ಮಡಿಕೇರಿ ಜು.29 NEWS DESK : ಕೊಡವ ಎಜುಕೇಷನ್ ಸೊಸೈಟಿಯ ಅಧೀನಕ್ಕೊಳಪಡುವ ಪೊನ್ನಂಪೇಟೆಯ ಕೂರ್ಗ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಐ ಮತ್ತು ಎಂಎಲ್ ವಿಭಾಗದ ವತಿಯಿಂದ ಎಐ ಅಪ್ರಿಸಿಯೇಷನ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ದೇಶದ ಪ್ರತಿಷ್ಠಿತ ಐಟಿ ಉದ್ಯಮ ಸಂಸ್ಥೆಯಾದ ಇನ್ಫೋಸಿಸ್ ಸಂಸ್ಥೆಯ ಸ್ಪಿಂಗ್ ಬೋರ್ಡ್ ವೇದಿಕೆಯೊಂದಿಗೆ ಸಿಐಟಿ ಕಾಲೇಜು ಒಡಂಬಡಿಕೆ ಮಾಡಿಕೊಂಡಿತು. ಈ ಮಹತ್ವದ ಯೋಜನೆಗೆ ಸಿ.ಐ.ಟಿ.ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಸವರಾಜ್ ಮತ್ತು ಇನ್ಫೋಸಿಸ್ ಸಂಸ್ಥೆಯ ಸಹ ಉಪಾಧ್ಯಕ್ಷ ಕೆ.ಎಸ್.ಸುಂದರ್ ಅವರು ಸ್ಪಿಂಗ್ ಬೋರ್ಡ್ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಎಸ್.ಸುಂದರ್ ಮಾತನಾಡಿ, ಕೃತಕ ಬುದ್ಧಿಮತ್ತೆ ಎನ್ನುವುದು ಪ್ರಸ್ತುತ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ ಮತ್ತು ವ್ಯಾಪಕವಾಗಿ ಎಲ್ಲೆಡೆ ಪಸರಿಸಿದೆ. ಇದು ವಿಪುಲ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುತ್ತಿದೆ. ಈ ಎಐ ತಂತ್ರಜ್ಞಾನದ ಬಳಕೆಯಿಂದ ಕ್ಲಿಷ್ಟಕರವಾದ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳ್ಳಿಸಬಹುದಾಗಿದ್ದು, ಇದು ಮನುಷ್ಯನ ಅಸ್ತಿತ್ವವನ್ನು ತಂತ್ರಜ್ಞಾನದ ಮೂಲಕ ಕೃತಕವಾಗಿ ಸೃಷ್ಟಿಸುವ ವಿಧಾನವಾಗಿದೆ ಎಂದರು. ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ ಮತ್ತು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು. ಇನ್ಫೋಸಿಸ್ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಬಿಳಿಗಿರಿ ಮಾತನಾಡಿ, ಸ್ಪಿಂಗ್ ಬೋರ್ಡ್ ಕಾರ್ಯವೈಖರಿ ಮತ್ತು ವಿದ್ಯಾರ್ಥಿಗಳಿಗೆ ಹೇಗೆ ಸಹಕಾರಿಯಾಗಿದೆ ಎಂಬುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಕೊಡವ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿಯಾದ ಸಿ.ಪಿ.ರಾಕೇಶ್ ಪೂವಯ್ಯ ಮಾತನಾಡಿ, ತಂತ್ರಜ್ಞಾನದ ಬಳಕೆಯಿಂದ ವಿದ್ಯಾರ್ಥಿಗಳ ಕೌಶಲ್ಯವನ್ನು ವೃದ್ಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸ್ಪಿಂಗ್ ಬೋರ್ಡ್ ಸಹಕಾರಿಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ, ಪ್ರಚಲಿತ ವಿದ್ಯಮಾನದಲ್ಲಿ ಕೃತಕ ಬುದ್ದಿ ಮತ್ತೆ ಹೆಚ್ಚು ಆಕರ್ಷಿಸುತ್ತಿದೆ. ಜೊತೆಗೆ ಇದು ವ್ಯಾಪಕವಾಗಿ ಉದ್ಯೋಗಾವಕಾಶವನ್ನು ಸೃಷ್ಟಿಸಿಸುತ್ತಿದೆ. ಅಭಿವೃದ್ಧಿ ಪಥದಲ್ಲಿ ಜಗತ್ತು ಮುನ್ನಡೆಯುವಲ್ಲಿ ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದೆ. ತಂತ್ರಜ್ಞಾನದ ಬಳಕೆಯು ಜಗತ್ತಿನ ಒಳಿತಿಗಾಗಿ ಮಾತ್ರ ಉಪಯೋಗಿಸಬೇಕು ಎಂದು ಕರೆ ನೀಡಿದರು.ಇನ್ಫೋಸಿಸ್ ಸೀನಿಯರ್ ಪ್ರಾಂಶುಪಾಲ ಆರ್.ಕೆ.ಕಿರಣ್ ಮಾತನಾಡಿ, ಪವರ್ ಬಿಐ ತಂತ್ರಾಂಶವು ದತ್ತಾಂಶ ವಿಶ್ಲೇಷಣೆಯಲ್ಲಿ ಹೇಗೆ ಸಹಕಾರಿಯಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ರ್ಯಕ್ರಮದಲ್ಲಿ ಸಿ.ಐ.ಟಿ.ಪ್ರಾಧ್ಯಾಪಕ ವೃಂದ ಮತ್ತು ಬೋಧಕೇತರ ವೃಂದ ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಅತ್ಯಾಧುನಿಕ ಎಐ ತಂತ್ರಜ್ಞಾನ ಬಳಸಿ ಮಾನವ ತದ್ರೂಪಿಯಾದ ಅವಿನ್ಯ ನಿರೂಪಣೆಯೂ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನ ಸೆಳೆಯಿತು. ಎಐ ಮತ್ತು ಎಂಎಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಬಿ.ಬಿ.ರಾಮಕೃಷ್ಣ ಸ್ವಾಗತಿಸಿದರು. ನಾಲ್ಕನೇ ಸೆಮಿಸ್ಟರ್ ಇಂಜಿನಿಯರಿAಗ್ ವಿಭಾಗ ವಿದ್ಯಾರ್ಥಿನಿ ಜಾನವಿ ವಂದಿಸಿದರು. ಎಐ ಅಪ್ರಿಸಿಯೇಷನ್ ದಿನಾಚರಣೆಯ ಪ್ರಯುಕ್ತ ಎಐ ಮತ್ತು ಎಂಎಲ್ ಇಂಜಿನಿಯರಿAಗ್ ವಿಭಾಗದ ವತಿಯಿಂದ ವಿವಿಧ ಸ್ಪರ್ಧೆಯನ್ನು ನಡೆಯಿತು. ಇದೇ ಸಂದರ್ಭ ಕೋಡಿಂಗ್ ಸ್ಪರ್ಧೆಯಾದ ಕೋಡೋಥಾನ್ 2.0 ಮತ್ತು ಉತ್ಕರ್ಷ್ 2.0 ಮಿನಿ ಪ್ರಾಜೆಕ್ಟ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರಿನ ಕೊಕೇನ್ ರೊಬೊಟಿಕ್ಸ್ ನಿರ್ದೇಶಕರಾದ ಎ.ಕೆ.ಮಾಚಮ್ಮ, ಸಿ.ಐ.ಟಿ. ಎಐ ಮತ್ತು ಎಂಎಲ್ ಇಂಜಿನಿಯರಿಂಗ್ ವಿಭಾಗದ ಆರನೇ ಸೆಮಿಸ್ಟರ್ ನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಟರ್ಶಿಪ್ ಪ್ರಮಾಣಪತ್ರ ನೀಡಿದರು.











