೆಚ್ಚು ತೆರಿಗೆ ಸಂಗ್ರಹವಾಗುವ ಪ್ರಮುಖ ಮೂಲವಾಗಿದೆ. ಈ ನಿರ್ಬಂಧದಿಂದಾಗಿ ಕೊಡಗಿನ ಸಾಮಾನ್ಯ ರೈತರ ಮತ್ತೊಂದು ಆದಾಯದ ಮೂಲವಾಗಿರುವ ಸಿಲ್ವರ್ ಮರಗಳ ಸಾಗಾಟ ಕೂಡ ಇದೀಗ ಸಾಧ್ಯವಾಗುತ್ತಿಲ್ಲ. ಹಲವಾರು ರೈತರು ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ತೋಟದಲ್ಲಿ ಬೆಳೆದಿದ್ದ ಸಿಲ್ವರ್ ಮರಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಇದನ್ನು ಕಳೆದ ನಾಲ್ಕು ತಿಂಗಳಿಂದ ಸಾಗಾಟ ಮಾಡಲು ಸಾಧ್ಯವಾಗದೆ ತೋಟದಲ್ಲಿ ಬಿದ್ದಿದೆ. ಇದರಿಂದಾಗಿ ಮಾರಾಟ ಮಾಡಿದ ರೈತರು ಮತ್ತು ಖರೀದಿಸಿದ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ. ಈ ಕಾರಣದಿಂದ ವ್ಯಾಪಾರಿಗಳಿಗಿಂತ ರೈತರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಸಮೀರ್ ಅವರು ಒತ್ತಾಯಿಸಿದ್ದಾರೆ.

ವ್ಯಾಪಾರಿಗಳು ಹಣ ನೀಡಿ ಖರೀದಿಸಿದ ಮರಗಳನ್ನು ಹಲವು ತಿಂಗಳ ಹಿಂದೆಯೇ ಕಡಿಯಲಾಗಿದ್ದು, ಅದನ್ನು ಈ ಕೂಡಲೇ ಸಾಗಿಸುವುದು ಅನಿವಾರ್ಯವಾಗಿದೆ. ವಿವಿಧ ಮೂಲಗಳಿಂದ ಸಾಲ ಮಾಡಿ ಕೋಟ್ಯಾಂತರ ಮೊತ್ತದ ಹಣವನ್ನು ಬಂಡವಾಳವಾಗಿ ಹೂಡಿ ಈಗಾಗಲೇ ಕಡಿದ ಮರಗಳನ್ನು ಕೂಡಲೇ ಸಾಗಾಟ ಗೊಳಿಸದಿದ್ದರೆ ಈ ಮರಗಳೆಲ್ಲಾ ನಿಷ್ಪ್ರಯೋಜಕವಾಗಿ ಹೂಡಿರುವ ಎಲ್ಲಾ ಹಣವು ನೀರಿನಲ್ಲಿ ಪೋಲಾಗುತ್ತದೆ. ಹೀಗಾದರೆ ಟಿಂಬರ್ ವ್ಯಾಪಾರಿಗಳು ಭಾರಿ ಮೊತ್ತದ ನಷ್ಟವನ್ನು ಮತ್ತೆ ಅನುಭವಿಸಬೇಕಾಗುತ್ತದೆ ಎಂದು ಸಮೀರ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಕಾರ್ಮಿಕರು ಹಿಂದಿನಿಂದಲೂ ಮರಗೆಲಸವನ್ನು ಅವಲಂಬಿಸಿ ಬದುಕು ಸಾಗಿಸುತ್ತಿದ್ದರು. ಇವರು ಕಳೆದ 4 ತಿಂಗಳುಗಳಿಂದ ಕೆಲಸವಿಲ್ಲದೆ ತೀವ್ರ ರೀತಿಯ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಟಿಂಬರ್ ಲಾರಿ ಮಾಲೀಕರು ತಮ್ಮ ಲಾರಿಯ ಸಾಲದ ತಿಂಗಳ ಕಂತನ್ನು ಕೂಡ ಈ ಸಂಕಷ್ಟದಿಂದಾಗಿ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆ ವಿವರಿಸಿದ ಸಮೀರ್ ಅವರು, ನ್ಯಾಯಮಾರ್ಗದಲ್ಲಿ ವ್ಯಾಪಾರ ನಡೆಸುತ್ತಿರುವ ಟಿಂಬರ್ ವ್ಯಾಪಾರಿಗಳಿಗೆ ಸರಕಾರದ ಈ ನಿರ್ಬಂಧದಿಂದಾಗಿ ಹೆಚ್ಚು ತೊಂದರೆಯಾಗುತ್ತಿದೆ. ಜೊತೆಗೆ ಸರಕಾರಕ್ಕೂ ಕಟ್ಟಬೇಕಾಗಿದ್ದ ತೆರಿಗೆಯು ನಷ್ಟವಾಗುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಳೆಗಾಲದಲ್ಲಿ ಕೊಡಗಿನಿಂದ ಮರ ಸಾಗಾಟಕ್ಕೆ ಜಿಲ್ಲಾಡಳಿತ ಹೇರುವ ನಿರ್ಬಂಧ ಹೆಚ್ಚು ಮಳೆಯಾಗುವ ಸಂದರ್ಭದಲ್ಲಿ ಮಾತ್ರ ವೈಜ್ಞಾನಿಕವಾಗುತ್ತದೆ. ಮಳೆ ಇಲ್ಲದ ಸಂದರ್ಭದಲ್ಲಿ ಇದರಿಂದ ಏನೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಇನ್ನಾದರೂ ಮಳೆಯ ಪರಿಸ್ಥಿತಿಯನ್ನು ನೋಡಿ ನಿರ್ಬಂಧ ಜಾರಿಗೊಳಿಸಿದರೆ ಟಿಂಬರ್ ಸಾಗಾಟಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟ ಸಮೀರ್ ಅವರು, ಆಗಸ್ಟ್ 8ರ ನಂತರ ಯಾವುದೇ ರೀತಿಯ ನಿರ್ಬಂಧವನ್ನು ವಿಧಿಸಬಾರದು. ಜಿಲ್ಲೆಯ ಆನೆಚೌಕೂರು, ಮಾಲ್ದಾರೆ ಮತ್ತು ಕುಶಾಲನಗರ ಗಡಿ ಗೇಟ್ ಮೂಲಕ ಟಿಂಬರ್ ಸಾಗಾಟಕ್ಕೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.