
ಮಡಿಕೇರಿ NEWS DESK ಫೆ.21 : ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು “ಕೊಡವ ಸತ್ಯಾಗ್ರಹ” ನಡೆಸಿತು.
ಪ್ರಖ್ಯಾತ ಭಾಷಾ ತಜ್ಞ ಪಂಡಿತ್ ಡಾ. ಸೀತಕಾಂತ್ ಮಹಾಪಾತ್ರ ಆಯೋಗದ ವರದಿಯ ಶಿಫಾರಸ್ಸಿನಂತೆ ಕೊಡವ ತಕ್ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮಂಡಿಸಿದರು. ಕೊಂಕಣಿ ಭಾಷೆಯ ಮಾದರಿಯಲ್ಲಿ ಮತ್ತು ತುಳು ಭಾಷೆಯ ಪ್ರಸ್ತಾವನೆಯಂತೆ, ಸಂವಿಧಾನದ ವಿಧಿ 345 ಮತ್ತು 347 ರ ಅಡಿಯಲ್ಲಿ ಕೊಡವ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಹಾಗೂ ವಿಧಿ 350 ರ ಅಡಿಯಲ್ಲಿ ಆಡಳಿತ ಮತ್ತು ಶಿಕ್ಷಣದಲ್ಲಿ ಜಾರಿಗೆ ತರಬೇಕು. ಭೌಗೋಳಿಕ ಸ್ವಾಯತ್ತತೆ ಮತ್ತು ಬುಡಕಟ್ಟು ವರ್ಗೀಕರಣ: ಸಂವಿಧಾನದ ವಿಧಿ 244 ಮತ್ತು 371 ರ ಅಡಿಯಲ್ಲಿ ‘ಕೊಡವಲ್ಯಾಂಡ್’ ಭೌಗೋಳಿಕ ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕು. ಅತ್ಯಲ್ಪ ಸಂಖ್ಯೆಯಲ್ಲಿರುವ ಕೊಡವ ಜನಾಂಗಕ್ಕೆ ‘ಪರಿಶಿಷ್ಟ ಪಂಗಡ’ ವರ್ಗೀಕರಣವಾಗಬೇಕು ಮತ್ತು ವಿಧಿ 25 ಹಾಗೂ 26ರ ಅಡಿಯಲ್ಲಿ ‘ಪವಿತ್ರ ಗನ್’ ಹಕ್ಕನ್ನು ರಕ್ಷಿಸಬೇಕು.
ಕೊಡವರ ನೈಜ ಇತಿಹಾಸವನ್ನು ತಿರುಚಿ ರಾಜ್ಯದ ದಾಖಲೆಗಳಲ್ಲಿ ತಪ್ಪು ಮಾಹಿತಿ ಸೇರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮಸಂಜಾತ ಕೊಡವ ಜನಾಂಗಕ್ಕಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ನಿಗದಿಪಡಿಸಬೇಕು. ಕೊಡವ ಜನಾಂಗದ ಅಸ್ತಿತ್ವ ಮತ್ತು ಸ್ವಾಭಿಮಾನದ ರಕ್ಷಣೆಗೆ ಈ ಸಾಂವಿಧಾನಿಕ ಎಣಿಕೆ ಅತ್ಯಗತ್ಯವಾಗಿದೆ. ಕೊಡವ ಪರ್ವತವಾಸಿ ಬುಡಕಟ್ಟು ಜನಾಂಗವನ್ನು ಕೊಡವ ಪ್ರಾಂತ್ಯದ ಆದಿಮ ಪಂಗಡವೆಂದು ಗುರುತಿಸಬೇಕು ಮತ್ತು ಆದಿಮಸಂಜಾತ ಕೊಡವರನ್ನು ಸಂವಿಧಾನದ ಬುಡಕಟ್ಟು ಪಟ್ಟಿಯಲ್ಲಿ ವರ್ಗೀಕರಿಸಬೇಕು. ವಿಶ್ವಸಂಸ್ಥೆಯ ವಿಶ್ವವಿದ್ಯಾಲಯಗಳಲ್ಲಿ ‘ಕೊಡವ ಶಾಸ್ತ್ರ’ ಪೀಠವನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಕೊಡವ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಕಾನೂನುಬದ್ಧ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಯೋಜನಗಳು ದೊರೆಯುತ್ತವೆ. ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಗುರುತಿಸಲ್ಪಡುವ ಮೂಲಕ ಭಾಷೆಯ ಪ್ರತಿಷ್ಠೆ ಹೆಚ್ಚುತ್ತದೆ ಮತ್ತು ಇದನ್ನು ಕೇವಲ ಒಂದು ಉಪಭಾಷೆ ಎಂದು ಪರಿಗಣಿಸುವುದನ್ನು ತಡೆಯುತ್ತದೆ. ಶಾಲಾ ಪಠ್ಯಕ್ರಮದಲ್ಲಿ ಬೋಧನಾ ಮಾಧ್ಯಮವಾಗಿ ಕೊಡವ ಭಾಷೆಯನ್ನು ಪರಿಚಯಿಸಲು ಸುಲಭವಾಗುತ್ತದೆ, ಇದರಿಂದ ಮುಂದಿನ ಪೀಳಿಗೆಗೆ ಭಾಷೆ ವರ್ಗಾವಣೆಯಾಗುತ್ತದೆ. ಅಧಿಕೃತ ಆಡಳಿತದಲ್ಲಿ ಮತ್ತು ಕಾನೂನು ಸಂದರ್ಭಗಳಲ್ಲಿ ಕೊಡವ ಭಾಷೆಯನ್ನು ಬಳಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಧನಸಹಾಯ: ಭಾಷೆಯ ಪ್ರಚಾರ, ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ದೊರೆಯುತ್ತದೆ. ಸಾಂಸ್ಕೃತಿಕ ಸಂರಕ್ಷಣೆ: ವಿಶಿಷ್ಟ ಪ್ರಾದೇಶಿಕ ಸಂಸ್ಕೃತಿ ಮತ್ತು ಉಪಭಾಷೆಗಳನ್ನು ರಕ್ಷಿಸಲು ಅಭಿವೃದ್ಧಿ ನಿಧಿಯನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಸಿಗುತ್ತದೆ. ಸಂಸದರು ಹಾಗೂ ಶಾಸಕರು ಸಂಸತ್ತು ಮತ್ತು ವಿಧಾನಸಭೆಯಲ್ಲಿ ತಮ್ಮ ಮಾತೃಭಾಷೆಯಲ್ಲಿ ಮಾತನಾಡಬಹುದು. ಸಂಸತ್ತಿನಲ್ಲಿ ಕೊಡವ ಭಾಷೆಯಲ್ಲಿ ಮಾತನಾಡಲು ಮತ್ತು ಅದರ ಅನುವಾದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಮಾನ್ಯತೆ ದೊರೆತು ಕೊಡವ ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗುತ್ತದೆ. ಯುಪಿಎಸ್ಸಿ ಪರೀಕ್ಷೆಗಳಲ್ಲಿ ಭಾರತೀಯ ಭಾಷಾ ಪತ್ರಿಕೆಯಾಗಿ ಕೊಡವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗಬಹುದು.
ಭಾಷಾ ಅಡೆತಡೆಗಳನ್ನು ನಿವಾರಿಸುವ ಮೂಲಕ ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಎನ್.ಯು.ನಾಚಪ್ಪ ಪ್ರತಿಪಾದಿಸಿದರು. ಸ್ಥಳೀಯ ಕೊಡವ ಜಾನಪದ ಗ್ರಾಮಗಳ ಮತ್ತು ಹಳ್ಳಿಗಳ ಹೆಸರುಗಳನ್ನು ವ್ಯವಸ್ಥಿತವಾಗಿ ಕನ್ನಡಕ್ಕೆ ಬದಲಾಯಿಸಿ ವಿರೂಪಗೊಳಿಸಲಾಗಿದೆ ಎಂದು ಆರೋಪಿಸಿದರು.
ಪಾಕ – ಹಾಕತ್ತೂರು
ಪಾಲಂದ – ಹಾಲುಗುಂದ
ಪಯ್ಯಾಡ – ಹೈಸೊಡ್ಲೂರು
ನಾಲ್ನಾಡ್ – ನಾಲ್ಕುನಾಡು
ಬೋಟೋಳಿ – ಬೇಟೋಳಿ
ತೋರ – ತೋಮರ
ಪಾಲೇರಿ – ಹಾಲೇರಿ
ಬೋಂದ – ಬಿಳುಗುಂದ
ಪಟ್ಟಿಪೊಳೆ – ಹಟ್ಟಿಹೊಳೆ
ಪೊರಮಲೆನಾಡ್ – ಹೊರಮಲೆನಾಡು
ಪೆರ್ಮಾಡ್ – ಹೇರ್ಮಡು
ಪಾತ್ – ಹಾತೂರ್
ಬುಟ್ಟಂಗಾಲ – ಬಿಟ್ಟಂಗಾಲ
ಪೊದ್ದ್ – ಹೊದ್ದೂರು
ಬಲಂಬೇರಿ – ಬಲಮುರಿ
ಬೊಳ್ಳರಿಮಡ್ – ಬೆಳ್ಳರಿಮಾಡು
ಕುಂಜೇರಿ – ಕುಂಜಲಗೇರಿ
ಪೆಗ್ಗಳ – ಹೆಗ್ಗಳ
ಪಚ್ಚೆನಾಡ್ – ಹಚ್ಚೆನಾಡು
ಪಚ್ಚಾಟ್ – ಹಚ್ಚಿನಾಡು
ಬುಟ್ಟಿಯಂಡ ಒಕ್ಕ – ಬಿಟ್ಟಿಯಂಡ
ನುಪ್ಪದೊಕ್ಕ – ಮೂವತ್ತೊಕ್ಲು
ನಾಪದೊಕ್ಕ/ನಾಪೊಕ್ – ನಾಲ್ವತ್ತೊಕ್ಲು/ನಾಪೋಕ್ಲು
ಪಳೆಯ ತಾಲೂಕ್ – ಹಳೇ ತಾಲೂಕು
ಕಡಂಗಮುAಡೂರು – ಕಡಂಗಮುರೂರು
ಆನೆಚಾಕೂರು – ಆನೆಚೌಕೂರು
ಐಂಬದೊಕ್ಕ – ಐವತ್ತೊಕ್ಲು
ಅರ್ವದೊಕ್ಕ – ಅರವತ್ತೊಕ್ಲು
ನೂರೊಕ್ಕನಾಡ್ – ನೂರೊಕ್ಕಲುನಾಡು
ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಕೇವಲ ಸ್ಥಳನಾಮಗಳಿಗೆ ಸೀಮಿತವಾಗಿಲ್ಲ; ಹಬ್ಬಗಳ ಹೆಸರುಗಳನ್ನೂ ಬದಲಾಯಿಸಲಾಗಿದೆ:
ಕೈಲ್ ಪೋದ್ ಅನ್ನು ‘ಕೈಲ್ ಮುಹೂರ್ತ’ ಎಂದು,
ಕಾವೇರಿ ಚಂಗ್ರಾಂದಿಯನ್ನು ‘ಕಾವೇರಿ ಸಂಕ್ರಮಣ’ ಎಂದು,
ಬೋಡ್ ನಮ್ಮೆಯನ್ನು ‘ಬೇಡು ಹಬ್ಬ’ ಎಂದು,
ಎತ್ ಪೋರಾಟವನ್ನು ‘ಎತ್ತು ಹೇರಾಟ’ ಎಂದು,
ಬೊಳಕಾಟ್ ಅನ್ನು ‘ಬೆಳಕಾಟ’ ಎಂದು,
ಕಕ್ಕಡ ಪದ್ನೆಟ್ ಅನ್ನು ‘ಆಟಿ ಹದಿನೆಂಟು’ ಎಂದು ಬದಲಾಯಿಸಲಾಗಿದೆ.
ಇದು ಕೊಡವರ ಪರಂಪರೆ ಮತ್ತು ಅನನ್ಯತೆಯ ಬಗ್ಗೆ ಅವರಿಗಿರುವ ಅಸಡ್ಡೆಯನ್ನು ತೋರಿಸುತ್ತದೆ. ಇದು ರಾಜ್ಯ ಸರ್ಕಾರದ ಅಧಿಕಾರಶಾಹಿಯ ಮೂಲಕ ಆದಿಮಸಂಜಾತ ಕೊಡವ ಪರಂಪರೆಯ ಮೇಲೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರತಿಬಿಂಬವಾಗಿದೆ ಎಂದು ಟೀಕಿಸಿದರು. ಸ್ನಾತಕ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಕೊಡವ ಭಾಷೆ ಈಗಾಗಲೇ ಬೋಧನಾ ಮಾಧ್ಯಮವಾಗಿರುವುದರಿಂದ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೊಡವ ಕಲಿಕೆಯನ್ನು ಸುಲಭಗೊಳಿಸಲು ತಕ್ಷಣ ‘ಕೊಡವ ತಕ್ ಸಾಫ್ಟ್ವೇರ್’ ಅಭಿವೃದ್ಧಿಪಡಿಸಬೇಕು. ಇಂಗ್ಲೀಷ್ ಸಾಫ್ಟ್ವೇರ್ ಸಿಸ್ಟಂಗಳಲ್ಲಿ ಕೊಡಗು ಜಿಲ್ಲೆಯ ಹೆಸರನ್ನು ‘ಮಡಿಕೇರಿ ಜಿಲ್ಲೆ’ ಎಂದು ತಪ್ಪಾಗಿ ನಮೂದಿಸಿರುವುದನ್ನು ತಕ್ಷಣ ತಿದ್ದಬೇಕು ಎಂದು ಒತ್ತಾಯಿಸಿದ ಅವರು ‘ಕೊಡಗು’ ಎಂಬ ಹೆಸರು ಈ ನೆಲದ ಮೂಲ ಕೊಡವ ಬುಡಕಟ್ಟಿನಿಂದ ಬಂದಿದೆ ಎಂದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವ ಸಂದರ್ಭ ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ನಿವೃತ್ತ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಕಲಿಯಂಡ ಪ್ರಕಾಶ್, ಕುಕ್ಕೇರ ಜಯ ಚಿಣ್ಣಪ್ಪ, ಚಂಬಂಡ ಜನತ್, ಅರೆಯಡ ಗಿರೀಶ್, ಮಂದಪಂಡ ಮನೋಜ್ ಮಂದಣ್ಣ, ಕಿರಿಯಮಾಡ ಶೆರಿನ್, ನಂದಿನೆರವಂಡ ಅಪ್ಪಯ್ಯ, ಪುಟ್ಟಿಚಂಡ ಡಾನ್ ದೇವಯ್ಯ, ಬಡುವಂಡ ವಿಜಯ, ನಂದಿನೇರವಂಡ ವಿಜು, ಮಣವಟ್ಟಿರ ಚಿಣ್ಣಪ್ಪ, ಕೂಪದಿರ ಸಾಬು, ಚೋಳಪಂಡ ನಾಣಯ್ಯ ಹಾಗೂ ಅಜ್ಜಿಕಂಡ ಸನ್ನಿ ಮಾಚಯ್ಯ ಹಾಜರಿದ್ದರು.









