
ಮೈಸೂರು ಫೆ.25 NEWS DESK : ರಾಜಕೀಯ ಇಚ್ಛಾಶಕ್ತಿ ಇದ್ದರೆ ಜನರಿಗಾಗಿ ಜನಪ್ರತಿನಿಧಿಗಳು ಎಂಥೆಂಥ ಕೆಲಸ ಮಾಡಬಹುದು ಎಂಬುದಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಯತ್ನಕ್ಕೆ ಫಲವೇ ಸಾಕ್ಷಿಯಾಗಿದೆ. ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಕೊಡುಗ ಕರಿ ಮೆಣಸು ಬೆಳಗಾರರ ಸಂಕಷ್ಟವನ್ನು ನಿವಾರಿಸಲು ಸಂಸದ ಯದುವೀರ್ ಯಶಸ್ವಿಯಾಗಿದ್ದಾರೆ. ಕೊಡಗಿನಲ್ಲಿ ಅತಿ ಹೆಚ್ಚಾಗಿ ಕರಿ ಮೆಣಸು ಬೆಳೆಯಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಇದರ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ ) ವಿಧಿಸಿತ್ತು. ಇದರಿಂದ ಇಲ್ಲಿನ ಬೆಳೆಗಾರರಿಗೆ ಭಾರಿ ತೊಂದರೆಯಾಗಿತ್ತು. ಕೊಡಗಿನ ಗೋಣಿಕೊಪ್ಪದ ಬೆಳೆಗಾರರೊಬ್ಬರಿಗೆ ಒಂದು ಕೋಟಿ ರೂಪಾಯಿ ಜಿಎಸ್ಟಿ ಕಟ್ಟುವಂತೆಯೂ ನೋಟಿಸ್ ನೀಡಲಾಗಿತ್ತು. ಆದರೆ ಇವರು ಕರ್ನಾಟಕ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ನಿಯೋಗದೊಂದಿಗೆ ಸಂಸದ ಯದುವೀರ್ ಭೇಟಿ ಮಾಡಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಮನವಿ ಸಲ್ಲಿಸಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸಂಸದ ಯದುವೀರ್ ಅವರು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕೊಡಗಿನ ಕರಿ ಮೆಣಸು ಬೆಳೆಗಾರರ ಬವಣೆಯನ್ನು ಮನವರಿಕೆ ಮಾಡಿಕೊಟ್ಟರು. ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದ ಸಚಿವರು, ಕರಿ ಮೆಣಸು ಬೆಳೆಗೆ ಜಿಎಸ್ಟಿ ರದ್ದು ಮಾಡಿದೆ. ನಂತರ ಈ ಸಂಬಂಧ ಆದೇಶವನ್ನೂ ಹೊರಡಿಸಲಾಗಿದೆ. ಇದರಿಂದ ಕೊಡಗಿನ ಮಾತ್ರವಲ್ಲ ಇತರೆ ಕರಿ ಮೆಣಸು ಬೆಳೆಗಾರರಿಗೆ ಸಾಕಷ್ಟು ನೆರವಾಗಿದೆ. ಸಂಸದ ಯದುವೀರ್ ಅವರ ಪ್ರಯತ್ನಕ್ಕೆ ವಿವಿಧ ಬೆಳೆಗಾರರ ಸಂಘಟನೆಗಳು ಧನ್ಯವಾದ ಸಲ್ಲಿಸಿದೆ.
ವಿತ್ತ ಸಚಿವರಿಗೆ ಯದುವೀರ್ ಅಭಿನಂದನೆ :: ಈ ಕುರಿತು ಮಾತನಾಡಿರುವ ಸಂಸದ ಯದುವೀರ್, ಕೊಡಗಿನ ಬೆಳೆಗಾರರ ಸಂಕಷ್ಟದ ಬಗ್ಗೆ ಅರಿವಿಗೆ ಬಂದ ಕೂಡಲೇ ದೆಹಲಿಯಲ್ಲಿ ವಿತ್ತ ಸಚಿವರನ್ನು ಹಾಗೂ ಇತರೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿದೆ. ಜಿಎಸ್ಟಿ ರದ್ದು ಮಾಡುವಂತೆ ಮನವಿಯನ್ನು ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ನಮ್ಮ ಕ್ಷೇತ್ರವಾದ ಕೊಡಗಿನ ಹಾಗೂ ಇತರೆ ಬೆಳೆಗಾರರ ಪರವಾಗಿ ನಾನು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.








