
ಮಡಿಕೇರಿ ಏ.30 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ “ಚಳವಳಿ ಮತ್ತು ಸಾಹಿತ್ಯ ಅಂತರ್ ಸಂಬಂಧ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕರ್ನಾಟಕ ಸರ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಅಲ್ಲಾರಂಡ ರಂಗಚಾವಡಿ ಸಹಕಾರದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರವನ್ನು ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ವಿಶೇಷ ಉಪನ್ಯಾಸ ನೀಡಿ, ಕಾಯಕ ಜೀವಿಗಳ ಶ್ರಮಕ್ಕೆ ತಕ್ಕ ಪ್ರತಿಫಲವಿರಲಿಲ್ಲ. ಜಾತಿ ಧರ್ಮದ ಕಾರಣಕ್ಕಾಗಿ ಕೊಲ್ಲುವುದು ಮಹಾಪಾತಕಗಳು ಎಂದು ಶರಣರು ಈ ಹಿಂದೆಯೇ ಹೇಳಿದ್ದಾರೆ ಎಂದರು. ಪಂಪನ “ಮನುಷ್ಯ ಜಾತಿ ತಾನೊಂದೆ ವಲಂ”, ಕನಕದಾಸರ ” ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂಬ ನುಡಿಗಳನ್ನಾಡುತ್ತಾ, ಅರಿವು ಮತ್ತು ಆಚಾರವನ್ನು ಕುರಿತಂತೆ ಸಮ್ಯಕ್ ಜ್ಞಾನಿಗಳಲ್ಲದವರ ಮುಖ ನೋಡಲಾಗದು, ನಾಮವ ಹೊತ್ತು ತಿರುಗುವ ಗಾವಿಲರ ಮುಖವನ್ನು ನೋಡಲಾಗದು ಎಂದು ಹೇಳಿದರು. ಹೀಗೆ ಪಂಪನಾದಿಯಾಗಿ ಹೊಸಗನ್ನಡ ಕಾಲದವರೆಗಿನ ದಲಿತ-ಬಂಡಾಯ ಸಾಹಿತ್ಯದವರೆಗಿನ ವಿಸ್ತಾರವನ್ನು, ಚಳವಳಿ ಸಾಹಿತ್ಯದ ಅಂತರ್ ಸಂಬಂಧದ ವಿವಿಧ ಮಜಲುಗಳನ್ನು ಪ್ರಸ್ತಾಪಿಸಿದರು. ಚಕೋರ-ಕೊಡಗು ಜಿಲ್ಲಾ ಸಂಚಾಲಕರಾದ ಡಾ.ಜೆ.ಸೋಮಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಪಂಪನಿಂದ ಹಿಡಿದು ಇಂದಿನ ಯುವ ಬರಹಗಾರರವರೆಗೆ ಸಾಹಿತ್ಯ ಯಾವ ರೀತಿಯಾಗಿ ಜೀವಪರವಾದ ಚಳವಳಿ ಆಗಿತ್ತು ಎಂಬುದನ್ನು ಯುವಜನತೆ ತಿಳಿದುಕೊಳ್ಳುವಂತದ್ದು ಬಹಳ ಮುಖ್ಯ ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಚಿಕ್ಕಮಗಳೂರು ಗಣೇಶ ಮಾತನಾಡಿ, ‘ಅಂಬೇಡ್ಕರ್ ಅವರು ಒಬ್ಬರೇ ಒಂದು ಚಳವಳಿ’ ಎನ್ನುತ್ತಾ “ಅಂಬೇಡ್ಕರ್ ಅವರನ್ನು ಸಾಮಾಜಿಕ ನ್ಯಾಯದ ತಾಯಿ ಎಂದು ಕರೆಯಬಹುದಾದರೆ, ಸಂವಿಧಾನವನ್ನು ಚಳವಳಿಗಳ ಮಹಾತಾಯಿ” ಎಂದು ಕರೆಯಬಹುದು ಎಂದು ಹೇಳಿದರು. ಚಳವಳಿ ಎನ್ನುವುದು ಮುಟ್ಟುವುದನ್ನೇ ನಿಷೇಧಿಸಿದ ಸಾಮಾಜಿಕ ವ್ಯವಸ್ಥೆಯಲ್ಲಿ ಪರಸ್ಪರ ಮುಟ್ಟುವುದನ್ನು ಹೇಳಿಕೊಟ್ಟ ಬಹಳ ದೊಡ್ಡ ಚಿಂತನೆಯನ್ನು ನೀಡಿತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ, ಸಾಮಾಜಿಕ ಪರಿವರ್ತನೆಯಲ್ಲಿ ಸಾಹಿತಿಗಳ ಪಾತ್ರ ಅತಿ ಮುಖ್ಯ ಎಂದರು. ಪ್ರಪಂಚದ ಗಮನವನ್ನು ಸೆಳೆದ ಫ್ರಾನ್ಸಿನ ಕ್ರಾಂತಿ ಇನ್ನಿತರ ಚಳವಳಿಗಳನ್ನು ಸ್ಮರಿಸುತ್ತಾ, ರೂಸೋ, ವಾಲ್ವೈರ್, ಮಾಂಟೆಸ್ಕ್ಯೂ ಇಂತಹ ಸಾಹಿತಿಗಳು ಸಮಾನತೆ, ಸ್ವಾತಂತ್ರ್ಯದ ಬಗ್ಗೆ ಜನರಿಗೆ ತಿಳಿ ಹೇಳಿ ಕ್ರಾಂತಿಗೆ ಕಾರಣರಾದರು. ಸಾಹಿತಿಗಳು ತಮ್ಮ ಬರವಣಿಗೆಗಳ ಮೂಲಕ ಇತಿಹಾಸ, ಭೌಗೋಳಿಕ ಮತ್ತು ಸಾಮಾಜಿಕ ಸಮಸ್ಯೆಗಳ ಅರಿವನ್ನು ಸಾರ್ವಜನಿಕರಿಗೆ ನೀಡುತ್ತಾರೆ. “ವಿಜ್ಞಾನ ಬೇಕು ಅದರ ಜೊತೆ ಮಾನವೀಯ ಮೌಲ್ಯಕ್ಕೆ ಆಧ್ಯತೆ ನೀಡುವ ಶಿಕ್ಷಣ ಅತಿ ಮುಖ್ಯ” ಎಂದರು. ಸಾಹಿತ್ಯದ ಮೂಲಕ ಸಾಹಿತಿಗಳು ಸಮಾಜ ಸೇವೆ ಮಾಡುತ್ತಿದ್ದಾರೆ. ಆ ಸಮಾಜ ಸೇವೆ ಮಾಡುವ ಮೂಲಕ ಅವರ ಹೆಸರು, ಅವರ ಸೇವೆ ಅಜರಾಮರವಾಗುತ್ತದೆ. ನಮ್ಮ ಜೀವಿತದ ಅವಧಿಯಲ್ಲಿ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಗಮನಿಸಿ. ರಾಜಾರಾಮ್ ಮೋಹನ್ ರಾಯ್, ಅಂಬೇಡ್ಕರ್, ಅಬ್ದುಲ್ ಕಲಾಂ ಅವರ ಕೊಡುಗೆ ಅಪಾರ ಹಾಗಾಗಿ ನಮ್ಮ ಸಮಾಜ ಇಂದಿಗೂ ಅವರನ್ನು ಸ್ಮರಿಸುತ್ತದೆ ಎಂದರು.
ಉಪನ್ಯಾಸಕರಾದ ಮುಖೇಶ್ ಸ್ವಾಗತಿಸಿದರು, ಡಾ. ಟಿ.ಎಸ್.ಮಹಾಲಕ್ಷ್ಮಿ ನಿರೂಪಿಸಿದರು, ಕೆ.ಜಿ.ರಮ್ಯಾ ವಂದಿಸಿದರು.









