ಮಡಿಕೇರಿ ಏ.29 : ಹದಗೆಟ್ಟಿರುವ ಇಂದಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ನಿರ್ಧರಿಸಿದ್ದು, ಮತದಾರರು ನನಗೆ ಮತದಾನ ಮಾಡುವ ಮೂಲಕ ಜನಸೇವೆಗೆ ಅವಕಾಶ ನೀಡಬೇಕು ಎಂದು ಅಭ್ಯರ್ಥಿ ಪೊನ್ನೆಟಿ ಕೆ.ದರ್ಶನ್ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ವಿಲಾಸಿ ಜೀವನ, ಮತ್ತೊಬ್ಬರ ನಾಶವನ್ನು ಬಯಸುವುದು ಮತ್ತು ಸರ್ವಾಧಿಕಾರಿ ಧೋರಣೆ ರಾರಾಜಿಸುತ್ತಿದೆ. ಜಾತಿ ಜಾತಿಗಳ ನಡುವೆ ಒಡಕು ಮೂಡಿಸಿ ಅಶಾಂತಿ ಸೃಷ್ಟಿಸುವ ನಾಯಕರು ಹೆಚ್ಚಾಗುತ್ತಿದ್ದಾರೆ. ಈ ರೀತಿಯ ಗೊಂದಲಮಯ ವಾತಾವರಣದಿಂದ ಕ್ಷೇತ್ರವನ್ನು ಮುಕ್ತಗೊಳಿಸುವ ಚಿಂತನೆಗಳೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಮತದಾರರು ಪ್ರಮಾಣಿಕರನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಗ್ರಾಮೀಣ ಜನರನ್ನು ಒಡೆದು ಆಳಲಾಗುತ್ತಿದೆ, ಮುಗ್ಧ ಮನಸ್ಸಿನ ಬಡಜನರ ಹಾದಿ ತಪ್ಪಿಸಲಾಗುತ್ತಿದೆ. ಮದ್ಯ ವ್ಯಸನಿಗಳಾಗುತ್ತಿರುವ ಮಂದಿ ತಮ್ಮ ಭವಿಷ್ಯವನ್ನು ಮರೆಯುತ್ತಿದ್ದಾರೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ನ್ಯೂನತೆಗಳನ್ನು ಸರಿಪಡಿಸದೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಕಾಳಜಿ ವಹಿಸದೆ ಸ್ವಾರ್ಥಕ್ಕಾಗಿ ಅಧಿಕಾರವನ್ನು ಬಳಸಿಕೊಂಡು ಭ್ರಷ್ಟ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡತನ, ಅನಾರೋಗ್ಯ, ನಿರುದ್ಯೋಗ, ಮೂಲಭೂತ ಸೌಕರ್ಯಗಳ ಕೊರತೆ, ಅಧಿಕಾರ ದುರುಪಯೋಗ, ಅಧಿಕಾರಿಗಳಿಗೆ ಕಿರುಕುಳ, ಲಂಚಾವತಾರ, ಅಧಿಕಾರಿಗಳ ಆತ್ಮಹತ್ಯೆಗಳು ಹೆಚ್ಚಾಗುತ್ತಿದೆ. ಪ್ರಾಕೃತಿಕ ವಿಕೋಪ ಮತ್ತು ವನ್ಯಜೀವಿಗಳ ಉಪಟಳದಿಂದ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಡತಗಳ ವಿಲೇವಾರಿಗಾಗಿ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ವಸ್ತುಗಳ ಮೇಲೆ ಗಗನಕ್ಕೇರಿದೆ, ಪೌರಕಾರ್ಮಿಕರು, ಬಿಎಲ್ಓ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತರಿಗೆ ಸರಿಯಾದ ವೇತನ ಹಾಗೂ ಮೂಲಭೂತ ಸೌಲಭ್ಯಗಳಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ನಾಯಕರ ಕೊರತೆ ಎದುರಾಗಿದೆ. ಇದೆಲ್ಲವನ್ನು ಸರಿಪಡಿಸಬೇಕಾದರೆ ಮತದಾರರೇ ಜಾಗೃತರಾಗಬೇಕಾಗಿದೆ, ರಾಜಕೀಯ ಪಕ್ಷಗಳಿಂದ ಆಗದೆ ಇರುವ ಕಾರ್ಯಗಳನ್ನು ನಮ್ಮಂತಹ ಅಭಿವೃದ್ಧಿ ಪರ ಚಿಂತನೆಯ ಉತ್ಸಾಹಿಗಳಿಂದ ಆಗಬಹುದು ಎನ್ನುವ ವಿಶ್ವಾಸದೊಂದಿಗೆ ನಮಗೆ ಮತದಾನ ಮಾಡಿ ಪ್ರೋತ್ಸಾಹಿಸಬೇಕು ಎಂದು ದರ್ಶನ್ ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಯ ಪತ್ನಿ ಎಂ.ವಿ.ತನುಜ ಉಪಸ್ಥಿತರಿದ್ದರು.









