ಮಡಿಕೇರಿ ಅ.18 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ 9 ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಐದು ಹಂತಗಳಲ್ಲಿ ನಡೆಸುತ್ತಿರುವ ಪಾದಯಾತ್ರೆಯ ನಾಲ್ಕನೇ ಹಂತ ಅ.20 ರಿಂದ ಆರಂಭಗೊಳ್ಳಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕುಂದದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಬೊಟ್ಟಿಯತ್ನಾಡ್ (ಕುಂದ), ಕುತ್ನಾಡ್ (ಬಿ.ಶೆಟ್ಟಿಗೇರಿ) ಮತ್ತು ಬೆರಳಿನಾಡ್ (ಕಂಡಂಗಾಲ) ನ ಮೂರು ನಾಡುಗಳ ಮಂದ್ “ಕೈಮುಡಿಕೆ ಮಂದ್” ನಲ್ಲಿ ಬೆಳಗ್ಗೆ 10.30 ಗಂಟೆಗೆ ಕೊಡವ ಜನಜಾಗೃತಿ ಸಭೆ ನಡೆಯಲಿದೆ.
ಅ.21 ರಂದು ಬೆಳಗ್ಗೆ 10 ಗಂಟೆಗೆ ಬಿಟ್ಟಂಗಾಲ ಜಂಕ್ಷನ್ ಬಳಿಯಿಂದ ಪಾದಯಾತ್ರೆ ಆರಂಭಗೊಳಲಿದೆ. ನಂತರ ಪಟ್ಟಿಬಾಣೆ ಮಂದ್ ಪೆರವನಾಡ್ (ಬುಟ್ಟಂಗಾಲ) ನಲ್ಲಿ ಮತ್ತು ಮಧ್ಯಾಹ್ನ 2.30 ಗಂಟೆಗೆ ಬೋಟೋಳಿನಾಡ್ (ವಿರಾಜಪೇಟೆ ತಾಲ್ಲೂಕಿನ ಆರ್ಜಿ ಬೊಟೋಳಿ,)ನಲ್ಲಿ ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ.
ಕೊಡವ, ಕೊಡವತಿಯರು ಕೋವಿಯೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಳ್ಳಲಿದ್ದು, 9 ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಂವಿಧಾನದ ವಿಧಿಗಳಡಿಯಲ್ಲಿ ಕೊಡವ ಸಮುದಾಯಕ್ಕೆ ರಕ್ಷಣೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಅತ್ಯಂತ ಶ್ರೇಷ್ಠ ಮತ್ತು ಶಾಶ್ವತವೂ ಆಗಿರುವುದರಿಂದ ಸಂವಿಧಾನದಡಿಯಲ್ಲಿ ಕೊಡವರಂತಹ ಸೂಕ್ಷ್ಮ ಬುಡಕಟ್ಟು ಜನಾಂಗವನ್ನು ವಿಶೇಷವಾಗಿ ರಕ್ಷಿಸುವುದು ರಾಜ್ಯಾಂಗದತ್ತ ಋಣಭಾರವಾಗಿದೆ.
ಕೊಡವರು ಕೊಡವ ನೆಲದ ಪ್ರಾಚೀನ ಬುಡಕಟ್ಟು ಜನರಾಗಿದ್ದು, ಕೊಡವ ಮಂದ್ ಗಳು, ಜಲದೇವತೆ ಕಾವೇರಿ, ಸೂರ್ಯ, ಚಂದ್ರ, ಭೂಮಿತಾಯಿಯಷ್ಟೇ ಪವಿತ್ರವೂ ಆಗಿದ್ದಾರೆ. ಪ್ರಾಚೀನ ಬುಡಕಟ್ಟು ಕೊಡವ ಜನಾಂಗವನ್ನು ಈ ದೇಶದ ಜನ ಹಾಗೂ ಸರ್ಕಾರ ಸಂವಿಧಾನದ 51 ಎ.ಎಫ್ ವಿಧಿ ಮತ್ತು ವಿಶ್ವ ರಾಷ್ಟ್ರ ಸಂಸ್ಥೆಯ ಸನದ್ ನ ಪ್ರಕಾರ ರಕ್ಷಿಸಿ ಪೋಷಿಸಿ ಕಾಪಾಡಬೇಕಾಗಿದೆ.
ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮಾತ್ರ ಸೀಮಿತರಾಗಿ ಕಾಶ್ಮೀರದಲ್ಲಿ ತಾಯಿ ಬೇರನ್ನು ಹೊಂದಿದ್ದಾರೆ. ಕೊಡವರು ಕೂಡ ಕೊಡಗಿನ ಆದಿಮಸಂಜಾತರಾಗಿದ್ದು, ಕೊಡಗು ಹೊರತು ಪಡಿಸಿ ಕೊಡಗಿನ ಹೊರಗೆ ಕೊಡವರಿಗೆ ಎಲ್ಲೂ ತಾಯಿ ಬೇರಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡವ ಬಾಹುಳ್ಯ ಜನ್ಮ ಭೂಮಿಯನ್ನು ಸಂವಿಧಾನದ 244 ವಿಧಿ ಹಾಗೂ 6 ಮತ್ತು 8 ನೇ ಶೆಡ್ಯೂಲ್ ಪ್ರಕಾರ ಕೊಡವರ ಸ್ವಯಂ ಶಾಸನದ ಜನ್ಮಭೂಮಿ ಎಂದು ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್, ಬೋಡೋ ಲ್ಯಾಂಡ್, ಕರ್ಬಿ ಹಾಂಗ್ ಲಾಂಗ್ ಲ್ಯಾಂಡ್, ಗಾರೊಲ್ಯಾಂಡ್, ಜಯಂತಿಯ ಲ್ಯಾಂಡ್, ಕಾಸಿ ಹಿಲ್ಸ್ ಲ್ಯಾಂಡ್ ಇತ್ಯಾದಿ ಭಾರತದ ಈಶಾನ್ಯ ರಾಜ್ಯಗಳ ಹತ್ತು ಸ್ವಾಯತ್ತ ಪ್ರದೇಶಗಳು ಮತ್ತು ಪರಿಷತ್ ಗಳು ಹಾಗೂ ಲಡಾಕ್ ನ ಲೇಹ್ ಮತ್ತು ಲಡಾಕ್ ಬುದ್ದಿಷ್ಠ್ ಅಟೋನಮಸ್ ಕೌನ್ಸಿಲ್ ಮಾದರಿಯಲ್ಲಿ ಘೋಷಿಸಿ ಶಾಸನಬದ್ಧಗೊಳಿಸಬೇಕು ಎಂಬುವುದು ನಮ್ಮ ಬೇಡಿಕೆಯಾಗಿದೆ.
ಇದನ್ನು ಈಡೇರಿಸುವಂತೆ ಒತ್ತಾಯಿಸಿ ಸಿಎನ್ಸಿ ಸಂಘಟನೆಯಿಂದ ನಿರಂತರವಾಗಿ ಶಾಂತಿಯುತ ಹೋರಾಟಗಳನ್ನು ನಡೆಸುತ್ತಾ ಬರಲಾಗುತ್ತಿದ್ದು, ಮುಂದುವರೆದ ಭಾಗವಾಗಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ನಾಚಪ್ಪ ತಿಳಿಸಿದ್ದಾರೆ.









