ಮಡಿಕೇರಿ ಮಾ.20 NEWS DESK : ಅವ್ಯಹತವಾಗಿ ನಡೆಯುತ್ತಿರುವ ವಾಣಿಜ್ಯ ಭೂಪರಿವರ್ತನೆಯಿಂದ ಕೊಡಗು ಜಿಲ್ಲೆಯ ಹಸಿರು ಹೊದಿಕೆ ಕಳಚಿಕೊಳ್ಳುತ್ತಿದೆ. ಆ ಮೂಲಕ ಜಲಮೂಲಗಳಿಗೆ ದಕ್ಕೆಯಾಗುತ್ತಿದೆ ಹಾಗೂ ಕಾವೇರಿ ನದಿಗೆ ನೀರಿನ ಒಳಹರಿವು ಕಡಿಮೆಯಾಗುತ್ತಿದೆ ಎಂದು ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಸಂಯೋಜಕ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ನಗರ ಗಂಭೀರವಾದ ನೀರಿನ ಸಮಸ್ಯೆಯಿಂದ ಬಳಲುತ್ತಿದೆ, ಅಲ್ಲಿನ ನಾಗರೀಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಅನಿಯಂತ್ರಿತ ನಗರೀಕರಣ ಮತ್ತು ಕೊಡಗಿನಲ್ಲಾಗುತ್ತಿರುವ ವಾಣಿಜ್ಯ ಭೂಪರಿವರ್ತನೆಗಳು ಕಾರಣವಾಗಿದೆ. ಜಿಲ್ಲೆಯ ಜನ ಜಾಗೃತರಾಗದಿದ್ದಲ್ಲಿ ಸಮಸ್ಯೆಗೆ ಪರಿಹಾರ ದೊರೆಯುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ ಹಣದ ಆಸೆಗಾಗಿ ವಾಣಿಜ್ಯ ಭೂಪರಿವರ್ತನೆಯಲ್ಲಿ ತೊಡಗಿರುವುದು ದುರದೃಷ್ಟಕರ. ಭೂವ್ಯವಹಾರದ ಮೂಲಕ ಭಾರೀ ಲಾಭ ಗಳಿಸಿರುವ ಶ್ರೀಮಂತರು ತಮ್ಮ ಹಣವನ್ನು ದ್ವಿಗುಣಗೊಳಿಸುವ ಸಲುವಾಗಿ ರಿಯಲ್ ಎಸ್ಟೇಟ್ಗೆ ಮರುಹೂಡಿಕೆ ಮಾಡುತ್ತಿದ್ದಾರೆ. ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶ ಭೂವ್ಯವಹಾರಕ್ಕಾಗಿ ನಾಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ವಿವಿಧ ಭಾಗಗಳಿಂದ ಬಂದು ಜಿಲ್ಲೆಯಲ್ಲಿ ವ್ಯವಹಾರದಲ್ಲಿ ತೊಡಗಿರುವ ಕೆಲವು ಖಾಸಗಿ ವ್ಯಕ್ತಿಗಳು ರಿಯಲ್ ಎಸ್ಟೇಟ್ ಗಾಗಿ ಹೂಡಿಕೆ ಮಾಡುತ್ತಿದ್ದು, ವಾಣಿಜ್ಯ ಭೂಪರಿವರ್ತನೆ ಮಿತಿ ಮೀರುತ್ತಿದೆ. ಈ ಉದ್ಯಮಿಗಳು ಇನ್ನಾದರೂ ಎಚ್ಚೆತ್ತುಕೊಂಡು ಕಾವೇರಿ ನಾಡಿನ ಉಳಿವಿಗಾಗಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಸ್ಥಗಿತಗೊಳಿಸಲಿ ಎಂದು ಮನವಿ ಮಾಡಿದರು.
ಉದ್ಯಮಿಗಳು ತಮ್ಮ ಲಾಭದ ಭಾಗವನ್ನು ಕೊಡಗಿನ ನಾಶಕ್ಕಾಗಿ ಬಳಸದೆ ಜನರ ರಕ್ಷಣೆಗೆ ದಾನ ಮಾಡಲಿ. ಭೂ ಪರಿವರ್ತನೆಗಳು ಹೆಚ್ಚಾಗಿ ಕಾನೂನು ಬಾಹಿರವಾಗಿದ್ದು, ಹೂಡಿಕೆದಾರರು ತಮ್ಮ ಹಣವನ್ನು ಕಳೆದುಕೊಳ್ಳಬಹುದು ಎಂದು ಕರ್ನಲ್ ಮುತ್ತಣ್ಣ ಗಮನ ಸೆಳೆದರು.
ರಿಯಲ್ ಎಸ್ಟೇಟ್ ಯೋಜನೆಗಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು ನೀಡದಂತೆ ನಾವು ಗ್ರಾಮ ಪಂಚಾಯಿತಿಗಳಿಗೆ ಕರೆ ನೀಡುತ್ತೇವೆ. ಗ್ರಾ.ಪಂ ಸದಸ್ಯರ ಕರ್ತವ್ಯ ತಮ್ಮನ್ನು ಚುನಾಯಿಸಿದ ಜನರ ಬೇಕು ಬೇಡಗಳನ್ನು ಪೂರೈಸುವುದೇ ಹೊರತು ಪರಿಸರ ದುರ್ಬಲ ಪ್ರದೇಶವಾಗಿರುವ ಕೊಡಗಿಗೆ ಹೆಚ್ಚು ಜನ ಪ್ರವೇಶಿಸಲು ಅನುಕೂಲ ಮಾಡಿಕೊಡುವುದಲ್ಲ. ಕೊಡಗಿನ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಕುಡಿಯುವ ನೀರು ಮತ್ತು ಕಸ ನಿರ್ವಹಣೆಗೆ ತೊಂದರೆಯಾಗಿದೆ.
ಆದ್ದರಿಂದ ಯಾವುದೇ ವಾಣಿಜ್ಯ ಭೂ ಪರಿವರ್ತನೆಗಳಿಗೆ ಎನ್ಒಸಿ ನೀಡುವುದರ ವಿರುದ್ಧ ನಿರ್ಣಯವನ್ನು ಅಂಗೀಕರಿಸಬೇಕು. ಇಲ್ಲದಿದ್ದರೆÉ ಇದು ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಪ್ರಸ್ತುತ ತೊಂದರೆಗಳನ್ನು ಉಲ್ಬಣಗೊಳಿಸುತ್ತದೆ. ಕೊಡಗು ವಿವಿಧ ಸಮುದಾಯಗಳನ್ನು ಒಳಗೊಂಡಿದೆ ಮತ್ತು ಕೆಲವೊಮ್ಮೆ ಕುಟುಂಬದ ಸಹೋದರ ಸಹೋದರಿಯರಂತೆ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತೇವೆ. ಆದರೆ ನಮ್ಮ ಮನೆ ಹೊತ್ತಿ ಉರಿಯುವಾಗ ಭಿನ್ನಾಭಿಪ್ರಾಯ ಮರೆತು ಸುಂದರವಾದ ತಾಯಿನಾಡನ್ನು ಮತ್ತು ಕಾವೇರಿ ನದಿಯ ನೀರನ್ನು ಸಂರಕ್ಷಿಸಿಕೊಳ್ಳಲು ಒಂದಾಗಬೇಕಾಗಿದೆ ಎಂದು ಕರ್ನಲ್ ಮುತ್ತಣ್ಣ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಪ್ರಮುಖರಾದ ಮೋದೂರು ಶಿವಶಂಕರ್, ಗೋಪಿನಾಥ್ ತಿಮ್ಮಯ್ಯ ಹಾಗೂ ಶ್ಯಾಂ ಬೋಪಯ್ಯ ಉಪಸ್ಥಿತರಿದ್ದರು.







