
ನಾಪೋಕ್ಲು ಏ.28 NEWS DESK : ಬಲ್ಲಮಾವಟಿ ಪಂಚಾಯತ್ ಪೇರೂರು ಗ್ರಾಮದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಭಾರಂಭಗೊಂಡ ಪೇರೂರಿಯನ್ಸ್ ಸ್ನೇಹಿತರ ಕೂಟದ ಬೇಸಿಗೆ ಉಚಿತ ಹಾಕಿ ಶಿಬಿರವು ಸಮಾರೋಪಗೊಂಡಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಮಂಡೀರ ಜಯ ದೇವಯ್ಯ ಮಾತನಾಡಿ, ಶ್ರೀ ಇಗ್ಗುತ್ತಪ್ಪ ಬೆಟ್ಟದಡಿ ಸಿದ್ಧಗೊಂಡ ಮೈದಾನದಲ್ಲಿ ಶಿಬಿರ ನಡೆಯಲು ಮೂಲ ಕಾರಣಕರ್ತರನ್ನು ಎಷ್ಟು ಅಭಿನಂದಿಸಿದರೂ ಸಾಲದು ಅದೇ ರೀತಿ ಸಾರ್ವಜನಿಕರ ಸಹಕಾರವೂ ಸಹ ಅವಶ್ಯಕ, ಇಂದಿನ ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದರಲ್ಲದೆ ತರಬೇತುದಾರರಾದ ಮಣವಟ್ಟಿರ ಮಧು ಅಯ್ಯಪ್ಪ ಅವರನ್ನು ಅಭಿನಂದಿಸಿದರು. ಕಾಫಿ ಬೆಳೆಗಾರರು ಹಾಗೂ ಮಾಜಿ ಮಂಡಲ ಪ್ರಧಾನ ಮೂವೇರ ನಾಣಪ್ಪ ಮಾತನಾಡಿ, ಕೆಲವು ವರ್ಷಗಳ ಹಿಂದೆ ಈ ಮೈದಾನವು ಸಂಪೂರ್ಣವಾಗಿ ಪಾಳು ಬಿದ್ದಿತ್ತು. ಪೇರೂರಿಯನ್ಸ್ ಕೂಟದಿಂದ ಮೈದಾನಕ್ಕೆ ಒಂದು ಕಳೆ ಬಂದಿರುತ್ತದೆ ಆದ್ದರಿಂದ ಸರ್ವರೂ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಪೆÇೀಷಕರು ರಾಜಕೀಯ ಮನೋಭಾವದಲ್ಲಿ ಮುಳುಗಬಾರದು ಮುಂದಿನ ಪೀಳಿಗೆಯ ಮಕ್ಕಳ ಬಾಳಲ್ಲಿ ಬೆಳಕಾಗಬೇಕು ಎಂದರು. ಕೂಟದ ಸಂಚಾಲಕ ಗ್ರಾಮ ಪಂಚಾಯತ್ ಸದಸ್ಯರಾದ ಮಚ್ಚುರ ಎಂ.ರವೀಂದ್ರ ಪ್ರಾಸ್ತಾವಿಕ ಮಾತನಾಡಿ ಇಂತಹ ಶಿಬಿರದಿಂದ ಜಾತಿ ಧರ್ಮದ ಭೇದ ಭಾವ ಮರೆಯಾಗಿ ಸಹೋದರತ್ವ ಭಾಂದವ್ಯ ಮೂಡಲಿದೆ ಉಚಿತ ಶಿಬಿರವು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಲ್ಲ ಎಂದರು. ಹಾಕಿ ಪೇರೂರಿಯನ್ಸ್ ಸಹ ಸಂಚಾಲಕ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಪಾಲೇಯಡ ಅಯ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಮಾದಕ ಚಟಗಳಿಗೆ ಬಲಿಯಾಗದೆ ಸದಾ ವಿದ್ಯಾಭ್ಯಾಸ ಮತ್ತು ಕ್ರೀಡೆಯ ಕಡೆ ಗಮನ ಹರಿಸಬೇಕು. ಕೊಡಗು ಹಾಕಿಯ ನಾಡು ಎನ್ನುವುದನ್ನು ಉಳಿಸಿಕೊಳ್ಳಬೇಕು ರಾಷ್ಟ್ರ ಅಂತರ ರಾಷ್ಟ್ರ ಮಟ್ಟದಲ್ಲಿ ಕೊಡಗಿನ ಹಾಕಿ ಕ್ರೀಡೆ ರಾರಾಜಿಸುತ್ತಿದೆ ಕೊಡಗಿನ ಮಕ್ಕಳ ರಕ್ತದ ಕಣ ಕಣದಲ್ಲಿ ಹಾಕಿ ಮೊಳಗಲಿ ಎಂದು ಆಶಿಸಿದರು. ಕಾಫಿ ಬೆಳೆಗಾರರಾದ ಚೀಯಕಪೂವಂಡ ಮಿಥುನ್ ಚಂಗಪ್ಪ, ಕಾಫಿ ಬೆಳೆಗಾರರಾದ ಅಪ್ಪಚೆಟ್ಟೋಳಂಡ ಶಾಮ್ ಕಾಳಯ್ಯ, ಕೂಟದ ಸ್ಥಾಪಕ ಅಧ್ಯಕ್ಷರಾದ ನಿವೃತ್ತ ಸೇನಾನಿ ತಾಪಂಡ ಅಪ್ಪಣ್ಣ ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ತರಬೇತುದಾರರಾಗಿ ಮಣವಟ್ಟಿರ ಮಧು ಅಯ್ಯಪ್ಪ ಹಾಗೂ ಮಣವಟ್ಟಿರ ಪ್ರದೀಪ್ ಕುಶಾಲಪ್ಪ ಕಾರ್ಯನಿರ್ವಹಿಸಿದ್ದು, ಜ್ಞಾನೋದಯ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅಥಿತಿಗಳನ್ನು ಸಭೆಗೆ ಪರಿಚಯಿಸಿದರೆ, ಮಚ್ಚುರ ಎಂ.ರವೀಂದ್ರ ವಂದಿಸಿದರು.
ವರದಿ : ದುಗ್ಗಳ ಸದಾನಂದ.









