ಹಿರಿಯ ಮುತ್ಸದ್ದಿ ನರಸಿಂಹಮೂರ್ತಿ ನಿಧನಕ್ಕೆ ನಗರ ಕಾಂಗ್ರೆಸ್‍ನಿಂದ ಶ್ರದ್ಧಾಂಜಲಿ ಸಲ್ಲಿಕೆ

18/09/2020

ಮಡಿಕೇರಿ ಸೆ. 18 : ಕಾಂಗ್ರೆಸ್ ಹಿರಿಯ ಮುತ್ಸದ್ದಿ ನರಸಿಂಹಮೂರ್ತಿ ನಿಧನಕ್ಕೆ ನಗರ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಕ್ಷದ ಕಾರ್ಯಕರ್ತರು ನರಸಿಂಹಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಮಾಜಿ ಪ. ಪಂ. ನಾಮನಿರ್ದೇಶಿತ ಸದಸ್ಯರಾದ ಫಜಲುಲ್ಲಾ, ಹಿರಿಯ ಮುತ್ಸದ್ದಿ ನರಸಿಂಹಮೂರ್ತಿ ಅವರೊಂದಿಗಿನ ಒಡನಾಟದ ಬಗ್ಗೆ ಹಂಚಿಕೊಂಡರು. ಅವರು ನನ್ನ ರಾಜಕೀಯ ಭವಿಷ್ಯದಲ್ಲಿ ಸ್ನೇಹಿತರಾಗಿ ನಾನು ನಾಮನಿರ್ದೇಶಕರಾಗಲು ಮುಖ್ಯ ಕಾರಣರಾದವರು ಎಂದು ನೆನೆಪಿಸಿಕೊಂಡರು.
ನಗರ ಮಾಜಿ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ ಮಾತನಾಡಿ, ಪರಿಶುದ್ಧ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ನರಸಿಂಹಮೂರ್ತಿ ಅವರು ಸದಾ ಪಕ್ಷ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅವರ ಅಗಲಿಗೆ ಪಕ್ಷಕ್ಕೆ ತುಂಬಲಾಗದ ನಷ್ಟ ಉಂಟುಮಾಡಿದೆ ಎಂದರು.
ಪಟ್ಟಣ ಪಂಚಾಯತಿ ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ನಾನು ಪಟ್ಟಣ ಪಂಚಾಯಿತಿ ಸದಸ್ಯನಾಗಲು ನರಸಿಂಹಮೂರ್ತಿ ಪ್ರಮುಖ ಕಾರಣ, ಅವರ ಅಗಲಿಕೆ ನೋವು ಉಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನರಸಿಂಹಮೂರ್ತಿಯವರು ಯಾವುದೇ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ನಿಂತು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. ಕುಶಾಲನಗರದ ಅಭಿವೃದ್ಧಿಯ ಬಗ್ಗೆ ಚಿಂತೆಯನ್ನು ಹೊಂದಿದ್ದು, ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಸೇವೆ ಗಣನೀಯವಾದುದು ಎಂದರು.

ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಶಿವಶಂಕರ್, ಮಹದೇವ್, ಜಯಪ್ರಕಾಶ್, ಅಬ್ದುಲ್ ಖಾದರ್, ನಂಜುಂಡಸ್ವಾಮಿ ಮತ್ತಿತರರು ಹಾಜರಿದ್ದರು.