
ಮಡಿಕೇರಿ ಏ.29 NEWS DESK : ಕೊಡಗು ಜಿಲ್ಲಾ ಪೊಲೀಸ್ ಘಟಕದ ಶ್ವಾನದಳ ವಿಭಾಗದಲ್ಲಿ 8 ವರ್ಷ 2 ತಿಂಗಳು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಶ್ವಾನ ಪೃಥ್ವಿ ಹೃದಯಾಘಾತದಿಂದ ನಿಧನ ಹೊಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ನಗರದ ಪೊಲೀಸ್ ಮೈದಾನದಲ್ಲಿ ಮೃತ ಪೃಥ್ವಿಗೆ ಅಂತಿಮ ಗೌರವ ಸಲ್ಲಿಸಿ ಅಮೋಘ ಸೇವೆಯನ್ನು ಸ್ಮರಿಸಿದರು. ನಂತರ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಪೊಲೀಸ್ ಸಿಬ್ಬಂದಿ ಶಿವ ಎಂ.ಆರ್ ಅವರು ಪೃಥ್ವಿಯ ಹ್ಯಾಂಡ್ಲರ್ ಆಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
*ಪೃಥ್ವಿಯ ಸಾಧನೆ*
2017 ಅಕ್ಟೋಬರ್ ನಿಂದ ಸ್ಫೋಟಕ ವಸ್ತುಗಳ ಪತ್ತೆ ಕರ್ತವ್ಯ ನಿರ್ವಹಿಸಿದೆ. ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 3 ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 5 ಬಹುಮಾನವನ್ನು ಪಡೆದಿದೆ. ಚೆಕ್ ಪೋಸ್ಟ್ಗಳಲ್ಲಿ ಸ್ಫೋಟಕ ವಸ್ತುಗಳ ಸಾಗಾಟ ಪತ್ತೆ ಕಾರ್ಯ ನಿರ್ವಹಿಸಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ವಿಐಪಿ ಮತ್ತು ವಿವಿಐಪಿ ಗಳ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ ಹಾಗೂ ಭದ್ರತಾ ಕರ್ತವ್ಯವನ್ನು ನಿರ್ವಹಿಸಿದೆ.
ಏರ್ ಶೋ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಯುವ ಸಂದರ್ಭ ಕರ್ತವ್ಯ ನಿರ್ವಹಿಸಿದೆ. ರಾಷ್ಟ್ರಪತಿ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ ಕರ್ತವ್ಯವನ್ನು ನಿರ್ವಹಿಸಿದೆ. ಕೇಂದ್ರಾಡಳಿತ ಪ್ರದೇಶಗಳಾದ ಗೋವಾ, ಪಾಂಡಿಚೇರಿ ಮತ್ತು ಲಕ್ಷದ್ವೀಪಕ್ಕೆ ಪ್ರಧಾನಮಂತ್ರಿಗಳ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.










