ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಕ್ಕೆ ಮುಂದಾದರೆ ಪ್ರತಿಭಟನೆ : ರೈತ ಹೋರಾಟ ಸಮಿತಿ ಎಚ್ಚರಿಕೆ

17/10/2020

ಸೋಮವಾರಪೇಟೆ ಅ. 17 : ಕಾಫಿ ಬೆಳೆಗಾರರ ಎಲ್‍ಟಿ4(ಸಿ)ಯ ವಿದ್ಯುತ್ ಬಿಲ್ ಕಟ್ಟುವಂತೆ ಸೆಸ್ಕ್ ಇಲಾಖೆಯ ಅಧಿಕಾರಿಗಳು ಬೆಳೆಗಾರರಿಗೆ ನೋಟೀಸ್ ನೀಡುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಕ್ಕೆ ಮುಂದಾದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ರೈತ ಸಮುದಾಯ ಹಾಗೂ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿ ಹಣ್ಣು ಸುರಿದು ಮಣ್ಣು ಸೇರಿದೆ. ಬಿಳಿಕಾಂಡಕೊರಕ, ಬೆರ್ರಿ ಬೋರರ್, ಕೊಳೆರೋಗದಿಂದ ಕಾಫಿ ತೋಟಗಳು ನಾಶವಾಗುತ್ತಿವೆ. ಬೆಳೆಗಾರರು ಸಾಲಗಾರರಾಗಿದ್ದಾರೆ. ಈ ಸಂದರ್ಭದಲ್ಲೇ ಬೆಳೆಗಾರರ ಪಂಪ್‍ಸೆಟ್‍ಗಳ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಶುಲ್ಕವನ್ನು ಪಾವತಿ ಮಾಡುವಂತೆ ನೋಟೀಸ್ ಮಾಡುತ್ತಿದ್ದಾರೆ. ನೋಟೀಸ್ ನೀಡುವುದನ್ನು ನಿಲ್ಲಿಸಬೇಕು. ತಪ್ಪಿದಲ್ಲಿ ಸೆಸ್ಕ್ ಕ್ರಮದ ವಿರುದ್ಧ ರೈತಪರ ಸಂಘಟನೆಗಳ ಸಹಕಾರದೊಂದಿಗೆ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಫಿ ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಯ ವಾಣಿಜ್ಯ ಬೆಳೆ, ಭತ್ತ ಸೇರಿದಂತೆ ಇತರ ಬೆಳೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಪ್ರಕೃತಿ ವಿಕೋಪದಿಂದ ಪ್ರತಿವರ್ಷ ಅತೀ ಹೆಚ್ಚು ಹಾನಿಯಾಗುತ್ತಿರುವ ಕಾಫಿ ಕೃಷಿಗೆ ಉಚಿತ ವಿದ್ಯುತ್ ನೀಡದೆ ಸರಕಾರ ಕಾಫಿ ಬೆಳೆಗಾರರಿಗೆ ಮಲ ತಾಯಿ ಧೋರಣೆ ಮಾಡುತ್ತಿದೆ ಎಂದು ದೂರಿದರು. ಕೂಡಲೆ ಬೆಳೆಗಾರರ ಎಲ್‍ಟಿ4(ಸಿ) ಪಂಪ್‍ಸೆಟ್‍ಗಳ ಬಾಕಿಯಿರುವ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಬೇಕು. 10ಎಚ್.ಪಿ.ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವುದರೊಂದಿಗೆ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಒತ್ತಾಯಿಸಿದರು.
ಬ್ರಿಟಿಷರು ಕಾಫಿಯನ್ನು ಉದ್ಯಮವೆಂದು ಪರಿಗಣನೆ ಮಾಡಿದ್ದರು. ಈ ನಿಯಮವನ್ನೇ ಸರಕಾರಗಳು ಮುಂದುವರಿಸಿಕೊಂಡು ಹೋಗಲಾಗುತ್ತಿರುವುದರಿಂದ ಕಾಫಿ ಬೆಳೆಗಾರರು ಸರಕಾರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಸಮಿತಿ ಸಂಚಾಲಕ ಹೂವಯ್ಯ ಗೌಡಳ್ಳಿ ಹೇಳಿದರು.
ಕೊಡಗಿನ ಜನಪ್ರತಿನಿಧಿಗಳಾದ ಸಂಸದರು, ಶಾಸಕರು ಬೆಳೆಗಾರರ ಸಂಕಷ್ಟಗಳನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಮಲತಾಯಿ ಧೋರಣೆ ತೋರುತ್ತಿರುವ ಸರಕಾರ ವಿರುದ್ಧ ಪ್ರತಿಭಟನೆ ಮಾಡಿಯಾದರೂ, ಎಲ್‍ಟಿ4(ಸಿ) ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕೊಡಿಸಬೇಕು. ಬರೀ ಸುಳ್ಳು ಹೇಳಿಕೊಂಡು ಕಾಲಹರಣ ಮಾಡಿದರೆ ಜಿಲ್ಲೆಯ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು.
ಕಾಫಿ ಬೆಳೆಗಾರರು ಕಾಫಿ ಬ್ಲಾಸಂ ಸಂದರ್ಭದಲ್ಲಿ ಎರಡು ತಿಂಗಳು ಮಾತ್ರ ಎಲ್‍ಟಿ4(ಸಿ) ಪಂಪ್‍ಸೆಟ್‍ಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಆದರೆ ಉಳಿದ 10 ತಿಂಗಳು ಉಪಯೋಗಕ್ಕೆ ಬರುವುದಿಲ್ಲ. ಆದರೂ 12 ತಿಂಗಳು ಕನಿಷ್ಠ ದರ ಕಟ್ಟಲೇಬೇಕು. ಅತೀ ಸಣ್ಣ ಬೆಳೆಗಾರರ ಪಂಪ್‍ಸೆಟ್‍ಗಳಿಗೆ ವಾರ್ಷಿಕ 50ರಿಂದ 60 ಸಾವಿರ ರೂ. ಬಿಲ್ ಬರುತ್ತಿದೆ ಎಂದು ಸಮಿತಿಯ ಕಾರ್ಯದರ್ಶಿ ಡಿ.ಎಸ್.ಚಂಗಪ್ಪ ಹೇಳಿದರು. ಕಾಫಿ ಬೆಳೆಗಾರರ 10 ಹೆಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಮಾತು ಕೊಟ್ಟಿದ್ದಾರೆ. ಮಾತಿನಂತೆ ನಡೆದುಕೊಂಡು ಬೆಳೆಗಾರರನ್ನು ರಕ್ಷಿಸುತ್ತಾರೆ ಎಂದು ನಂಬಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಎ.ಬಿ.ಸುಬ್ಬಯ್ಯ ಇದ್ದರು.