ಭಕ್ತಾಧಿಗಳು ತ್ರಿವೇಣಿ ಸಂಗಮಕ್ಕೆ ಇಳಿಯದಂತೆ ಮನವಿ : ಕೋವಿಡ್ ಮಾರ್ಗಸೂಚಿ ಪಾಲಿಸುವುದು ಖಡ್ಡಾಯ

15/10/2020

ಮಡಿಕೇರಿ ಅ.15 : ತಲಕಾವೇರಿ ಮತ್ತು ಭಾಗಮಂಡಲ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತ್ರಿವೇಣಿ ಸಂಗಮ ಭರ್ತಿಯಾಗುತ್ತಿದ್ದು, ಭಕ್ತಾಧಿಗಳು ಸಂಗಮಕ್ಕೆ ಇಳಿಯಬಾರದು ಎಂದು ತಲಕಾವೇರಿ-ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಅವರು ಮನವಿ ಮಾಡಿದ್ದಾರೆ.

ಭಾಗಮಂಡಲದಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿರುವುದರಿಂದ ನದಿಗೆ ಇಳಿಯಬಾರದು. ಭಕ್ತಾಧಿಗಳು ತುಂಬಾ ಎಚ್ಚರ ವಹಿಸಬೇಕಿದೆ. ಅ.17 ರಂದು ಪಿಂಡ ಪ್ರದಾನ ಕಾರ್ಯಕ್ಕೆ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿದೆ. ತುಲಾ ಸಂಕ್ರಮಣ ಜಾತ್ರಾ ವಿಶೇಷ ಪೂಜಾ ಕಾರ್ಯವು ಅ.17 ರಿಂದ ನ.17 ರವರೆಗೆ ಒಂದು ತಿಂಗಳ ಕಾಲ ಜರುಗಲಿದ್ದು, ಭಕ್ತಾಧಿಗಳು ಈ ಸಮಯದಲ್ಲಿ ಆಗಮಿಸಿ ಪೂಜಾ ಕಾರ್ಯ ಕೈಗೊಳ್ಳಬಹುದಾಗಿದೆ ಎಂದು ಮನವಿ ಮಾಡಿದರು.

ತಲಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂಬಂಧ ಜಿಲ್ಲಾಡಳಿತ ಹೊರಡಿಸಿರುವ ಆದೇಶವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು ಎಂದು ಕೋರಿದರು. ಕೋವಿಡ್ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು. ಭಕ್ತಾಧಿಗಳು ಯಾವುದೇ ಗೊಂದಲಕ್ಕೆ ಅವಕಾಶ ಮಾಡಬಾರದು. ಗುಂಪು ಸೇರುವುದು ಮತ್ತಿತರ ಕಾರ್ಯವನ್ನು ಮಾಡಬಾರದು. ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣ ಪತ್ರ ತರಬೇಕು. ಭಾವನಾತ್ಮಕವಾಗಿ ಯಾವುದಕ್ಕೂ ಅವಕಾಶ ಮಾಡಬಾರದು ಎಂದು ತಮ್ಮಯ್ಯ ಅವರು ಕಳಕಳಿಯಿಂದ ಮನವಿ ಮಾಡಿದರು.

ತಲಕಾವೇರಿಗೆ ಆಗಮಿಸುವ ಭಕ್ತಾಧಿಗಳಿಗೆ ತೀರ್ಥ ನೀಡಲಾಗುವುದು. ಇದಕ್ಕಾಗಿ 30 ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಜೊತೆಗೆ ತೀರ್ಥ ಪ್ರೋಕ್ಷಣೆ ಮಾಡಲಾಗುವುದು ಎಂದರು.

ಕಾನೂನನ್ನು ಪಾಲಿಸುವುದು ಪ್ರತಿಯೊಬ್ಬರ ಸಂವಿಧಾನಾತ್ಮಕ ಕರ್ತವ್ಯವಾಗಿದ್ದು, ಅದರಂತೆ ನಡೆದುಕೊಳ್ಳಬೇಕು. ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವವರನ್ನು ಯಾವುದೇ ಕಾರಣಕ್ಕೂ ತಡೆಯಬಾರದು ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕೋರಿದರು.

ಅ.17 ರಂದು ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಸೂಕ್ತ ಬಂದೋ ಬಸ್ತನ್ನು ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು. ಡಿ.18 ರೊಳಗೆ ಸಂಗಮ ಬಳಿ ನಾಗ ಪ್ರತಿಷ್ಠಾಪನಾ ಮಾಡಲು ಚಿಂತಿಸಲಾಗಿದೆ ಎಂದು ತಮ್ಮಯ್ಯ ಹೇಳಿದರು.

ಭಾಗಮಂಡಲ ತ್ರಿವೇಣಿ ಸಂಗಮದ ಬಳಿ ನೂತನವಾಗಿ ನಿರ್ಮಿಸಿರುವ ಮುಡಿ ಶೆಡ್ಡು, ಪಿಂಡ ಪ್ರದಾನ, ಶ್ರದ್ಧಾ ಮತ್ತು ಹೋಮ ಕಟ್ಟಡವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಅ.16 ರಂದು ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸುಮಾರು 78 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೊಳಗಳಲಾಗಿದ್ದು, ಅವುಗಳನ್ನು ಉದ್ಘಾಟಿಸಲಿದ್ದಾರೆ. ಹಾಗೆಯೇ ಅಧಿಕಾರಿಗಳ ಜೊತೆ ತಲಕಾವೇರಿ ತುಲಾಸಂಕ್ರಮಣ ಜಾತ್ರೆ ಸಂಬಂಧ ಚರ್ಚಿಸಲಿದ್ದಾರೆ ಎಂದು ತಮ್ಮಯ್ಯ ಅವರು ಮಾಹಿತಿ ನೀಡಿದರು.

ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಿಡ್ಯಮಲೆ ಮೀನಾಕ್ಷಿ ಸುರೇಶ್, ಕೆದಂಬಾಡಿ ಟಿ.ರಮೇಶ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.