ಮಡಿಕೇರಿ ನ.27 : ದೇಶಕ್ಕಾಗಿ ಹುತಾತ್ಮರಾಗಿ ತ್ರಿವರ್ಣ ಧ್ವಜವನ್ನು ಹೊದ್ದು ಬಂದ ಕ್ಯಾಪ್ಟನ್ ಪ್ರಾಂಜಲ್ ಅವರಂತಹ ಸಾವಿರಾರು ವೀರರ ಬಲಿದಾನದಿಂದಾಗಿ ಭಾರತೀಯರಾದ ನಾವು ಇಂದು ಭಯವಿಲ್ಲದೆ ಬದುಕುತ್ತಿದ್ದೇವೆ, ಭಯವಿಲ್ಲದೆ ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಿದ್ದೇವೆ ಎಂದು ಸುವರ್ಣ ನ್ಯೂಸ್ ಚಾನಲ್ ನ ಸಂಪಾದಕ ಹಾಗೂ ಸುದ್ದಿ ನಿರೂಪಕ ಅಜಿತ್ ಹನುಮಕ್ಕನವರ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಹಿಂದು ಪರಿಷದ್ ವತಿಯಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಕೊಡಗು ವೀರರ ನೆಲ, ಇಲ್ಲಿ ಪಾದಸ್ಪರ್ಷ ಮಾಡಿದಾಕ್ಷಣ ಮೈ ರೋಮಾಂಚನವಾಗುತ್ತದೆ. ದೇವಟ್ ಪರಂಬುವಿನಲ್ಲಿ ಆಕ್ರಂದನ ಕೇಳಿದಂತ್ತಾಗುತ್ತದೆ ಎಂದರು.
ಅಂದಿನಿಂದ ಇಂದಿನವರೆಗೆ ಕೊಡಗಿನಲ್ಲೂ ಬಲಿದಾನಗಳಾಗಿವೆ, ಈ ಬಲಿದಾನದ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಅಂದು ನಡೆದ ಬಲಿದಾನದಿಂದಾಗಿಯೇ ಇಂದು ಭಾಗಮಂಡಲದಲ್ಲಿ ಧೈರ್ಯವಾಗಿ ಕಾವೇರಿ ಆರತಿ ಮಾಡಲು ನಮ್ಮಿಂದ ಸಾಧ್ಯವಾಗಿದೆ. ಭಾರತೀಯ ಸಂಸ್ಕೃತಿಯ ಆಚರಣೆಯನ್ನು ನಾವು ಭಯವಿಲ್ಲದೆ ಮಾಡುತ್ತಿದ್ದೇವೆ. ಇತರ ದೇಶಗಳಲ್ಲಿ ನಮ್ಮ ಸಂಸ್ಕೃತಿಯನ್ನು ಭಯದಿಂದ ಕದ್ದುಮುಚ್ಚಿ ಆಚರಿಸಬೇಕಾಗಿದೆ. ಕಾಶ್ಮೀರದ ಶ್ರೀನಗರದ ಲಾಲ್ ಚೌಕ್ ನಲ್ಲಿ ಇಂದು ತ್ರಿವರ್ಣ ಧ್ವಜ ವರ್ಷಪೂರ್ತಿ ಹಾರಾಡುತ್ತಿದೆ. ಇದೆಲ್ಲದಕ್ಕೂ ಪ್ರಮುಖ ಕಾರಣ ಬಲಿದಾನ, ಭಾರತೀಯರಾದ ನಾವು ವೀರರ ಬಲಿದಾನವನ್ನು ಸ್ಮರಿಸಿಕೊಳ್ಳಬೇಕು ಎಂದು ಅಜಿತ್ ಹನುಮಕ್ಕನವರ್ ಹೇಳಿದರು.
ತನ್ನದೇ ಆದ ಪಾವಿತ್ರ್ಯತೆಯನ್ನು ಹೊಂದಿರುವ ತಲಕಾವೇರಿ ಮತ್ತು ಭಾಗಮಂಡಲದ ಬಗ್ಗೆ ಹೊರಗಿನವರಿಗೆ ಅಪಾರ ಗೌರವವಿದೆ, ಇದು ಕೊಡಗಿನ ಹೆಮ್ಮೆ ಎಂದು ಅವರು ಬಣ್ಣಿಸಿದರು.
ವಿಶ್ವ ಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಅವರು ಮಾತನಾಡಿ ಪವಿತ್ರ ಕಾವೇರಿ ನದಿ, ಪ್ರಕೃತಿ, ಧಾರ್ಮಿಕತೆ ಮತ್ತು ಸಂಸ್ಕೃತಿಯ ಕುರಿತು ವಿವರಿಸಿದರು.
ಭಾಗಮಂಡಲದ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಸಂಜೆ ನೂರಾರು ದೀಪಗಳು ಪ್ರಜ್ವಲಿಸಿದವು. ವೇದಘೋಷ, ಭಜನೆ, ಪ್ರಾರ್ಥನೆಯೊಂದಿಗೆ ಕಾವೇರಿ ತಾಯಿಗೆ ಶ್ರದ್ಧಾಭಕ್ತಿಯಿಂದ ಆರತಿ ಬೆಳಗಲಾಯಿತು.
ವಿಶ್ವ ಹಿಂದೂ ಪರಿಷತ್ ನ ಪ್ರಮುಖ ಮುನಿಕೃಷ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಸಂಘ ಪರಿವಾರದ ಪ್ರಮುಖರು, ಕಾರ್ಯಕರ್ತರು, ಶ್ರೀಭಗಂಡೇಶ್ವರ ದೇವಾಲಯದ ಅರ್ಚಕ ವೃಂದ ಹಾಗೂ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಕಾವೇರಿ ಆರತಿಯಲ್ಲಿ ಪಾಲ್ಗೊಂಡಿದ್ದರು.







