ಸುಂಟಿಕೊಪ್ಪ ಸೆ.10 : ಗೌರಿ ಗಣೇಶ ಹಬ್ಬದ ಹಿನ್ನೆಲೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಉತ್ಸವ ಸಮಿತಿಗಳು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿಯಮ ಮೀರಿದರೆ ಮತ್ತು ಅನಾಹುತ ಸಂಭವಿಸಿದರೆ ಸಂಬಂಧಿಸಿದ ಆಯೋಜಕರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಎಚ್ಚರಿಕೆ ನೀಡಿದ್ದಾರೆ.
ಸುಂಟಿಕೊಪ್ಪದ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀಗೌರಿ ಗಣೇಶ ಆಚರಣಾ ಸಮಿತಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧಾರ್ಮಿಕ ಸಂಪ್ರದಾಯ ಆಚರಣೆಯೊಂದಿಗೆ ಮಾರ್ಗಸೂಚಿಗಳನ್ನು ಪಾಲಿಸುವುದು ಕೂಡ ಮುಖ್ಯ ಎಂದರು.
ಉತ್ಸವ ಸಮಿತಿಗಳು ಪೊಲೀಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು. ಮುಂಜಾಗೃತಾ ಕ್ರಮವಾಗಿ ಮತ್ತು ಕಿಡಿಗೇಡಿಗಳ ಬಗ್ಗೆ ಎಚ್ಚರದಿಂದಿರಲು ಶ್ರೀಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕು. ವಿದ್ಯುತ್ ಅಳವಡಿಸುವಾಗ ಸೂಕ್ಷ್ಮತೆ ಗಮನಿಸಿ ಎಚ್ಚರ ವಹಿಸಬೇಕು. ಸಮಿತಿಯ ಇಬ್ಬರು ಪದಾಧಿಕಾರಿಗಳನ್ನು ಕಾವಲಿಗೆ ಇರಿಸಬೇಕು. ಸ್ಥಳದ ಪೂರ್ವಾಪರ ಮಾಹಿತಿ ಪಡೆದಿರಬೇಕು, ಮೂರ್ತಿ ವಿಸರ್ಜನೆಯ ವೇಳೆ ಈಜು ಬಲ್ಲವರು ಸೂಕ್ತ ಜಾಕೆಟ್ ನೊಂದಿಗೆ ನೀರಿಗಿಳಿಯಬೇಕು. ಅಲಂಕೃತ ಮಂಟಪಗಳ ಮೆರವಣಿಗೆಯ ಮಾರ್ಗ ಮತ್ತು ಸಮಯದ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಬೇಕು ಎಂದು ರಾಜೇಶ್ ಕೋಟ್ಯಾನ್ ಹೇಳಿದರು.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಮಾರ್ಗಸೂಚಿ ಕುರಿತು ಮಾಹಿತಿ ನೀಡಿದರು. ಸುಂಟಿಕೊಪ್ಪ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ ಸ್ವಾಮಿ, ಎಎಸ್ಐ ಶ್ರೀನಿವಾಸ್, ಗ್ರಾ.ಪಂ ಸದಸ್ಯರಾದ ಸೋಮನಾಥ್, ಕೊಡಗರಹಳ್ಳಿ ಸುನಿಲ್, ಪೊಲೀಸ್ ಸಿಬ್ಬಂದಿಗಳು ಹಾಗೂ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.









