

ಮಡಿಕೇರಿ NEWS DESK ಡಿ.24 : ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಡಿಕೇರಿಗೆ ದಾಖಲೆ ಸಂಖ್ಯೆಯ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದ್ದು, ವಾಹನದಟ್ಟಣೆಯನ್ನು ತಡೆಯಲು ವರ್ತಕರು ನಾಲ್ಕು ಚಕ್ರದ ವಾಹನವನ್ನು ಬಳಸದೆ ಆದಷ್ಟು ದ್ವಿಚಕ್ರ ವಾಹನದಲ್ಲೇ ಸಂಚರಿಸುವ0ತೆ ನಗರ ಚೇಂಬರ್ ಆಫ್ ಕಾಮರ್ಸ್ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಚೇಂಬರ್ ಆಫ್ ಕಾಮರ್ಸ್ನ ನಗರಾಧ್ಯಕ್ಷ ಸಂತೋಷ್ ಅನ್ವೇಕರ್, ಮಡಿಕೇರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಭಾರೀ ವಾಹನದಟ್ಟಣೆ ಎದುರಾಗುವ ಸಂಭವವಿದೆ. ಆದ್ದರಿಂದ ಸ್ಥಳೀಯ ವರ್ತಕರು ಅಗತ್ಯವಿದ್ದರೆ ಮಾತ್ರ ನಾಲ್ಕು ಚಕ್ರದ ವಾಹನದಲ್ಲಿ ಸಂಚರಿಸುವ0ತೆ ಕೋರಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಸಂಚರಿಸುವುದರಿ0ದ ನಗರದಲ್ಲಿ ವಾಹನದಟ್ಟಣೆ ಕಡಿಮೆಯಾಗುತ್ತದೆ. ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸ್ ಇಲಾಖೆಗೆ ಸಹಕರಿಸಿದಂತಾಗುತ್ತದೆ. ವಸ್ತುಗಳ ಖರೀದಿಗೆ ಅಂಗಡಿಗಳಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ. ಹೆಸರುವಾಸಿ ಪ್ರವಾಸಿತಾಣಗಳಿರುವ ಮಡಿಕೇರಿ ನಗರವನ್ನು ಟ್ರಾಫಿಕ್ ಫ್ರೀ ಪ್ರವಾಸಿತಾಣವನ್ನಾಗಿ ಮಾಡಲು ಎಲ್ಲರೂ ಸಹಕಾರ ನೀಡಬೇಕೆಂದು ಸಂತೋಷ್ ಅನ್ವೇಕರ್ ಮನವಿ ಮಾಡಿದ್ದಾರೆ.








