ಬುಡಕಟ್ಟು ಜನಾಂಗಗಳ ಹಕ್ಕುಗಳ ದಿನಾಚರಣೆ : ಮಡಿಕೇರಿಯಲ್ಲಿ ಸಿಎನ್ಸಿ ಧರಣಿ

ಮಡಿಕೇರಿ ಆ.9 : ಕೊಡವ ನ್ಯಾಷನಲ್ ಕೌನ್ಸಿಲ್(ಸಿ.ಎನ್.ಸಿ.) ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಭಾನುವಾರ ‘ವಿಶ್ವ ಆದಿಮಸಂಜಾತ ಬುಡಕಟ್ಟು ಜನಾಂಗಗಳ ಹಕ್ಕುಗಳ ದಿನಾಚರಣೆ’ಯ ಹಿನ್ನೆಲೆ ಸತ್ಯಾಗ್ರಹ ನಡೆಯಿತು.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಧರಣಿ ಸತ್ಯಾಗ್ರಹ ನಡೆಸಿ, ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ, ಕೇಂದ್ರ ಗೃಹ ಮಂತ್ರಿ, ರಾಷ್ಟ್ರಪತಿ, ಶ್ರೀ ರಮನಾಥ್ ಕೋವಿಂದ್, ಉಪರಾಷ್ಟ್ರಪತಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಪ್ರಮುಖವಾಗಿ ಕೊಡವ ಭೂ-ರಾಜಕೀಯ ಆಶೋತ್ತರವಾದ ಸ್ವಯಂ-ನಿರ್ಣಯ ಹಕ್ಕಿನ ಸ್ವಾಯತ್ತ ಕೊಡವ ಲ್ಯಾಂಡ್ಗೆ ಆಗ್ರಹಿಸಿರುವುದರೊಂದಿಗೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ವಿಧಿ 340/342 ವಿಧಿ ಪ್ರಕಾರ ಬುಡಕಟ್ಟು ಕುಲವೆಂದು ಪರಿಗಣಿಸುವಂತೆ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ಗೆ ಸೆರ್ಪಡೆಗೊಳಿಸಬೇಕೆಂದು ಮತ್ತು ಅತೀ ಸೂಕ್ಷ್ಮಾತಿ ಸೂಕ್ಷ್ಮ ಜನಾಂಗೀಯ ಅಲ್ಪ ಸಂಖ್ಯಾತ ಸಾಂಸ್ಕøತಿಕ ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟ್ (ಪಟ್ಟಿಯಲ್ಲಿ) ಸೇರಿಸಬೇಕೆಂದು ಒತ್ತಾಯಿಸಲಾಗಿದೆ.
ಸತ್ಯಾಗ್ರಹದಲ್ಲಿ ಪುಲ್ಲೇರ ಕಾಳಪ್ಪ, ಮನೋಟಿರ ಚಿಣ್ಣಪ್ಪ, ನಂದಿನೆರವಂಡ ವಿಜು, ಪುದಿಯೊಕ್ಕಡ ಕಾಶಿ, ಪುಟ್ಟಿಚಂಡ ಡಾನ್ ದೇವಯ್ಯ, ಮಂಡೇಪಂಡ ಮನೋಜ್, ಅಳಮಂಡ ಜೈ, ನಂದಿನೆರವಂಡ ಅಪ್ಪಯ್ಯ, ಮೇದುರ ಕಂಠಿ ನಾಣಯ್ಯ, ನಂದಿನೆರವಂಡ ಅಯ್ಯಣ್ಣ, ಬಾದುವಂಡ ವಿಜು ಮುಂತಾದವರು ಭಾಗವಹಿಸಿದ್ದರು.