ಸೋಮವಾರಪೇಟೆ ಏ.28 : ಕಾಫಿ ಬೆಳೆಗಾರರ 10 ಎಚ್.ಪಿ ವರೆಗಿನ ಪಂಪ್ಸೆಟ್ಗಳಿಗೆ ಯಾವುದೇ ಷರತ್ತಿಲ್ಲದೆ ಉಚಿತ ವಿದ್ಯುತ್ ನೀಡಬೇಕು. ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ರೈತರ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡುವ ರಾಜಕೀಯ ಪಕ್ಷವನ್ನು ರೈತರು ಬೆಂಬಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕ ಮನವಿ ಮಾಡಿದೆ.
ಕೊಡಗಿನಲ್ಲಿ ರೈತರೇ ಕಾಫಿ ಬೆಳೆಯುತ್ತಿದ್ದಾರೆ. ರೈತರನ್ನು ವಂಚಿಸುವ ಸರ್ಕಾರಗಳಿಗೆ ಮತ ನೀಡಿ ಇವತ್ತು ರೈತರು ಬೀದಿಗೆ ಬಂದಿದ್ದಾರೆ. ಅತೀವೃಷ್ಟಿ, ಅನಾವೃಷ್ಟಿಯಿಂದ ರೈತರ ಸಾಲಗಾರರಾಗಿ ಸಂಕಷ್ಟದಲ್ಲಿದ್ದಾರೆ. ಇನ್ನಾದರೂ ರೈತರು ಬುದ್ದಿ ಕಲಿಯದಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ ಎಂದು ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇ 10 ರ ಒಳಗೆ ರಾಜಕೀಯ ಪಕ್ಷಗಳು ಕಾಫಿ ಬೆಳೆಗಾರರಿಗೆ ಭರವಸೆ ನೀಡಬೇಕು. ತಪ್ಪಿದಲ್ಲಿ ರೈತ ಸಂಘ ಒಂದು ನಿಧಾರಕ್ಕೆ ಬರಲಿದೆ ಎಂದು ಹೇಳಿದರು.
ರೈತ ಸಂಘದ ಹೋರಾಟದಿಂದ ಬೆಳೆಗಾರರ ಪಂಪ್ಸೆಟ್ಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿಲ್ಲ. ಚುನಾವಣೆ ನಡೆದ ಮಾರನೇ ದಿನವೇ ಬಿಲ್ ಬಾಕಿ ಉಳಿಸಿಕೊಂಡಿರುವ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕ್ನವರು ಕಡಿತಗೊಳಿಸಲಿದ್ದಾರೆ. ಅವತ್ತು ಬಾಯಿ ಬಡಿದುಕೊಂಡರೆ ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.
ಭತ್ತ, ಅಡಕೆ, ತೆಂಗು, ಕಬ್ಬು, ಹೊಗೆಸೊಪ್ಪು ಬೆಳೆಗಾರರಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಕಾಫಿ ಉದ್ಯಮದಿಂದ ಎರಡೂವರೆ ಸಾವಿರ ಕೋಟಿ ರೂ.ಗಳಷ್ಟು ತೆರಿಗೆಯಿಂದ ಅದಾಯ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಕಾಫಿ ಬೆಳೆಗಾರರಿಗೆ ವಾರ್ಷಿಕ 500 ಕೋಟಿ ರೂ.ಗಳನ್ನು ಉಚಿತ ವಿದ್ಯುತ್ ಕೊಡದೆ ಸರ್ಕಾರಗಳು ಮೋಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸಕ್ತ ವರ್ಷ ಒಂದೂವರೆ ತಿಂಗಳು ಮಳೆ ವಿಳಂಬವಾಗಿದೆ. ಈಗಾಗಲೇ ಕಾಫಿ ತೋಟಗಳು ರೋಗಪೀಡಿತವಾಗಿದೆ. ಮುಂದಿನ ವರ್ಷದ ಫಸಲಿನ ನಿರೀಕ್ಷೆ ಇಟ್ಟುಕೊಳ್ಳಲು ಅಸಾಧ್ಯವಾಗಿದೆ ಆದರೂ, ಸರ್ಕಾರಗಳು ಕುರುಡು ನೀತಿಯನ್ನು ಪ್ರದರ್ಶಿಸುತ್ತಿವೆ ಎಂದು ದೂರಿದರು.
ಈಗಾಗಲೇ ಸರ್ಕಾರ ಕಾಫಿ ಬೆಳೆಗಾರರ 10ಎಚ್.ಪಿ ವರೆಗಿನ ವಿದ್ಯುತ್ ಪಂಪ್ಸೆಟ್ಗಳಿಗೆ ಸಬ್ಸಿಡಿ ನೀಡಲಾಗುವುದು ಎಂದು ಹೇಳಿದೆ. ಅದರೆ, ಹಲವು ಷರತ್ತು/ನಿಬಂಧನೆಗಳಗೊಳಪಟ್ಟು, ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್ ಕಟ್ಟಿದರೆ, ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಯೋಜನೆಯ ವ್ಯವಸ್ಥೆಯಡಿ ಮರುಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ. ಇದನ್ನು ರೈತರು ಒಪ್ಪಲು ಸಾಧ್ಯವೇ ಇಲ್ಲ. ಹಿಂದೆ ಅಡುಗೆ ಅನಿಲದ ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ಹಾಕುತ್ತೇವೆ ಎಂದು ಮೋಸ ಮಾಡಿದ್ದಾರೆ. ಇದರ ಹಣೆಬರಹವೂ ಇದೇ ಆಗುತ್ತದೆ ಎಂದು ಸಂಘದ ಸಂಚಾಲಕ ಎಸ್.ಬಿ. ರಾಜಪ್ಪ ದೂರಿದರು.
ಸೋಮವಾರಪೇಟೆ ತಾಲ್ಲೂಕಿನಲ್ಲಿ 5 ಸಾವಿರ ಕಾಫಿ ಬೆಳೆಯ ವಿದ್ಯುತ್ ಪಂಪ್ಸೆಟ್ಗಳಿವೆ. ಅದರಲ್ಲಿ 4 ಸಾವಿರ ಮಂದಿ ಸಬ್ಸಿಡಿಗೆ ಅರ್ಜಿ ಸಲ್ಲಿಸಿಲ್ಲ. ಚುನಾವಣೆಯ ನಂತರ ಎಲ್ಲ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆ. ನಿಗದಿತ ಶುಲ್ಕ, ವಿದ್ಯುತ್ ಬಿಲ್ ಮೇಲೆ ಬಡ್ಡಿ, ಚಕ್ರಬಡ್ಡಿ ಸೇರಿದಂತೆ ಬಡ ಕಾಫಿ ಬೆಳೆಗಾರರ ವಿದ್ಯುತ್ಬಿಲ್ ರೂ. ಲಕ್ಷಗಳಷ್ಟು ತಲುಪಿದೆ. ಕಾಫಿ ಬೆಳೆಗಾರರು ಎಚ್ಚೆತ್ತುಕೊಂಡು ಮತ ರೈತಪರ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಕಸ್ತೂರಿ ರಂಗನ್ ವರದಿಯಂತೆ ಪಶ್ಚಿಮಘಟ್ಟ ಸೂಕ್ಷ್ಮ ಪರಿಸರ ವಲಯಕ್ಕೆ ಸೋಮವಾರಪೇಟೆ ತಾಲ್ಲೂಕಿನ 11 ಗ್ರಾಮಗಳು, ಮಡಿಕೇರಿಯ 23 ಗ್ರಾಮಗಳು, ವಿರಾಜಪೇಟೆಯ 21 ಗ್ರಾಮಗಳು ಸೇರಿವೆ. ಅಲ್ಲಿನ ರೈತರ ಎಲ್ಲಿಗೆ ಗುಳೇ ಹೋಗಬೇಕು. ವರದಿಗೆ ಅಕ್ಷೇಪವಿಲ್ಲವೆಂದು ಕೇಂದ್ರ ಸರ್ಕಾರ ಹೇಳಿಯಾಗಿದೆ. 15 ವರ್ಷ ತುಂಬಿದ ವಾಹನಗಳನ್ನು ಗುಜರಿಗೆ ಹಾಕುವ ಕಾನೂನಿನಿಂದ ರೈತರು, ಬಡವರು ಅರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇಂತಹ ಅನ್ಯಾಯಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಸಂಘದ ಕೋಶಾಧಿಕಾರಿ ಲಕ್ಷ್ಮಣ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ರಾಜಶೇಖರ್ ಇದ್ದರು.










