ಮಡಿಕೇರಿ ಮೇ 17 : ಡಿ.ಶಿವಪ್ಪ ಸ್ಮರಣಾರ್ಥ ಸುಂಟಿಕೊಪ್ಪದ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ ಮೇ 19 ರಿಂದ ಮೇ 28ರ ವರೆಗೆ ರಾಜ್ಯಮಟ್ಟದ 25ನೆ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಪ್ರವರ್ತಕರು ಹಾಗೂ ಗೋಲ್ಡ್ ಕಪ್ ದಾನಿ ಬಿ.ವಿನೋದ್ ಶಿವಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪದ ಪ್ರಾಥಮಿಕ ಸರ್ಕಾರಿ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೇ 19 ರಂದು ಮಧ್ಯಾಹ್ನ 3 ಗಂಟೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತು ಎ.ಎಸ್.ಪಿ. ಸುಂದರ್ ರಾಜ್, ಬ್ಲೂಬಾಯ್ಸ್ ಯುವಕ ಸಂಗದ ಸ್ಥಾಪಕರಾದ ಜೆರ್ಮಿ ಡಿಸೋಜ, ಹಿರಿಯ ಆಟಗಾರ ಪ್ಯಾಟ್ರಿಕ್ ಸೇರಿದಂತೆ ಹಲವಾರು ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಬಾರಿ ಪಂದ್ಯಾವಳಿಯಲ್ಲಿ ಬೆಂಗಳೂರು, ಮಂಡ್ಯ, ಮೈಸೂರು, ಕೇರಳದ ಕ್ಯಾಲಿಕಟ್, ಮಲಪುರಂ, ಕೂತುಪರಂಬು, ಕಂಬ್ಳೆ, ಉಪ್ಪಳ, ನಂಜನಗೂಡು, ಕೆಜಿಎಫ್ನ ವಾರಿಯರ್ಸ್ ಪುಟ್ಬಾಲ್ ಕ್ಲಬ್, ಕೊಡಗಿನ ಪ್ರತಿಷ್ಟಿತ ತಂಡಗಳಾದ ಕುಶಾಲನಗರ, ಮಿಡ್ ಸಿಟಿ, ಪನ್ಯ, ಬೆಟ್ಟಗೇರಿ, ಒಂಟಿಯಂಗಡಿ, ಕೊಡಗರಹಳ್ಳಿಯ ನೇತಾಜಿ ಯುವಕ ಸಂಘ, ಗದ್ದೆಹಳ್ಳದ ಎಮಿಟಿ, ಆತಿಥೇಯ ಸುಂಟಿಕೊಪ್ಪದ ಬ್ಲೂಬಾಯ್ಸ್ ಯೂತ್ ಕ್ಲಬ್ ತಂಡ ಸೇರಿದಂತೆ 22 ತಂಡಗಳಿಂದ ಗೋಲ್ಡ್ ಕಪ್ಗಾಗಿ ಹಣಾಹಣಿ ನಡೆಯಲಿದೆ ಎಂದು ತಿಳಿಸಿದರು.
ಪ್ರತಿನಿತ್ಯ ಮಧ್ಯಾಹ್ನ 3 ಗಂಟೆಯಿಂದ 2 ಪಂದ್ಯಗಳು ನಡೆಯಲಿದ್ದು, ಭಾನುವಾರ 3 ಪಂದ್ಯಗಳು ನಡೆಯಲಿದೆ. ಮೇ 27 ರಂದು ಸೆಮಿಫೈಲ್, ಮೇ28 ರಂದು ಫೈನಲ್ ಪಂದ್ಯ ಜರುಗಲಿದೆ ಎಂದರು.
ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ ಡಿ.ಶಿವಪ್ಪ ಸ್ಮರಣಾರ್ಥ ಗೋಲ್ಡ್ ಕಪ್ ಮತ್ತು 1 ಲಕ್ಷ ರೂ.ನಗದು, ದ್ವಿತೀಯ ಬಹುಮಾನವಾಗಿ 50 ಸಾವಿರ ನಗದು ಮತ್ತು ಟ್ರೋಫಿ ಹಾಗೂ ವೈಯಕಿಕ ಬಹುಮಾನಗಳನ್ನು ನೀಡಲಾಗುವುದೆಂದು ತಿಳಿಸಿದರು.
ಈ ಬಾರಿ ಬ್ಲೂಬಾಯ್ಸ್ ಫುಟ್ಬಾಲ್ ಪಂದ್ಯಾವಳಿಯ ಪ್ರಯುಕ್ತ ಪ್ರತ್ಯೇಕ ಫೇಸ್ ಬುಕ್ ಮತ್ತು ವಾಟ್ಸಪ್ ಖಾತೆ ತೆರೆಯಲಾಗಿದ್ದು, ಸಾವಿರಾರು ಕ್ರೀಡಾಭಿಮಾನಿಗಳಿಗೆ ಪಂದ್ಯಾವಳಿಯ ಮಾಹಿತಿ ಲಭಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯುವಕ ಸಂಘದ ಅಧ್ಯಕ್ಷ ಆಲಿ ಕುಟ್ಟಿ, ಪೋಷಕ ಪಿ.ವಿ.ಪ್ರಸನ್ನ, ಮಾಜಿ ಅಧ್ಯಕ್ಷ ಆದಿ ಶೇಷನ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್, ಸದಸ್ಯ ಜಾನ್ ಉಪಸ್ಥಿತರಿದ್ದರು.









