ಅಧಿವೇಶನದಲ್ಲಿ ಪ್ರತಿಧ್ವನಿಸಿದ ಮಡಿಕೇರಿ ಕಸ ಸಮಸ್ಯೆ

ಮಡಿಕೇರಿ ಸೆ.22 : ಮಡಿಕೇರಿ ನಗರದ ಕಸ ವಿಲೇವಾರಿ ಸಮಸ್ಯೆ ಮಂಗಳವಾರ ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರತಿಧ್ವನಿಸಿತು.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ನಗರದ ಕಸ ವಿಲೇವಾರಿ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ. ನಾರಾಯಣ ಗೌಡ ಅವರು, ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿರುವ 8968 ಮನೆಗಳಲ್ಲಿ ಪ್ರತಿನಿತ್ಯ 20 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಸುಮಾರು 18 ಟನ್ ಘನ ತ್ಯಾಜ್ಯವನ್ನು 6 ಆಟೋ ಟಿಪ್ಪರ್ ಹಾಗೂ 5 ಟ್ರ್ಯಾಕ್ಟರ್ ಮೂಲಕ ಸಂಗ್ರಹಿಸಲಾಗುತ್ತಿದೆ. ಕರ್ಣಂಗೇರಿ ಗ್ರಾಮದ ಸ.ನಂ. 471/1ರ ಪಿ 16ರಲ್ಲಿ 6 ಎಕರೆ ಜಾಗದಲ್ಲಿ 9 ಟನ್ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಪಿಟ್ಗಳನ್ನು ಸಂಸ್ಕøರಿಸಿ, ಟ್ರಾಮೆಲ್ ಸ್ಕ್ರೀನ್ ಮೂಲಕ ಬೇರ್ಪಡಿಸಿ ನಂತರ ಗೊಬ್ಬರವನ್ನು ನಗರಸಭೆಯ ಉದ್ಯಾನವನ ಹಾಗೂ ಸುತ್ತಮುತ್ತಲ ಎಸ್ಟೇಟ್ಗಳಿಗೆ ನೀಡಲಾಗುತ್ತಿದೆ. ಸುಮಾರು 10-11 ಟನ್ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿರಿಸಿ ಭಾಗಶಃ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಣ್ಣ ಪ್ರಮಾಣದಲ್ಲಿ ಬೇೀಲಿಂಗ್ ಯಂತ್ರದ ಮೂಲಕ ಬೇಲ್ ಮಾಡಿ ಸಂಸ್ಕರಣೆ ಘಟಕದಲ್ಲಿ ಸಂಗ್ರಹಿಸಲಾಗುತ್ತಿದೆ. ಉಳಿಕೆ ತ್ಯಾಜ್ಯವನ್ನು ತೆರೆದ ಪ್ರದೇಶದಲ್ಲಿ ವಿಲೇ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಗರಸಭೆಯ 23 ವಾರ್ಡ್ಗಳ ಪೈಕಿ 17 ವಾರ್ಡ್ಗಳಿಂದ ಮೂಲದಲ್ಲಿಯೇ ಕಸವನ್ನು ವಿಂಗಡಿಸಿ ನೀಡಲಾಗುತ್ತಿದ್ದು, ಉಳಿದ 6 ವಾರ್ಡ್ಗಳಲ್ಲಿ ಕಸವನ್ನು ವಿಂಗಡಿಸಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಮತ್ತು ಎನ್ಜಿಒಗಳ ಮೂಲಕ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಕಸ ವಿಲೇವಾರಿಯಿಂದ ಸುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯವನ್ನು ಯಾವ ರೀತಿಯಲ್ಲಿ ಕಾಪಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ. ನಾರಾಯಣ ಗೌಡ ಅವರು, ಸಂಸ್ಕರಣೆ ಘಟಕದ ಸುತ್ತಲೂ ತಡೆಗೋಡೆ ನಿರ್ಮಿಸಿ ಮರಗಿಡಗಳನ್ನು ಬೆಳೆಸಲಾಗಿದ್ದು, ಯಾವುದೇ ರೀತಿಯ ಕ್ರಿಮಿಕೀಟಗಳು ಉತ್ಪತ್ತಿಯಾಗದಂತೆ ಕೀಟನಾಶಕ ಸಿಂಪಡಿಸಿ ಎಚ್ಚರಿಕೆ ವಹಿಸಲಾಗುತ್ತಿದೆ. ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
::: ವಿಲೇವಾರಿಗೆ ಕ್ರಮ :::
ಅಲ್ಲದೆ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಅಧಿಕಾರಿಗಳ ತಂಡವನ್ನು ತ್ಯಾಜ್ಯ ನಿರ್ವಹಣಾ ಘಟಕದ ತಪಾಸಣೆಗಾಗಿ ನಿಯೋಜಿಸಲಾಗಿದ್ದು, ಶೇಖರಣೆಯಾಗಿರುವ ಸುಮಾರು 30-40 ಸಾವಿರ ಟನ್ಗಳಷ್ಟು ಹಳೆಯ ತ್ಯಾಜ್ಯವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳ ಅನ್ವಯ ಹೊರತೆಗೆದು ಬಯೋರೆಮಿಡಿಯೇಷನ್ ಪದ್ಧತಿಯ ಮೂಲಕ ಸಂಸ್ಕರಿಸಿ ವಿಲೇ ಮಾಡಬೇಕಿದೆ. ಹಳೆ ತ್ಯಾಜ್ಯ ನಿರ್ವಹಣೆಗಾಗಿ ವಿಸ್ತøತ ಯೋಜನಾ ವರದಿ ಸಿದ್ಧಪಡಿಸಲು ಸೂಕ್ತ ಏಜೆನ್ಸಿಯನ್ನು ಆಯ್ಕೆ ಮಾಡಿ ಅವರ ಶಿಫಾರಸ್ಸಿನಂತೆ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.
ಈಗಾಗಲೇ ಸಂಗ್ರಹವಾಗಿರುವ ಒಣ ತ್ಯಾಜ್ಯವನ್ನು ಏಕ ಸಮಯದ ಪರಿಹಾರ ಭಾಗವಾಗಿ ನಿರ್ವಹಿಸಲು ಅಗತ್ಯ ಕ್ರಮವಹಿಸಲಾಗುವುದು. ನಗರಸಭೆಯ ನಗರ ವ್ಯಾಪ್ತಿಯಲ್ಲಿ ಉತ್ಪಾದನೆಯಾಗು ಎಲ್ಲಾ ತ್ಯಾಜ್ಯವನ್ನು ಕೇಂದ್ರೀಕೃತ ಘಟಕಕ್ಕೆ ಸಾಗಿಸುವ ಬದಲಾಗಿ ನಗರದಲ್ಲಿಯೇ ವಿಕೇಂದ್ರೀಕೃತ ತ್ಯಾಜ್ಯ ಸಂಸ್ಕರಣಾ ಘಟಕ, ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಚಿವರು, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಗರಸಭೆಗೆ ಬಿಡುಗಡೆಯಾಗಿರುವ ಮೊತ್ತದಿಂದ ಸ್ಯಾನಿಟರಿ ಲ್ಯಾಂಡ್ಫಿಲ್ ಸೌಲಭ್ಯ ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
