ಕುಶಾಲನಗರ ಏ.22 : ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಫಿತರ್ ಹಬ್ಬವನ್ನು ಕುಶಾಲನಗರದ ಹನಫಿ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಮೂವತ್ತು ದಿನಗಳ ವ್ರತಾಚರಣೆಯ ನಂತರ ದಾನದ ಹಬ್ಬವಾದ ಈದುಲ್ ಫಿತರ್ ಹಬ್ಬದ ಆಚರಣೆಗೆ ಮುಂದಾದ ಹನಫಿ ಬಾಂಧವರು, ಕುಶಾಲನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳಿ ಕುಶಾಲನಗರದ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ನೆರೆಯವನು ಹಸಿದಿರುವಾಗ ತಾನು ಹೊಟ್ಟೆ ತುಂಬಿಸಿಕೊಳ್ಳುವವನು ನನ್ನವನಲ್ಲ ಎಂದು ಹೇಳಿದ ಪ್ರವಾದಿ ಪೈಗಂಬರ್ ಮುಹಮ್ಮದ್ ಅವರ ಸಂದೇಶವನ್ನು ಸಾರಿದ ಜಾಮಿಯಾ ಮಸೀದಿ ಧರ್ಮಗುರುಗಳು, ಎಲ್ಲರೂ ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ಜೀವಿಸುವಂತೆ ಕರೆ ನೀಡಿದರು.
ನಂತರ ಪರಸ್ಪರ ಈದುಲ್ ಫಿತರ್ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡು ಸಮಾಜಕ್ಕೆ ಸೌಹಾರ್ದತೆಯ ಸಂದೇಶವನ್ನು ಸಾರಿದರು.
ಈ ಸಂದರ್ಭ ಮಾತನಾಡಿದ ಕುಶಾಲನಗರದ ಜಾಮಿಯಾ ಮಸೀದಿ ಸದಸ್ಯರಾದ ಎಸ್.ಆದಂ, ದಾನದ ಹಬ್ಬವೆಂದೇ ಕರೆಯಲ್ಪಡುವ ಈದುಲ್ ಹಬ್ಬವನ್ನು ಕುಶಾಲನಗರದ ಈದ್ಗಾ ಮೈದಾನದಲ್ಲಿ ಆಚರಿಸಲಾಯಿತು. ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದೇವೆ. ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂದ ಅವರು, ಸರ್ವರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭ ಜಾಮಿಯಾ ಮಸೀದಿ ಕಮಿಟಿ ಪದಾಧಿಕಾರಿಗಳು, ಊರಿನ ಹಿರಿಯರು ಹಾಗೂ ಕುಶಾಲನಗರದ ಹನಫಿ ಬಾಂಧವರು ಇದ್ದರು.









