ಮಡಿಕೇರಿ ಮೇ 17 : ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಮಡಿಕೇರಿ-ಕುಟ್ಟ ರಸ್ತೆಯ 8.30 ಕಿ.ಮೀ.ನಿಂದ 10 ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡು ಕಾಂಕ್ರೀಟ್ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಸೋಮವಾರಪೇಟೆ ತಾಲ್ಲೂಕು ಮಡಿಕೇರಿ-ಕುಟ್ಟ ರಸ್ತೆಯ 8.30 ಕಿ.ಮೀ.ನಿಂದ 10 ಕಿ.ಮೀ.ವರೆಗಿನ ರಸ್ತೆಯಲ್ಲಿ ಮೇ, 22 ರಿಂದ ಜುಲೈ, 10 ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರು ಬದಲಿ ರಸ್ತೆಯಾದ ಮಡಿಕೇರಿ-ಸುಂಟಿಕೊಪ್ಪ-ಚೆಟ್ಟಳ್ಳಿ ಮಾರ್ಗವನ್ನು ಬಳಸುವುದು. ಈ ಬಗ್ಗೆ ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989 ರ (ತಿದ್ದುಪಡಿ ನಿಯಮಗಳು 1990) ನಿಯಮ 221 ಎ (2) ರಂತೆ ಅವಶ್ಯವಿರುವ ಸಂಜ್ಞೆ/ ಸೂಚನಾ ಫಲಕವನ್ನು ಅಳವಡಿಸಲು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೊಡಗು ವಿಭಾಗ ಮಡಿಕೇರಿ ಇವರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚನೆ ನೀಡಿದ್ದಾರೆ.









