ಮಡಿಕೇರಿ ಆ.29 : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೊಡಗು ಇವರ ವತಿಯಿಂದ 2023-24ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ಅರಿವು ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಶ್ರಮ ಶಕ್ತಿ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ಶ್ರಮ ಶಕ್ತಿ (ವಿಶೇಷ ಮಹಿಳಾ ಯೋಜನೆ), ಸಮುದಾಯ ಆಧಾರಿತ ತರಬೇತಿ ಯೋಜನೆಯ ಸಾಲ ಹಾಗೂ ಸಹಾಯಧನವನ್ನು ನೀಡಲಾಗುತ್ತದೆ.
ಅರಿವು ಯೋಜನೆಯಲ್ಲಿ ವೃತ್ತಿಪರ ಶಿಕ್ಷಣ ಅಂದರೆ ಎಂಬಿಬಿಎಸ್, ಎಂಡಿ, ಎಂಎಸ್, ಬಿಇ, ಬಿಟೆಕ್, ಎಂಇ, ಎಂಟೆಕ್, ಬಿಡಿಎಸ್, ಎಂಡಿಎಸ್, ಬಿ.ಆಯುಷ್, ಎಂ.ಆಯುಷ್, ಎಂಬಿಎ, ಎಂಸಿಎ, ಎಲ್ಎಲ್ಬಿ, ಬಿಆರ್ಚ್, ಎಂ.ಆರ್ಚ್ ಕೋರ್ಸ್ ಮಾಡಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ/ಡಿ-ಸಿಇಟಿ/ಪಿಜಿ-ಸಿಇಟಿ/ನೀಟ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಲ್ಲಿ ಆಯ್ಕೆಯಾಗಿರುವಂತಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವರು ವ್ಯಾಸಾಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷಕ್ಕೆ ರೂ.50 ಸಾವಿರದಿಂದ ರೂ.3 ಲಕ್ಷವರೆಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ.
ವ್ಯಾಸಂಗ ಪೂರ್ಣಗೊಳಿಸಿದ 6 ತಿಂಗಳ ನಂತರ ಅಂತಹ ವಿದ್ಯಾರ್ಥಿಯು ಶೇ2ರ ಸೇವಾ ಶುಲ್ಕದೊಂದಿಗೆ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಸಾಲ ಹಾಗೂ ಸಹಾಯಧನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ವೆಬ್ಸೈಟ್ https://kmdconline.karnataka.gov.in/ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ ಸೂಕ್ತ ದಾಖಲಾತಿಗಳ ಪ್ರತಿಗಳನ್ನು “ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ), ಮೌಲಾನಾ ಅಜಾದ್ ಭವನ, ಗ್ರಾಮಾಂತರ ಪೋಲೀಸ್ ಠಾಣೆ ಹತ್ತಿರ, ಎಫ್ಎಂಸಿ ಕಾಲೇಜು ರಸ್ತೆ, ಮಡಿಕೇರಿ ಈ ಕಚೇರಿಗೆ ಸಲ್ಲಿಸಲು ಸೂಚಿಸಿದೆ”. ಹೆಚ್ಚಿನ ಮಾಹಿತಿ ಪಡೆಯಲು ಕಚೇರಿಯ ದೂ.ಸಂ. 08272-201449 ಸಹಾಯವಾಣಿ ಸಂಖ್ಯೆ 8277799990 ನ್ನು ಸಂಪರ್ಕಿಸಬಹುದು. “ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 25 ಕೊನೆಯ ದಿನವಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.








