ನಿಡ್ತ ಮೀಸಲು ಅರಣ್ಯದಲ್ಲಿ ಜಿಂಕೆ ಬೇಟೆ : ಆರೋಪಿ ಬಂಧನ
12/08/2020

ಮಡಿಕೇರಿ ಆ. 12 : ಸೋಮವಾರಪೇಟೆ ತಾಲ್ಲೂಕಿನ ನಿಡ್ತ ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಜಿಂಕೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಾಣಾವರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಪಟ್ಟಣ ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಾಡೂರು ಗ್ರಾಮದ ಈರಪ್ಪ ಬಂದಿತ ಆರೋಪಿಯಾಗಿದ್ದು, ಜಿಂಕೆಯನ್ನು ಭೇಟೆಯಾಡಿ ಮಾಂಸವನ್ನು ಮನೆಯಲ್ಲಿ ಒಣಗಿಸಿಟ್ಟ ಖಚಿತ ಮಾಹಿತಿಯನ್ನು ಪಡೆದ ಬಾಣಾವರ ಶಾಖೆಯ ಡಿಆರ್ಎಫ್ಒ ಪುನೀತ್ ನೇತೃತ್ವದ ತಂಡ ಆರೋಪಿ ಮನೆಗೆ ಧಾಳಿ ನಡೆಸಿದೆ.
ಮನೆಯೊಳಗೆ ಸಾಂಬಾರು ಮಾಡಿದ್ದ ಮಾಂಸ ಹಾಗೂ ಪ್ಲಾಸ್ಟಿಕ್ ಕವರ್ನಲ್ಲಿ ಸಂಗ್ರಹಿಸಿದ್ದ ಒಣಗಿದ ಮಾಂಸವನ್ನು ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ವಲಯ ಅರಣ್ಯಾಧಿಕಾರಿ ಶಮಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ಭೀಮನಗೌಡ ಬಿರಾದರ, ವರುಣ್ ರಾಜ್, ಸಿಬ್ಬಂದಿಗಳಾದ ಅಂತೋಣಿ, ವೈ. ಈರಪ್ಪ, ವೈ.ಎಸ್. ಅಪ್ಪಯ್ಯ ಭಾಗವಹಿಸಿದ್ದರು.
