ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಬಲೀಕರಣಕ್ಕೆ ಬದ್ಧ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹರ್ಷ ಭರವಸೆ

21/10/2020

ಬೆಂಗಳೂರು: ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಬಲೀಕರಣಕ್ಕೆ ವಾರ್ತಾ ಇಲಾಖೆ ಬದ್ಧವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹರ್ಷ ಅವರ ಭರವಸೆ ನೀಡಿದ್ದಾರೆ.

ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾದ ಜೆ.ಆರ್ ಕೆಂಚೇಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು , ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಕುಮಾರ್ ಅವರ ನೇತೃತ್ವದ ನಿಯೋಗದೊಂದಿಗೆ ಬೆಂಗಳೂರಿನಲ್ಲಿ ಮಂಗಳವಾರ ಸಭೆ ನಡೆಸಿದ ಆಯುಕ್ತ ಹರ್ಷ ಅವರು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ಮತ್ತು ವೃತ್ತಿಪರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು , ಶೀಘ್ರದಲ್ಲೆ ಜಾಹೀರಾತು ನೀತಿ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.

ಗಾಂಧಿ ಜಯಂತಿ ಜಾಹೀರಾತನ್ನು ಕೇವಲ ಕಾಲು ಪುಟಕ್ಕೆ ಸೀಮಿತಗೊಳಿಸಿದ್ದರ ಬಗ್ಗೆ ಸಂಘದ ನಿಯೋಗವು ಆಕ್ಷೇಪ ವ್ಯಕ್ತಡಿಸಿದ್ದು, ಇದಕ್ಕೆ ಪ್ರತಿಕ್ರಯಿಸಿದ ಆಯುಕ್ತ ಡಾ. ಹರ್ಷ ಅವರು, ನವಂಬರ್ ತಿಂಗಳಲ್ಲಿ ಪೂರ್ಣ ಪುಟ ಜಾಹೀರಾತು ನೀಡುವ ಮೂಲಕ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಮಂಗಳವಾರ ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಡೆಸಿದ್ದು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಎದುರಿಸುತ್ತಿರುವ ವೃತ್ತಿಪರ ಸಮಸ್ಯೆ ಮತ್ತು ಸವಾಲುಗಳ ಕುರಿತು ಚರ್ಚೆ ನಡೆಸಲಾಯಿತು.

ಜಾಹೀರಾತು ನೀಡುವಲ್ಲಿ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿದ್ದು. ಆರ್ಥಿಕ ಸಂಕಷ್ಟಗಳನ್ನು ಎದುರಿಸಲು ಮತ್ತು ಜನಪರ ಮಾಧ್ಯಮವಾಗಿ ಪತ್ರಿಕೆಗಳನ್ನು ನಡೆಸಲು ಸಂಘಟನಾತ್ಮಕವಾಗಿ ಮುನ್ನೆಡೆಯಲು ತೀರ್ಮಾನಿಸಲಾಯಿತು.

ಜಾಹೀರಾತು ನೀತಿ ಹೆಸರಿನಲ್ಲಿ ಪತ್ರಿಕೆಗಳಿಗೆ ಕೇವಲ ನಿರ್ಬಂಧಗಳನ್ನು ವಿಧಿಸುವ ಸರ್ಕಾರ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಬಲೀಕರಣಕ್ಕೆ ಮುಂದಾಗಬೇಕು. ಏಜೆನ್ಸಿಗಳ ಬಾಕಿ ಪಾವತಿ, ಡಿಸ್ಪ್ಲೇ ಜಾಹೀರಾತು ನೀಡುವಂತೆಯೂ.ಟೆಂಡರ್ ಮತ್ತಿತರ ಇಲಾಖಾವಾರು ಜಾಹೀರಾತುಗಳ ಪ್ರಕಟಣೆಯ ಅಕ್ಷರಜೋಡಣೆ ಅಳತೆಯನ್ನು ಗರಿಷ್ಠತೆಗೆ ಹೆಚ್ಚಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಸರ್ಕಾರಕ್ಕೆ ಬೇಡಿಕೆ ಮಂಡಿಸಲು ತೀರ್ಮಾನಿಸಲಾಯಿತು.

ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ನಡೆಸಲು, ನವಂಬರ್‍ನಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಜೆ.ಆರ್ ಕೆಂಚೇಗೌಡರು ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್, ಖಜಾಂಚಿ ಶಿವಪ್ರಕಾಶ್, ಉಪಾಧ್ಯಕ್ಷ ರಾದ ಗಣೇಶ್ ಕೆ.ಎಸ್, ಮಹಾಪೋಷಕರಾದ ಸೊಗಡು ವೆಂಕಟೇಶ್, ಸಂಘಟನಾ ಸಂಚಾಲಕರಾದ ಸೋಮಶೇಖರ್ ಕೆರಗೋಡು.ಎನ್.ರವಿಕುಮಾರ್ ಉಪಸ್ಥಿತರಿದ್ದರು.