
ಮಡಿಕೇರಿ NEWS DESK ಮೇ 2 : 2024-25ನೇ ಶೈಕ್ಷಣಿಕ ಸಾಲಿನ 10 ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ಶೇ.82.21 ಫಲಿತಾಂಶದೊಂದಿಗೆ ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದೆ. ಜಿಲ್ಲಾ ವ್ಯಾಪ್ತಿಯ 171 ಪ್ರೌಢಶಾಲೆಗಳಿಂದ ಪರೀಕ್ಷೆಗೆ ಹಾಜರಾಗಿದ್ದ 6673 ವಿದ್ಯಾರ್ಥಿಗಳಲ್ಲಿ 5486 ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕಿಯರು ಮೇಲುಗೈ- ಎಂದಿನಂತೆ ಈ ಬಾರಿಯೂ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಯಲ್ಲಿ 2723 ಬಾಲಕಿಯರು ಉತ್ತೀರ್ಣರಾಗಿದ್ದರೆ, 2420 ಬಾಲಕರು ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಭಾಗದ 4172 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.80.72 ಫಲಿತಾಂಶ ಬಂದಿದ್ದರೆ, ನಗರಪ್ರದೇಶದ 970 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.85.61 ಫಲಿತಾಂಶ ಬಂದಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಯ್ಯ ತಿಳಿಸಿದ್ದಾರೆ. 26 ಶಾಲೆಗಳಲ್ಲಿ ಪ್ರತಿಶತ ಫಲಿತಾಂಶ-ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ಇಪ್ಪತ್ತಾರು ಶಾಲೆಗಳು ಶೇ.100 ಫಲಿತಾಂಶವನ್ನು ಪಡೆದುಕೊಂಡಿವೆ. ಇದರಲ್ಲಿ 11 ಸರ್ಕಾರಿ ಶಾಲೆಗಳು, 15 ಅನುದಾನ ರಹಿತ ಶಾಲೆಗಳಾಗಿವೆ. ಜಿಲ್ಲೆಗೆ ಪ್ರಥಮ-ವಿರಾಜಪೇಟೆಯ ಶ್ರೀ ಕಾವೇರಿ ಪ್ರೌಢಶಾಲೆಯ ಟಿ.ಎಂ.ಆಶ್ರಯ್ ಅಕ್ಕಮ್ಮ ಹಾಗೂ ಸೋಮವಾರಪೇಟೆಯ ವಿಶ್ವ ಮಾನವ ಕುವೆಂಪು ಶಾಲೆಯ ಪಂಚಮಿ ಅವರು 621 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮರಾಗಿದ್ದಾರೆ. 620 ಅಂಕಗಳಿAದಿಗೆ ದ್ವಿತೀಯ ಸ್ಥಾನ ಪಡೆದವರು-ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ತೇಜಸ್ ಭೀಮಯ್ಯ, ಮೂರ್ನಾಡು ಜ್ಞಾನಜ್ಯೋತಿ ಪ್ರೌಢಶಾಲೆಯ ಮೊಹಮದ್ ಸಾಹಿಲ್, ಕೂಡುಮಂಗಳೂರಿನ ಕೆ.ಎಂ. ಯೂನಿಕ್ ಅಕಾಡೆಮಿಯ ಸಮೃದ್ಧಿ ಆಚಾರ್ 620 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಉನ್ನತ ಸಾಧನೆ ಮಾಡಿದ್ದಾರೆ. ತೃತೀಯ ಸ್ಥಾನದಲ್ಲಿ 4 ವಿದ್ಯಾರ್ಥಿಗಳು- ಮಡಿಕೇರಿ ಸಂತ ಮೈಕೆಲರ ಪ್ರೌಢಶಾಲೆಯ ನಿಸರ್ಗ ರೈ, ಸೋಮವಾರಪೇಟೆ ವಿಶ್ವಮಾನವ ಕುವೆಂಪು ಶಾಲೆಯ ತೇಜಸ್ವಿನಿ ಸಿ.ಎಸ್., ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಪ್ರೌಢಶಾಲೆಯ ಇಂಚರ ಕೆ.ಕೆ. ಮತ್ತು ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಶಾಲೆಯ ಆದ್ವಿ ಸಿ.ಎಸ್. 619 ಅಂಕಗಳೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.








