
ಮಡಿಕೇರಿ ಮೇ 1 NEWS DESK : ಕೊಡಗಿನಾದ್ಯಂತ ಕ್ರೀಡಾ ಪರ್ವವಾಗಿದ್ದು, ಕ್ರೀಡಾಕೂಟ ಒಗ್ಗಟ್ಟು ಮತ್ತು ಏಳಿಗೆಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ವಿರಾಜಪೇಟೆ ತಾಲ್ಲೂಕು ಅರಮೇರಿಯಲ್ಲಿ, ಬಾಳೆಕುಟ್ಟಿರ ಕುಟುಂಬಸ್ಥರು ಆಯೋಜಿಸಿರುವ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕೊಡಗು ಜಿಲ್ಲೆ ಹಲವಾರು ವಿಶೇಷತೆಗಳಿಗೆ ಹೆಸರುವಾಸಿಯಾಗಿದ್ದು, ಅದರಲ್ಲಿ ಕ್ರೀಡೆಯೂ ಪ್ರಮುಖವಾಗಿದೆ. ಕ್ರೀಡೆ ಕೇವಲ ದೈಹಿಕವಾಗಿ ಮಾತ್ರ ಅಲ್ಲ ಮಾನಸಿಕವಾಗಿಯೂ ಸದೃಢವಾಗಲು ಸಹಕಾರಿಯಾಗಿದ್ದು, ಎಲ್ಲರೂ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ನಾಡಿನ ಒಗ್ಗಟ್ಟಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ಬಳಿಕ ಆಯೋಜಕರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಎಲ್ಲರಿಗೂ ಶುಭ ಕೋರಿದರು. ಈ ಸಂದರ್ಭ ಕಾರ್ಯಕ್ರಮ ಆಯೋಜಕರು ಹಾಗೂ ಪ್ರಮುಖರು ಇದ್ದರು.










