ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೆಸಿಟಿಯು ನಿಂದ ಪ್ರತಿಭಟನೆ

ಸೋಮವಾರಪೇಟೆ ಂ. 11 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೆಸಿಟಿಯು(ಜಾಯಿಂಟ್ ಕಮಿಟಿ ಆಫ್ ಟ್ರೇಡ್ ಯೂನಿಯನ್) ತಾಲೂಕು ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕ ವಿರೋಧಿ, ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು. ಹೋರಾಟ ನಡೆಸುವ ಕಾರ್ಯಕರ್ತರ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಸಿಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜನವಿರೋಧಿ ಸರಕಾರಗಳ ವಿರುದ್ದ ಕ್ವಿಟ್ ಇಂಡಿಯಾ ಚಳುವಳಿಯಂತೆ ಭಾರತ ರಕ್ಷಿಸಿ ಆಂದೋಲನ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಹೇಳಿದರು.
ಕೇಂದ್ರ ಸರಕಾರ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾಯ್ದೆ 2008ರ ಅನ್ವಯ ಪ್ರತಿವರ್ಷ 10ಸಾವಿರ ಕೋಟಿ ರೂ, ವರ್ತುಲ ನಿಧಿ ಸ್ಥಾಪಿಸಬೇಕು. ರಕ್ಷಣಾ ವಲಯ, ರಕ್ಷಣಾ ಉಪಕರಣ ಕಾರ್ಖಾನೆ, ಸಾರಿಗೆ, ರೈಲ್ವೆ, ಜೀವವಿಮಾ ನಿಗಮ, ಬ್ಯಾಂಕ್, ಬಂದರು, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು. ನೂತನ ಶಿಕ್ಷಣ ನೀತಿ ರದ್ದಾಗಬೇಕು. ಅಸಂಘಟಿತ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಶಿಕ್ಷಣದ ಖಾಸಗೀಕರಣ ನಿಲ್ಲಬೇಕು. ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರದಲ್ಲಿ ಸರಕಾರದ ಹೂಡಿಕೆ ಹೆಚ್ಚಿಸಬೇಕು. ಇತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಶಿರಸ್ತೇದಾರ್ ಮಹೇಶ್ ಅವರ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಿದರು.
ಪತ್ರಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ, ಕಾರ್ಯದರ್ಶಿ ಪಿ.ಟಿ.ಸುಂದರ, ಸಂಚಾಲಕ ಶೇಷಪ್ಪ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಭಾಗೀರಥಿ, ಕಾರ್ಯದರ್ಶಿ ಸಾವಿತ್ರಿ, ಗ್ರಾಮ ಪಂಚಾಯಿತಿ ನೌಕರರ ಸಂಘದ ಕಾರ್ಯದರ್ಶಿ ಪಿ.ಉಮೇಶ್, ಕಾರ್ಮಿಕ ಮುಖಂಡರುಗಳಾದ ಹೂವಯ್ಯ, ಮಂಜುನಾಥ್, ನವೀನ್, ಮುತ್ತ ಮತ್ತಿತರರು ಇದ್ದರು.
