
ಮಡಿಕೇರಿ ಏ.25 NEWS DESK : ಸಮರ್ಥ ಕನ್ನಡಿಗರು ಕೊಡಗು ಜಿಲ್ಲಾ ಘಟಕ ಮತ್ತು ಮುಂಬೈ ನ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಮುಂಬೈ, ಇವುಗಳ ಜಂಟಿ ಆಶ್ರಯದಲ್ಲಿ ಮೇ 3 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ನ ಸತ್ಕಾರ್ ಭವನದಲ್ಲಿ ರಾಜ್ಯ ಮಟ್ಟದ ಸಾಹಿತ್ಯ -ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್ ಟಿ ಈ ಸಮಾರಂಭದ ಆಶಯ ನುಡಿಗಳನ್ನಾಡುವರು. ಮುಂಬೈಯ ದಿ. ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ನ ಸಂಸ್ಥಾಪಕ ಶ್ರೀದೇವಿ ಚಂದ್ರಶೇಖರ್ ರಾವ್ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ ಪಿ ರಮೇಶ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಂಬೈ ಯ ಸಾಹಿತಿ ಗೋಪಾಲ್ ತ್ರಾಸಿ ಅವರ ‘ ನುಡಿ ತೇರು ‘ ಹಾಗೂ ದಿ. ಚಂದ್ರಶೇಖರ್ ರಾವ್ ಅವರ ‘ ಹರಟೆ ‘ ಗಳು ಎನ್ನುವ ಎರಡು ಕೃತಿಗಳನ್ನು ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಲೋಕಾರ್ಪಣೆ ಮಾಡುವರು. ಸಾಹಿತಿ ಹಾಗೂ ರಂಗಭೂಮಿ ಕಲಾವಿದರೂ ಆಗಿರುವ ಮುಂಬೈ ಯೂನಿಯನ್ ಬ್ಯಾಂಕ್ ನ ಹಿರಿಯ ಪ್ರಬಂಧಕ ಗೋಪಾಲ್ ತ್ರಾಸಿ ಹಾಗೂ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ನ ಉಪಾಧ್ಯಕ್ಷ ಪ್ರತಾಪ್ ಶೇಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಂದು ಲೋಕಾರ್ಪಣೆಗೊಳ್ಳಲಿರುವ ಶ್ರೀ. ಗೋಪಾಲ್ ತ್ರಾಸಿಯವರ ನುಡಿ ತೇರು ಕೃತಿಯ ಬಗ್ಗೆ ಲೇಖಕಿಯಾಗಿರುವ ಮಂಡ್ಯದ ಶ್ವೇತಾ ಮತ್ತು ದಿ. ಚಂದ್ರಶೇಖರ್ ರಾವ್ ಅವರ ಹರಟೆಗಳು ಕೃತಿಯ ಬಗ್ಗೆ ಲೇಖಕಿ ಮುಂಬೈ ಯ ಡಾ. ಕುಸುಮ ಮಾತನಾಡುವರು. ಸಮಾಜ ಸೇವೆಗಾಗಿ ಪುಷ್ಪಾ ಕೃಷ್ಣಾನಂದ ಶೇಟ್ ಹಾಗೂ ನಿರೂಪಣಾ ಕೌಶಲ್ಯಕ್ಕಾಗಿ ಮುನೀರ್ ಅಹಮ್ಮದ್ ಅವರನ್ನು ಗೌರವಾರ್ಪಣೆಯೊಂದಿಗೆ ಸನ್ಮಾನಿಸಲಾಗುವುದು. ಲೇಖಕಿ ಸ್ಮಿತಾ ಅಮೃತರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳ ಕವಿಗಳು ಭಾಗವಹಿಸಲಿದ್ದಾರೆ. ಮೂರ್ನಾಡಿನ ಶಿವಂ ನೃತ್ಯ ತಂಡ, ಮಡಿಕೇರಿಯ ಜನನಿ ಮತ್ತು ತಂಡದಿಂದ ನೃತ್ಯ ಹಾಗೂ ಕುಶಾಲನಗರದ ಸ್ನೇಹಸಿರಿ ಕಲಾ ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ಸಮರ್ಥ ಕನ್ನಡಿಗರು ಸಂಸ್ಥೆ ಕೊಡಗು ಜಿಲ್ಲಾ ಘಟಕದ ಪ್ರಧಾನ ಸಂಚಾಲಕಿ ಜಯಲಕ್ಷ್ಮಿ ಕೆ. ತಿಳಿಸಿದ್ದಾರೆ.











