ಭಕ್ತರಿಗೆ ಅನುಕೂಲ ಕಲ್ಪಿಸಿದರೆ ತಪ್ಪೇನು ? : ಭಾಗಮಂಡಲ ಹೋರಾಟ ಸಮಿತಿ ಅಸಮಾಧಾನ

ಮಡಿಕೇರಿ ಸೆ.23 : ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಬರುವ ಭಕ್ತಾದಿಗüಳಿಗಾಗಿ ಸ್ಥಳೀಯರು ವಸತಿ ನಿಲಯಗಳನ್ನು ಕಲ್ಪಿಸಿ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿರುವ ಭಾಗಮಂಡಲ ನಾಗರಿಕ ಹೋರಾಟ ಸಮಿತಿಯ ಪದಾಧಿಕಾರಿಗಳು, ಸ್ಥಳೀಯರ ನಿತ್ಯ ಜೀವನಕ್ಕೆ ಯಾವುದೇ ರೀತಿಯ ಅಡ್ಡಿ ಎದುರಾದರೂ ಕಾನೂನಿನ ಮೂಲಕ ಹೋರಾಟ ನಡೆಸಲು ಸಿದ್ಧ ಇರುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಕುದುಕುಳಿ ಭರತ್ ಹಾಗೂ ಪದಾಧಿಕಾರಿಗಳು ಹೋಸ್ಟೇಗಳನ್ನು ನಡೆಸಬಾರದು ಮತ್ತು ಅಂಗಡಿ, ಹೊಟೇಲ್ ಗಳನ್ನು ತೆರೆದು ವ್ಯಾಪಾರ ಮಾಡಬಾರದೆನ್ನುವ ನಿಯಮ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಮಾತ್ರ ಯಾಕೆ ಅನ್ವಯ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯ ಪ್ರತಿ ಊರು, ಊರುಗಳಲ್ಲಿ ಶ್ರದ್ಧಾಭಕ್ತಿಯಿಂದ ಪೂಜಿಸಲ್ಪಡುವ ದೇವಾಲಯಗಳಿವೆ. ಎಲ್ಲಾ ಪ್ರದೇಶಗಳಲ್ಲಿಯೂ ಹೋಂಸ್ಟೇಗಳಿವೆ, ಊಟದ ಮನೆಗಳಿವೆ ಮತ್ತು ಮಾಂಸಹಾರವೂ ನಡೆಯುತ್ತಿದೆ. ಆದರೆ ಭಕ್ತರ ಅನುಕೂಲಕ್ಕಾಗಿಯೇ ತಮ್ಮ ತಮ್ಮ ಸ್ವಂತ ಜಾಗ, ಮನೆಗಳಲ್ಲಿ ವ್ಯವಸ್ಥೆ ಕಲ್ಪಿಸುತ್ತಿರುವ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಇದೆಲ್ಲವನ್ನು ನಿಷೇಧಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಸರಿಯಲ್ಲವೆಂದರು.
ಕೇವಲ ದೇವಾಲಯಗಳಿದ್ದರೆ ಸಾಲದು, ಭಕ್ತರಿಗೆ ಪೂರಕವಾದ ವ್ಯವಸ್ಥೆಗಳು ಕೂಡ ಇರಬೇಕಾಗುತ್ತದೆ. ಕ್ಷೇತ್ರಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿ ಮಾಡಬೇಕಾಗುತ್ತದೆ ಎಂದು ಪ್ರಮುಖರು ತಿಳಿಸಿದರು.
ಹಾವಾಗುಣ ವೈಪರೀತ್ಯದಿಂದ ಕಷ್ಟ, ನಷ್ಟಗಳನ್ನು ಅನುಭವಿಸುತ್ತಿರುವ ಸ್ಥಳೀಯ ರೈತರು ಜೀವನೋಪಾಯಕ್ಕಾಗಿ ಕೃಷಿಯೊಂದಿಗೆ ವ್ಯಾಪಾರವನ್ನು ಕೂಡ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಜಾತಿ, ಜನಾಂಗಗಳ ಭೇದವಿಲ್ಲ, ವಿನಾಕಾರಣ ಅಡ್ಡಿಪಡಿಸುವುದು ಸರಿಯಲ್ಲವೆಂದು ತಿಳಿಸಿರುವ ಅವರುಗಳು, ಸ್ಥಳೀಯರನ್ನು ಕಡೆಗಣಿಸಿ ತಲಕಾವೇರಿ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡರು ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರು ನಿಧನರಾದ ನಂತರ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ತಪ್ಪುಗಳು ನಡೆದಿದ್ದರೆ ಅವರು ಬದುಕಿದ್ದಾಗಲೇ ಧ್ವನಿ ಎತ್ತಬೇಕಾಗಿತ್ತು ಎಂದು ಅಭಿಪ್ರಾಯಪಟ್ಟ ಭರತ್, ಆಗಸ್ಟ್ ತಿಂಗಳಿನಲ್ಲಿ ತಲಕಾವೇರಿಯಲ್ಲಿ ನಡೆದ ದುರಂತ ಮಾನವ ನಿರ್ಮಿತವೇ ಹೊರತು ಬೇರೆ ಯಾವುದೇ ಕಾರಣವಲ್ಲವೆಂದರು.
ಬ್ರಹ್ಮಗಿರಿ ಬೆಟ್ಟಗಳ ಸಾಲುಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ಗಿಡ ನೆಟ್ಟಿರುವ ಅರಣ್ಯ ಇಲಾಖೆ ಅನಾಹುತಕ್ಕೆ ನೇರ ಕಾರಣವೆಂದು ಆರೋಪಿಸಿದ ಅವರು, ಬೆಟ್ಟ ಕುಸಿದು ಸಾವು ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕೆ ಹೊರತು ಬೇರೆ ಸಮಾಜದ ಅರ್ಚಕರನ್ನು ಪೂಜೆಗೆ ನೇಮಿಸಬೇಕೆಂಬ ವಾದ ಅರ್ಥಹೀನವಾಗಿದೆ ಎಂದು ಟೀಕಿಸಿದರು. ಈ ವಾದಕ್ಕೆ ಸ್ಥಳೀಯರ ವಿರೋಧವಿದೆ ಎಂದು ತಿಳಿಸಿದರು.
ಕೊಡಗು ರಾಜರ ಕಾಲದಲ್ಲಿ ತಲಕಾವೇರಿ, ಭಾಗಮಂಡಲ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಉಡುಪಿ, ಮಂಗಳೂರು ಮತ್ತು ಇಕ್ಕೇರಿ ಭಾಗಗಳಿಂದ ವೃತ್ತಿ ಪರಿಣಿತ ಅರ್ಚಕರನ್ನು ಕರೆಯಿಸಿಕೊಳ್ಳಲಾಗಿತ್ತು. ಇದು ನಡೆದು ಸುಮಾರು 300 ವರ್ಷಗಳೇ ಕಳೆದಿದ್ದು, ಈಗ ಅರ್ಚಕರ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ವಂಶ ಪಾರಂಪರ್ಯ ಅರ್ಚಕ ಸ್ಥಾನವನ್ನು ಸ್ಥಳೀಯರು ಗೌರವಿಸುತ್ತೇವೆ ಮತ್ತು ಅರ್ಚಕ ಸಮುದಾಯಕ್ಕೆÉ ತೊಂದರೆಯಾದರೆ ಅವರನ್ನು ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
::: ಲಿಂಗಕ್ಕೆ ನೆಲೆ ಇಲ್ಲದಿರುವುದೇ ಅನಾಹುತಗಳಿಗೆ ಕಾರಣ :::
ತಲಕಾವೇರಿ ಕ್ಷೇತ್ರದಲ್ಲಿ ಅಗಸ್ತ್ಯ ಮುನಿಗಳು ಸ್ಥಾಪಿಸಿದ ಮೂಲ ಲಿಂಗಕ್ಕೆ ಹಾನಿಯಾಗಿರುವ ಕಾರಣ ನೀಡಿ ಸಮುದ್ರದಲ್ಲಿ ವಿಸರ್ಜನೆ ಮಾಡುವ ನಿರ್ಧಾರದಿಂದಲೇ ಕೊಡಗಿನಲ್ಲಿ ಅತಿವೃಷ್ಟಿ ಹಾನಿ ಸೇರಿದಂತೆ ಅನೇಕ ಅನಾಹುತಗಳು ಸಂಭವಿಸುತ್ತಿದೆ ಎಂದು ಭರತ್ ಅಭಿಪ್ರಾಯಪಟ್ಟರು.
ಈ ಹಿಂದೆ ತಲಕಾವೇರಿಯಲ್ಲೇ ಲಿಂಗವನ್ನು ಭೂಗತ ಮಾಡಿ ಶಕ್ತಿ ತುಂಬುವಂತೆ ಹೇಳಿದ್ದ ತಂತ್ರಿಗಳೇ ಇಂದು ಲಿಂಗವನ್ನು ಸಮುದ್ರದಲ್ಲಿ ವಿಸರ್ಜನೆ ಮಾಡುವಂತೆ ತಿಳಿಸುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಅನಾಹುತಗಳು ಎದುರಾಗುವ ಆತಂಕದಿಂದ ಲಿಂಗವನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಬಾರದೆಂಬ ಅಭಿಪ್ರಾಯದೊಂದಿಗೆ ಸ್ಥಳೀಯರು ಹಿಂದಿನ ಸಭೆಯಿಂದ ಹೊರ ನಡೆದಿದ್ದರು. ಅಲ್ಲದೆ ಮೈಸೂರಿನ ವಕೀಲರೊಬ್ಬರು ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಲಿಂಗ ವಿಸರ್ಜನೆಯಾಗದಂತೆ ನೋಡಿಕೊಂಡಿದ್ದರು. ಆದರೆ ಮತ್ತೆ ಲಿಂಗ ವಿಸರ್ಜನೆಯ ಪ್ರಸ್ತಾಪವಾಗುತ್ತಿದ್ದು, ಇದಕ್ಕೆ ನಮ್ಮ ವಿರೋಧವಿದೆ. ಊಟದ ಹಾಲ್ ನ ಬಳಿ ಮೂಲ ಲಿಂಗವನ್ನು ಇರಿಸಿರುವ ಬಗ್ಗೆ ಮಾಹಿತಿ ಇದೆ. ತಕ್ಷಣ ಈ ಮೂಲ ಲಿಂಗವನ್ನು ಪ್ರಸ್ತುತ ಗುಡಿಯಲ್ಲಿರುವ ಲಿಂಗದ ಬಳಿ ಭೂಗತ ಮಾಡಿ ಶಕ್ತಿ ತುಂಬುವ ಕೆಲಸವಾಗಬೇಕೆಂದು ಭರತ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ದಂಡಿನ ಕೆ.ಜಯಂತ್, ಕುಯ್ಯಮುಡಿ ಮನೋಜ್ ಕುಮಾರ್, ಪಟ್ಟಮಾಡ ಸಂಜು ಕಾವೇರಪ್ಪ ಹಾಗೂ ಕೆ.ತಮ್ಮಯ್ಯ ಉಪಸ್ಥಿತರಿದ್ದರು.
