ಐದು ದಿನಗಳ ಬಳಿಕ ನಾರಾಯಣ ಆಚಾರ್ ಮೃತದೇಹ ಪತ್ತೆ
11/08/2020

ಮಡಿಕೇರಿ ಆ. 11 : ಆ 6 ರಂದು ಮಡಿಕೇರಿ ತಾಲ್ಲೂಕು ಭಾಗಮಂಡಲದ ತಲಕಾವೇರಿಯಲ್ಲಿ ಉಂಟಾದ ಭೂಕುಸಿತದಿಂದ 05 ಜನರು ಕಣ್ಮರೆಯಾಗಿದ್ದರು. ಈ ಸಂಬಂಧ ಜಿಲ್ಲಾ ಪ್ರಕೃತಿ ವಿಕೋಪ ತಂಡ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್,, ಅರಣ್ಯ ಮತ್ತು ಅಗ್ನಿಶಾಮಕ ಇಲಾಖಾ ತಂಡಗಳು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದರು.
ಮಂಗಳವಾರವು ಸಹ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ಇಲಾಖಾ ತಂಡಗಳು ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿದ್ದು, ಕಾಣೆಯಾದವರ ಪೈಕಿ ನಾರಾಯಣ ಆಚಾರ್ ಎಂಬುವವರ ಮೃತ ದೇಹವು ಅವರ ಮನೆ ಇದ್ದ ಪ್ರದೇಶದಿಂದ ಸುಮಾರು 02.50 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಕಾಣೆಯಾದ 05 ಜನರ ಪೈಕಿ 02 ಜನರ ಮೃತದೇಹಗಳು ಪತ್ತೆಯಾಗಿದೆ. ಉಳಿದ ಮೂವರ ಹುಡುಕಾಟಕ್ಕೆ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
