
ಮಡಿಕೇರಿ ಏ.29 NEWS DESK : ಇತಿಹಾಸ ನೆನಪುಗಳನ್ನು ಜೀವಂತವಾಗಿರಿಸುತ್ತದೆ. ಇತಿಹಾಸ ಅರಿಯದವನು ಬದುಕಲಿರುವ ಹಕ್ಕನ್ನು ಕಳೆದುಕೊಳ್ಳುತ್ತಾನೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯಪಟ್ಟಿದ್ದಾರೆ. ಕುಶಾಲನಗರ ಸಮೀಪದ ಚಿಕ್ಕಅಳುವಾರದ ಕೊಡಗು ವಿಶ್ವವಿದ್ಯಾಲಯದ ಹಾರಂಗಿ ದಲಿತ ಸಾಹಿತ್ಯ ಪರಿಷತ್ತು, ಕೊಡಗು ವಿಶ್ವವಿದ್ಯಾಲಯ, ಮಾನವ ಬಂಧುತ್ವ ವೇದಿಕೆ, ಸಹಮತ ವೇದಿಕೆ ಹಾಗೂ ಅಹಿಂದ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಗ್ರ-ಸಮತೆಯೆಡೆಗೆ ಸಾಹಿತ್ಯ ಎಂಬ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಾಹಿತಿ ಅರ್ಜುನ್ ಮೌರ್ಯ ಅವರ ‘ಬೆಂದೊಡಲ ಕುಣಿತ” ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.”ವಿಜ್ಞಾನ-ತಂತ್ರಜ್ಞಾನ ರಂಗದಲ್ಲಿ ಮುಂದುವರಿದಿದ್ದೇವೆ ಎಂದು ಹೇಳಿಕೊಳ್ಳುವ ನಾವೇ ಶಿಕ್ಷಣ ರಂಗದಲ್ಲಿ ಕಳೆದ 75ವರ್ಷಗಳಲ್ಲಿ ಹಿಂದುಳಿದವರಾಗಿಯೇ ಉಳಿದಿದ್ದೇವೆ. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಮಹಾನಾಯಕ ಡಾ||.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದರು. ಮಹಿಳೆಯರ ಸುರಕ್ಷಿತತೆ ಮತ್ತು ಸಮಾನತೆಯ ದೃಷ್ಟಿಯಲ್ಲಿ ನಮ್ಮ ರಾಷ್ಟ್ರ ಇನ್ನೂ ಹಿಂದುಳಿದ ರಾಷ್ಟ್ರಗಳ ಪಟ್ಟಿಯಲ್ಲೇ ಉಳಿದಿದೆ. ಶಿಕ್ಷಣ ಎಂಬುದು ಶೋಷಣೆಯನ್ನು ಪ್ರಶ್ನಿಸಲು ಕಲಿಸುತ್ತದೆ. ಆದರೆ, ಇಂದು ನಾವು ಪ್ರಶ್ನಿಸಲು ಇರುವ ಹಕ್ಕನ್ನೇ ಪರೋಕ್ಷವಾಗಿ ಕಳೆದುಕೊಳ್ಳುತ್ತಿದ್ದೇವೆ. ನಾವು ತಿಳಿದೂ ತಿಳಿಯದೆಯೂ ಗುಲಾಮಗಿರಿಗೆ ದೂಡಲ್ಪಡುತ್ತಿದ್ದೇವೆ”, ಎಂದರು. ಚಾಮರಾಜನಗರ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎ.ಆರ್.ಗಂಗಾಧರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಸಾಹಿತ್ಯ ಮನುಷ್ಯ ವಿರೋಧಿಯಾಗಿರಲು ಸಾಧ್ಯವಿಲ್ಲ. ಮನುಷ್ಯ ವಂಶದ ಉದ್ದಾರ ಮತ್ತು ಏಳಿಗೆ ಸಾಹಿತ್ಯದ ಮೂಲಕ ಮಾತ್ರ ಸಾಧ್ಯವಾಗಿದೆ. ಸಾಹಿತ್ಯ ಸಮಾಜವನ್ನು ಒಡೆಯುವಂತದು ಆಗಬಾರದು. ಸಾಹಿತ್ಯ ಮನುಷ್ಯನನ್ನು ಒಂದುಗೂಡಿಸುವಂತದಾಗಬೇಕು. ದೇಶದ ಸ್ವಾಭಿಮಾನ ಮತ್ತು ಹೆಮ್ಮೆ ಭೌತಿಕ ಸೌಕರ್ಯಗಳಿಂದ ಅಳೆಯಬಾರದು. ದೇಶದ ಸ್ವಾಭಿಮಾನ ಮತ್ತು ಘನತೆಗೆ ಸಾಹಿತ್ಯ ಅಳತೆಗೋಲು ಆಗಬೇಕು”ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯ ಉಪಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ‘ಅಭಿವೃದ್ಧಿಯೆಂಬುದು ಶಿಕ್ಷಣದಿಂದ ಮಾತ್ರ ಸಾಧ್ಯ. ಮೌಲ್ಯಯುತ ಶಿಕ್ಷಣವೇ ಇಂದಿನ ಅಗತ್ಯ. ಡಾ||ಬಾಬಾಸಾಹೇಬ್ ಅಂಬೇಡ್ಕರ್ ಶಿಕ್ಷಣದ ಮೂಲಕ ಮೌಲ್ಯಯುತ ಸಮಾಜವದ ಕನಸು ಕಂಡಿದ್ದರು. ಸಾಮಾಜಿಕ ಚಿಂತಕ ವಿ.ಪಿ.ಶಶಿಧರ್ ಸಮಾರೋಪ ಭಾಷಣ ಮಾಡಿ ತಮ್ಮ ಭಾಷಣದಲ್ಲಿ ಮಾನವ ಪ್ರೀತಿ ಮತ್ತು ಮಾನವ ಐಕ್ಯತೆಗೆ ಸಾಹಿತ್ಯಗಳು ನೆರವಾಗಿವೆ. ಸಾಹಿತ್ಯಗಳು ನಮ್ಮನ್ನು ಉತ್ತಮ ಸಮಾಜದೆಡೆಗೆ ಕೈಹಿಡಿದು ನಡೆಸಿಕೊಂಡು ಹೋಗುತ್ತದೆ. ನಮ್ಮ ಸಮಾಜವು ಅತಿಯಾದ ಅಗ್ನಿ ಪರೀಕ್ಷೆಯನ್ನು ಎದುರು ನೋಡುತ್ತಿದೆ. ಯುದ್ಧಗಳು ಸಮಸ್ಯೆಗೆ ಪರಿಹಾರವಾಗುವುದಿಲ್ಲ. ಹರೀಶ್ ಮಾಗಲು ಪರಿವರ್ತನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಅರ್ಜುನ್ ಮೌರ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಜಿ.ರಮ್ಯ ಬಿಡುಗಡೆಗೊಂಡ ಕೃತಿಯ ವಿಮರ್ಶೆ ನಡೆಸಿಕೊಟ್ಟರು. ಮೋಹನ್ ಮೌರ್ಯ ಗೌರವಾರ್ಪಣೆ ನೆರವೇರಿಸಿದರು. ಡಾ.ಹೇಮಂತ್, ಡಾ.ಝಮೀರ್ ಅಹಮದ್ ಹಾಗೂ ಪಿ.ಕೆ.ಅಬ್ದುಲ್ ರೆಹಮಾನ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಪ್ರತಿಮಾ ರೈ ವಂದಿಸಿದರು.









