ಪುರಾಣ ಪ್ರಸಿದ್ಧವಾದ ಉಡುಪಿಯ ಶ್ರೀ ಕೃಷ್ಣ ದೇವಾಲಯ

ಪಶ್ಚಿಮ ಘಟ್ಟದ ಸೆರಗಿನ ಕರ್ನಾಟಕ ಕರಾವಳಿಯ ರಮಣೀಯ ಪ್ರಕೃತಿಯ ಮಡಿಲಲ್ಲಿ ಇರುವ ಶ್ರೀಕೃಷ್ಣನ ಆಡುಂಬೋಲವೇ ಉಡುಪಿ. ಮಂಗಳೂರಿನಿಂದ ಕೇವಲ 58 ಕಿಲೋ ಮೀಟರ್ ದೂರದಲ್ಲಿರುವ ಉಡುಪಿ ಈಗ ಜಿಲ್ಲಾಕೇಂದ್ರ. ಪ್ರಗತಿಯ ಪಥದಲ್ಲಿ ನಾಗಾಲೋಟದಲ್ಲಿ ಸಾಗುತ್ತಿರುವ ಪ್ರಮುಖ ಪಟ್ಟಣ. ಉಡುಪಿ ಇಂದು ವಿಶ್ವವಿಖ್ಯಾತವಾದದ್ದೇ ಇಲ್ಲಿನ ಶ್ರೀಕೃಷ್ಣ ಮಂದಿರದಿಂದ. ಬಹು ಪ್ರಾಚೀನವೂ, ಪುರಾಣ ಪ್ರಸಿದ್ಧವೂ ಆದ ಈ ದೇಗಲುದಲ್ಲಿ ಶ್ರೀಕೃಷ್ಣ ಪರಮಾತ್ಮ ಹಿಂದು ಮುಂದಾಗಿ ನಿಂತಿದ್ದಾನೆ. ಸ್ವರ್ಣಾಭರಣಗಳಿಂದ ಅಲಂಕೃತನಾದ ಕಡಗೋಲು ಕೃಷ್ಣನ ಸೊಬಗನ್ನು ಸವಿಯುವುದೇ ಒಂದು ಆನಂದ.
ಐತಿಹ್ಯ :
ಉಡುಪಿಯಲ್ಲಿರುವ ಶ್ರೀಕೃಷ್ಣನ ವಿಗ್ರಹ ಅಲ್ಲಿಗೆ ಬಂದ ಬಗ್ಗೆಯೂ ಒಂದು ಕಥೆ ಇದೆ. ಹಿಂದೆ ದ್ವಾರಕಾನಗರದಲ್ಲಿ ಇದ್ದ ಶ್ರೀಕೃಷ್ಣನ, ಉಡುಪಿ ಕೃಷ್ಣ ಮಂದಿರಮೂಲಮೂರ್ತಿ ಪವಿತ್ರ ಗೋಪಿ ಚಂದನದಿಂದ ಮುಚ್ಚಿಹೋಗಿತ್ತು. ನಾವಿಕರೊಬ್ಬರು ಚಂದನಲೇಪಿತ ಶ್ರೀಕೃಷ್ಣನೂ ಇದ್ದ ಇಡೀ ಚಂದನದ ಗುಡ್ಡೆಯನ್ನು ತನ್ನ ದೋಣಿಯಲ್ಲಿ ತುಂಬಿಕೊಂಡು ಪಶ್ಚಿಮ ಕರಾವಳಿಯ ಕಡೆ ಬರುತ್ತಿದ್ದಾಗ ಭೀಕರ ಬಿರುಗಾಳಿಗೆ ಆತನ ಹಡಗು ಸಿಲುಕಿತು. ಇದನ್ನು ತಮ್ಮ ದಿವ್ಯದೃಷ್ಟಿಯಿಂದ ತಿಳಿದ ಮಧ್ವಾಚಾರ್ಯರು ಮಲ್ಪೆಯ ಬಳಿ ದೋಣಿ ದಡ ಮುಟ್ಟಲು ನೆರವಾಗುತ್ತಾರೆ. ಆಗ ನಾವಿಕ ಇದಕ್ಕೆ ಪ್ರತಿಫಲವಾಗಿ ಏನು ಬೇಕು ಕೇಳಿ ಎಂದಾಗ. ಮಧ್ವಾಚಾರ್ಯರು ಚಂದನಲೇಪಿತ ಶ್ರೀಕೃಷ್ಣನನ್ನು ಕೇಳಿ ಪಡೆಯುತ್ತಾರೆ. ಆನಂತರ ಮೂರ್ತಿಯನ್ನು ನಿರ್ಮಲ ಜಲದಲ್ಲಿ ಶುಚಿಗೊಳಿಸಿ ತಮ್ಮ ಮಠದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಮತ್ತೊಂದು ಕಥೆಯ ರೀತ್ಯ ಬಿರುಗಾಳಿಗೆ ಸಿಲುಕಿದ ದೋಣಿಯಲ್ಲಿದ್ದ ಶ್ರೀಕೃಷ್ಣಮೂರ್ತಿ ನೀರಿನಲ್ಲಿ ಮುಳುಗಿತು. ಇದನ್ನು ದಿವ್ಯ ದೃಷ್ಟಿಯಿಂದ ಅರಿತ ಆಚಾರ್ಯರು ಸಮುದ್ರದಿಂದ ಕೃಷ್ಣಮೂರ್ತಿಯನ್ನು ಹೊರತೆಗೆದು ಅದನ್ನು ತಂದು ೧೩ನೇ ಶತಮಾನದಲ್ಲಿ ಸಂಕ್ರಾಂತಿಯ ದಿನ ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೂ ಆಚಾರ್ಯರು ಭಕ್ತರು ದೇವರನ್ನು ಪೂಜಿಸುತ್ತಾ ಬಂದಿದ್ದಾರೆ.
ಇತಿವೃತ್ತ :
ಭಾರತದ ಏಳು ಪ್ರಮುಖ ಯಾತ್ರಾಸ್ಥಳಗಳ ಪೈಕಿ ಉಡುಪಿಯೂ ಒಂದು. ಪುರಾಣ ಪ್ರಸಿದ್ಧವಾದ ಉಡುಪಿ, ಕನಕದಾಸರಿಂದಾಗಿ ಇತಿಹಾಸ ಪ್ರಸಿದ್ಧಿ ಪಡೆದಿದೆ. ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ ಶ್ರೀಕೃಷ್ಣನ ದರ್ಶನಭಾಗ್ಯಕ್ಕಾಗಿ ವರ್ಷದ ಎಲ್ಲ ಕಾಲದಲ್ಲೂ ಭಕ್ತರು ಆಗಮಿಸುತ್ತಾರೆ. ಭಗವಂತನನ್ನು ಮುಖ್ಯದ್ವಾರದ ಬದಲಿದೆ, ಹಿಂಬದಿಯ ಪುಟ್ಟ ನವರಂದ್ರದ ಕಿಟಕಿಯ ಮೂಲಕ ನೋಡಿ, ಕೃಷ್ಣನ ಸೊಬಗನ್ನು ಕಣ್ಮು ತುಂಬಿಕೊಂಡು ಅಮಿತಾನಂದ ಪಡುತ್ತಾರೆ. ಈ ಕಿಟಕಿಗೆ ನವರಂಗ ಕಿಟಕಿ, ಕನಕನ ಕಿಂಡಿ ಎಂಬ ಹೆಸರುಗಳುಂಟು. ಬೆಂಗಳೂರಿನಿಂದ 425 ಕಿ. ಮಿ. ದೂರದಲ್ಲಿ ರುವ ಉಡುಪಿ ಮಧ್ವಾಚಾರ್ಯರ ಪಾದಧೂಳಿನಿಂದ ಪುನೀತವಾದ ಉಡುಪಿ, ವೇದ ಶಿಕ್ಷಣ ನೀಡುವ ಪ್ರಸಿದ್ಧ ಶಿಕ್ಷಣಕೇಂದ್ರವೂ ಹೌದು. ಕೃಷ್ಣ ಮಠದ ಸುತ್ತ ವಿಶಾಲವಾದ ರಾಜಾಂಗಣವಿದೆ. ಇಲ್ಲಿ ಒಂದು ದೀರ್ಘ ಸುತ್ತು ಹಾಕಿದೆವೆಂದರೆ ನಮಗೆ ಶ್ರೀಮಧ್ವಾಚಾರ್ಯ ಸ್ಥಾಪಿತ ಅಷ್ಟ ಮಠಗಳ ದರ್ಶನವೂ ಆಗುತ್ತದೆ. ರಾಜಾಂಗಣ ಪ್ರವೇಶಿಸುತ್ತಿದ್ದಂತೆಯೇ ಕನಕನ ಕಿಂಡಿ ಭಕ್ತರ – ಪ್ರವಾಸಿಗರ ಗಮನ ಸೆಳೆಯುತ್ತದೆ. ತುಸು ದೂರದಲ್ಲೇ ಪವಿತ್ರ ಮಧ್ವ ಸರೋವರ ಇದೆ.
