ಸಂಧ್ಯಾ ಸುರಕ್ಷಾ ಯೋಜನೆಯಡಿ 25 ಸಾವಿರ ಮಂದಿಗೆ ಮಾಸಾಶನ

24/08/2020

ಮಡಿಕೇರಿ ಆ.24 : ಸರ್ಕಾರ ಅಸಹಾಯಕ, ಅಶಕ್ತ ವ್ಯಕ್ತಿಗಳಿಗಾಗಿ ಹಾಗೂ ನಿರ್ಗತಿಕ ವಿಧವೆಯರಿಗೆ ಮತ್ತು ವಿಕಲಚೇತನರಿಗೆ ಅನೇಕ ಸಾಮಾಜಿಕ ಭದ್ರತೆ ಯೋಜನೆ ಜಾರಿಗೊಳಿಸಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ, ವಿಧವಾ ಪಿಂಚಣಿ ಯೋಜನೆ, ಅಂಗವಿಕಲ ಪಿಂಚಣಿ, ಸಂಧ್ಯಾ ಸುರಕ್ಷಾ ವೇತನ, ಮನಸ್ವಿನಿ, ಮೈತ್ರಿ ಯೋಜನೆಗಳಾಗಿವೆ.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 7419 ಮಂದಿ ಮಾಸಾಶನ ಪಡೆಯುತ್ತಿದ್ದು, ಮಡಿಕೇರಿಯ ತಾಲ್ಲೂಕಿನಲ್ಲಿ 1041, ಸೋಮವಾರಪೇಟೆಯ ತಾಲ್ಲೂಕಿನಲ್ಲಿ 3899, ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 2479 ಮಂದಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ.
ಈ ಯೋಜನೆಗೆ 60 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು. ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿರಬೇಕು, ಅಂತಹ ವ್ಯಕ್ತಿಯು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಮತ್ತಿತರವನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತಿರಬಾರದು. ಪಿಂಚಣಿ ಮೊತ್ತ (ಪ್ರತಿ ತಿಂಗಳಿಗೆ) ವಯಸ್ಸು 60-64 ಇರುವವರಿಗೆ 600 ರೂ. 65 ವರ್ಷ ಮೇಲ್ಪಟ್ಟವರಿಗೆ 1000 ರೂ. ಗಳನ್ನು ನಿಗಧಿಪಡಿಸಲಾಗಿದೆ.
ಅಂಗವಿಕಲರ ಮಾಸಾಶನ ಯೋಜನೆ: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆ ಒದಗಿಸಲು ಅಂಗವಿಕಲತೆಯುಳ್ಳ, ಅಂಗವಿಕಲತೆಯೊಂದಿಗೆ ಹುಟ್ಟಿದ ಮಗು ಮತ್ತು ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳು ಈ ಮಾಸಾಶನಕ್ಕೆ ಅರ್ಹರಾಗಿದ್ದಾರೆ. ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.12 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ ರೂ.17 ಸಾವಿರಕ್ಕಿಂತ ಕಡಿಮೆ ಇರಬೇಕು.
ಶೇಕಡಾ 40 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ 600 ರೂ ಮಾಸಾಶನ ಪಡೆಯಲು ಅರ್ಹರಾಗಿರುತ್ತಾರೆ. ಜಿಲ್ಲೆಯಲ್ಲಿ 10558 ಮಂದಿ ಈ ಯೋಜನೆಯಡಿ ಮಾಸಾಶನ ಪಡೆಯುತ್ತಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ 790, ಸೋಮವಾರಪೇಟೆಯಲ್ಲಿ 9014 ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 754 ಮಂದಿ ವಿಕಲಚೇತನರ ಮಾಸಾಶನ ಪಡೆಯುತ್ತಿದ್ದಾರೆ.
ಶೇ. 75 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ 1400 ರೂ ಮಾಸಾಶನ ಪಡೆಯಲು ಅರ್ಹರಾಗಿರುತ್ತಾರೆ. ಜಿಲ್ಲೆಯಲ್ಲಿ 3434 ಮಂದಿ ಇದರಡಿ ಇದ್ದು, ಮಡಿಕೇರಿ ತಾಲ್ಲೂಕಿನಲ್ಲಿ 739, ಸೋಮವಾರಪೇಟೆ ತಾಲ್ಲೂಕಿನಲ್ಲಿ 1587, ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 1108 ಮಂದಿ ಈ ಯೋಜನಾ ವ್ಯಾಪ್ತಿಯಲ್ಲಿ ಮಾಸಾಶನ ಪಡೆಯುತ್ತಿದ್ದಾರೆ.
ವಿಧವಾ ವೇತನ ಯೋಜನೆ; ಹದಿನೆಂಟು ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿರ್ಗತಿಕ ವಿಧವೆಯರಿಗೆ ವಿಧವಾ ವೇತನ ಸರ್ಕಾರದಿಂದ ನೀಡಲಾಗುತ್ತದೆ. ನಿರ್ಗತಿಕ ವಿಧವೆ ಅಂದರೆ, ಪತಿ ಜೀವಿಸಿಲ್ಲದ ಅಥವಾ ಕಾನೂನು ರೀತ್ಯಾ ಮೃತಪಟ್ಟಿರುವನೆಂದು ಭಾವಿಸುವವನ ಪತ್ನಿ ಮತ್ತು ಅವಳ ಸಂಬಂಧಿಕ ಒಬ್ಬ ಸ್ತ್ರೀ.
ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.12 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ ರೂ.17 ಸಾವಿರಕ್ಕಿಂತ ಕಡಿಮೆ ಇರಬೇಕು. ಅರ್ಜಿದಾರಳು ಅಥವಾ ಆಕೆಯ ಮರಣ ಹೊಂದಿದ ಪತಿಯು ಅರ್ಜಿ ದಿನಾಂಕದಿಂದ ಹಿಂದಿನ ನಿರಂತರ ಮೂರು ವರ್ಷಗಳ ಅವಧಿಗೆ ಕಡಿಮೆ ಇಲ್ಲದಂತೆ ಈ ರಾಜ್ಯದ ನಿವಾಸಿಯಾಗಿರಬೇಕು. ವಿಧವಾ ವೇತನ ತಿಂಗಳಿಗೆ ರೂ.600 ರೂ. ಜಿಲ್ಲೆಯಲ್ಲಿ ವಿಧವಾ ಪಿಂಚಣಿಯನ್ನು 16,874 ಮಂದಿ ಪಡೆಯುತ್ತಿದ್ದು. ಮಡಿಕೇರಿ ತಾಲ್ಲೂಕಿನಲ್ಲಿ 3272, ಸೋಮವಾರಪೇಟೆ ತಾಲ್ಲೂಕಿನಲ್ಲಿ 9060, ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 4542 ಮಂದಿ ಮಾಸಾಶನ ಪಡೆಯುತ್ತಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆ; 65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯಡಿ ಒಂದು ಸಾವಿರ ರೂ. ಮಾಸಾಶನ ಪಡೆಯುತ್ತಾರೆ. ಸಣ್ಣ ರೈತರು, ಅತೀ ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಅಸಂಘಟಿತ ವಲಯದ ಕಾರ್ಮಿಕರು, ಅರ್ಜಿ ಸಲ್ಲಿಸಬಹುದಾಗಿದೆ.
ಜಿಲ್ಲೆಯಲ್ಲಿ 25,299 ಮಂದಿ ಈ ಯೋಜನೆಯಡಿ ಮಾಸಾಶನ ಪಡೆಯುತ್ತಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ 4859, ಸೋಮವಾರಪೇಟೆ ತಾಲ್ಲೂಕಿನಲ್ಲಿ 12002, ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 8438 ಮಂದಿ ಪಡೆಯುತ್ತಿದ್ದಾರೆ.
ಪತಿ, ಪತ್ನಿಯ ಸಂಯೋಜಿತ ವಾರ್ಷಿಕ ಆದಾಯ ರೂ.20 ಸಾವಿರಕ್ಕಿಂತ ಹೆಚ್ಚಿಗೆ ಇರಕೂಡದು, ಪತಿ ಅಥವಾ ಪತ್ನಿಯ ಸಂಯೋಜಿತ ಠೇವಣಿ ಮೌಲ್ಯ ರೂ.10 ಸಾವಿರಕ್ಕಿಂತ ಹೆಚ್ಚಿಗೆ ಇರಬಾರದು.
ಅವಿವಾಹಿತ ಹಾಗೂ ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಪ್ರತಿ ತಿಂಗಳು ರೂ 500 ಮಾಸಾಶನ ನೀಡುವ ಮನಸ್ವಿನಿ' ಯೋಜನೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ರೂ 500 ಮಾಸಾಶನ ನೀಡುವಮೈತ್ರಿ’ ಯೋಜನೆ ಈ ತಿಂಗಳಿಂದಲೇ ಜಾರಿಯಾಗಿದ್ದು, ಈ ಸಂಬಂಧ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಮನಸ್ವಿನಿ ಯೋಜನೆ; ಬಡತನ ರೇಖೆಗಿಂತ ಕೆಳಗಿರುವ 40ರಿಂದ 64 ವರ್ಷದೊಳಗಿನ ಅವಿವಾಹಿತ ಹಾಗೂ ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮನಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಜಿಲ್ಲೆಯಲ್ಲಿ ಮನಸ್ವಿನಿ ಯೋಜನೆಯಡಿ 1326 ಮಂದಿ ಮಾಸಾಶನ ಪಡೆಯುತ್ತಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ 225, ಸೋಮವಾರಪೇಟೆ ತಾಲ್ಲೂಕಿನಲ್ಲಿ 687, ವಿರಾಜಪೇಟೆ ತಾಲ್ಲೂಕಿನಲ್ಲಿ 414 ಮಂದಿ ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಗೆ ಅಟಲ್‍ಜಿ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಅವಿವಾಹಿತರು ವಿವಾಹ ಆಗಿಲ್ಲವೆಂದು ಹಾಗೂ ವಿಚ್ಛೇದಿತರು, ವಿಚ್ಛೇದನ ಪಡೆದಿರುವ ಬಗ್ಗೆ ಸ್ವಯಂ ಪ್ರಮಾಣ ಪತ್ರ ಸಲ್ಲಿಸಬೇಕು.
ಮೈತ್ರಿ: ಬಡತನ ರೇಖೆಗಿಂತ ಕೆಳಗಿರುವ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಮೈತ್ರಿ ಯೋಜನೆ ರೂಪಿಸಿದ್ದು, ಮನಸ್ವಿನಿ ಯೋಜನೆಯ ಜಿಲ್ಲೆಯಲ್ಲಿ ಇಬ್ಬರು ಮಾಸಾಶನ ಪಡೆಯುತ್ತಿದ್ದಾರೆ.