ಕುಶಾಲನಗರ, ಮೇ 8 NEWS DESK : 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಭಕ್ತಿ ಭಂಡಾರಿ, ಕಾಯಕಯೋಗಿ ಬಸವಣ್ಣನವರು ನುಡಿದಂತೆ ಹಾಗೂ ಪ್ರತಿಪಾದನೆ ಮಾಡಿದ ಸಮ ಸಮಾಜ ನಿರ್ಮಾಣ ಕಾರ್ಯವು ಪ್ರಸ್ತುತ ಸಂದರ್ಭದಲ್ಲಿ ಬಹಳ ಅವಶ್ಯಕತೆ ಇದೆ ಎಂದು ಕೊಡಗು ವಿಶ್ವವಿದ್ಯಾಲಯಯ ಕನ್ನಡ ಉಪನ್ಯಾಸಕ ಡಾ ಜಮೀರ್ ಅಹ್ಮದ್ ಅಭಿಪ್ರಾಯಪಟ್ಟರು. ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮದಲ್ಲಿ ಬಸವ ಸೇವಾ ಸಮಿತಿಯ ವತಿಯಿಂದ ಗ್ರಾಮದ ಸಂತೆಮಾಳದ ಮಾರುಕಟ್ಟೆ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶರಣರ ವಚನ ಚಳವಳಿ ಕುರಿತು ಉಪನ್ಯಾಸ ನೀಡುತ್ತಾ, ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಮೌಢ್ಯ ನಿವಾರಣೆಗೆ ಬಸವಣ್ಣನವರು ಸಾಮಾಜಿಕ ಕ್ರಾಂತಿ ನಡೆಸಿದರು ಎಂದರು. 12ನೇ ಶತಮಾನದ ಎಂದಾಗ ಪ್ರತಿಯೊಬ್ಬರೂ ನೆನಪಿಸಿಕೊಳ್ಳುವುದು ಅಂದಿನ ವಚನ ಸಾಹಿತ್ಯ ಚಳವಳಿ. ಅಂದು ಅನುಭವ ಮಂಟಪದಲ್ಲಿ ಎಲ್ಲ ವರ್ಗದವರಿಗೂ ಅದರಲ್ಲೂ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವ ಮೂಲಕ ಸ್ತ್ರೀ ಸಮಾನತೆ ನಾಂದಿ ಹಾಡಿದರು. ಸಮಾಜದಲ್ಲಿ ಭಾತೃತ್ವ, ಸಮಾನತೆ, ಶಾಂತಿ, ನೆಮ್ಮದಿಯ ಸಂದೇಶವನ್ನು ಬಸವಣ್ಣನವರು 12 ನೇ ಶತಮಾನದಲ್ಲಿ ಸಾರಿದರು ಎಂದು ಡಾ ಜಮೀರ್ ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಜಗತ್ತಿನ ನಾನಾ ಸಮಸ್ಯೆಗಳ ನಿವಾರಣೆಗೆ ಶರಣರ ವಚನದಲ್ಲಿ ಪರಿಹಾರವಿದ್ದು, ಪ್ರತಿಯೊಬ್ಬರೂ ಶರಣರ ಸಮ ಸಮಾಜದ ಕನಸನ್ನು ನನಸು ಮಾಡುವತ್ತ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಅಸ್ಪ್ಶ್ಯಶ್ಯತೆ , ಮೌಢ್ಯ ತುಂಬಿ ತುಳುಕುತ್ತಿದೆ. ಇವುಗಳನ್ನೆಲ್ಲ ಹೋಗಲಾಡಿಸಲು ನಾವು ಜ್ಞಾನದ ಕಡೆಗೆ ಹೋಗುವುದು ಅತ್ಯಂತ ಅವಶ್ಯಕ ಎಂದರು. ಶಿರಂಗಾಲ ಗ್ರಾಮದಲ್ಲಿ ಯುವಕ ಎಸ್.ಜೆ.ಉಮೇಶ್ ಮತ್ತು ತಂಡದವರು ಇಂತಹ ಜನಜಾಗೃತಿ ಕಾರ್ಯಕ್ರಮದ ಮೂಲಕ ಗ್ರಾಮಸ್ಥರಲ್ಲಿ ಸಾಮರಸ್ಯ ಬೆಳೆಸಲು ಕೈಗೊಂಡಿರುವ ಕಾರ್ಯ ಶ್ಲಾಘನೀಯವಾದುದು ಎಂದು ಸದಾಶಿವ ಸ್ವಾಮೀಜಿ ಹೇಳಿದರು. ತೊರೆನೂರು ವಿರಕ್ತ ಮಠಾಧಿಪತಿ ಮಲ್ಲೇಶ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಬಸವಣ್ಣನವರ ತತ್ವ,ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ಪಿಯೂ ಕಾಲೇಜಿನ ಉಪ ಪ್ರಾಂಶುಪಾಲ ಎಸ್.ಪಿ.ರಾಜು ಮಾತನಾಡಿ, ಇಂತಹ ಕಾರ್ಯಕ್ರಮಗಳು ಗ್ರಾಮದಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ ಹಾಗೂ ಸೌಹಾರ್ದತೆ ಬೆಳೆಸಲು ಸಹಕಾರಿಯಾಗಿವೆ ಎಂದರು. ಜಿಲ್ಲಾ ವೀರಶೈವ – ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಚ್.ವಿ
ಶಿವಪ್ಪ, ಗ್ರಾಮ ಬಸವ ಸಮಿತಿಯ ಅಧ್ಯಕ್ಷ ಎಸ್.ಜೆ.ಉಮೇಶ್ ಮಾತನಾಡಿದರು. ಮಹಾಸಭಾದ ಜಿಲ್ಲಾ ಕೋಶಾಧಿಕಾರಿ ಎಚ್.ಪಿ. ಉದಯ್ ಕುಮಾರ್,
ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ನಂದೀಶ್, ಗ್ರಾಮ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್,
ಕಾರ್ಯದರ್ಶಿ ಎಂ.ಎಸ್.ಗಣೇಶ್, ಬಸವ ಸೇವಾ ಸಮಿತಿಯ ಕಾರ್ಯದರ್ಶಿ ಎನ್.ಎಸ್.ಜಯಣ್ಣ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್.ವಿಜಯಕುಮಾರ್, ಸ್ಥಳೀಯರಾದ ಎಂ.ಎಸ್.ಶಿವಾನಂದ, ಎಸ್.ಪಿ.ಪರಮೇಶ್, ಎಸ್.ಆರ್.ಶಿವಲಿಂಗ ಮತ್ತಿತರರು ಇದ್ದರು. ಶಿಕ್ಷಕ ಎಸ್.ಪಿ.ಪರಮೇಶ್ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ: : ಇದೇ ವೇಳೆ ಬಸವ ಸೇವಾ ಸಮಿತಿಯ ವತಿಯಿಂದ ಅಂತರಾಷ್ಟ್ರೀಯ ಕ್ರೀಡಾಪಟು ತೊರೆನೂರು ಗ್ರಾಮದ ಟಿ.ಎಚ್.ಗಣೇಶ್, ಶಿರಂಗಾಲ ಗ್ರಾಮದ ಅರ್ಚಕ ದೇವರಮನೆ ಚಂದ್ರಣ್ಣ , ಉಪನ್ಯಾಸಕ ಜಮೀರ್ ಅಹ್ಮದ್ ಹಾಗೂ ಸಮಿತಿಯ ಅಧ್ಯಕ್ಷ ಎಸ್.ಜೆ.ಉಮೇಶ್ ಅವರನ್ನು ಸನ್ಮಾನಿಸಲಾಯಿತು. ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು. ಇದಕ್ಕೂ ಮೊದಲು ಗ್ರಾಮದಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಯಿತು.










