
ಮಡಿಕೇರಿ ಮೇ 5 NEWS DESK : ಇತ್ತೀಚೆಗೆ ನಡೆದ ಮಡಿಕೇರಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಸಂದರ್ಭ ನನ್ನ ಪತ್ನಿ ಉಷಾ ಅವರಿಗೆ ಅನ್ಯಾಯವಾಗಿದ್ದು, ಅಧ್ಯಕ್ಷ ಸ್ಥಾನ ತಪ್ಪಲು ಬಿಜೆಪಿಯ ಮಾಜಿ ಶಾಸಕರೊಬ್ಬರು ಕಾರಣ ಎಂದು ನಗರಸಭಾ ಸದಸ್ಯೆ ಉಷಾ ಅವರ ಪತಿ ಎಂ.ಕೆ.ಕಾವೇರಪ್ಪ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಪತ್ನಿ ಉಷಾ ಅವರಿಗೆ ಅಧ್ಯಕ್ಷ ಸ್ಥಾನ ಸಿಗದಂತೆ ಷಡ್ಯಂತ್ರ ರೂಪಿಸಿ ಅನ್ಯಾಯ ಮಾಡಲಾಗಿದೆ. ಇದು ನನ್ನ ಪತ್ನಿಗೆ ಮಾತ್ರವಲ್ಲ ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಉಷಾ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ, ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ಆಂತರಿಕ ಚುನಾವಣೆಯಲ್ಲಿ ಉಷಾ ಅವರನ್ನು ಕೂಡ ಕಣದಲ್ಲಿರುವಂತೆ ನೋಡಿಕೊಳ್ಳಲಾಯಿತು. ಪಕ್ಷದ ವರಿಷ್ಠರಿಗೆ ಗೌರವ ನೀಡಿ ಉಷಾ ಅವರು ನಗರಸಭೆಯ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಿದರು. ಸ್ಪರ್ಧೆಯಲ್ಲಿ ಉಷಾ ಅವರು ಅತ್ಯಧಿಕ ಮತಗಳನ್ನು ಗಳಿಸಿ ಅಧ್ಯಕ್ಷರಾಗುವುದು ಖಚಿತವಾಗಿತ್ತು. ಆದರೆ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಕೊನೆಯ ಗಳಿಗೆಯಲ್ಲಿ ನಡೆಸಿದ ಷಡ್ಯಂತ್ರದಿಂದಾಗಿ ಉಷಾ ಅವರು ಅಧ್ಯಕ್ಷ ಸ್ಥಾನದಿಂದ ವಂಚಿತರಾದರು. ಇದು ನನ್ನ ಪತ್ನಿಗೆ ಆದ ಅನ್ಯಾಯವಲ್ಲ, ಬದಲಿಗೆ ದೇಶದ ಸಂವಿಧಾನ ಮತ್ತು ಬಿಜೆಪಿಯ ಸಿದ್ಧಾಂತಗಳಿಗೆ ಆದ ಅನ್ಯಾಯವಾಗಿದೆ ಎಂದು ಟೀಕಿಸಿದರು. ಪತ್ನಿ ಉಷಾ ಅವರಿಗೆ ಕಡಿಮೆ ಮತಗಳು ಬಂದಿದ್ದರೆ ನಾನು ಪ್ರಶ್ನೆ ಮಾಡುತ್ತಿರಲಿಲ್ಲ, ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಮೂವರು ಮಹಿಳಾ ಸದಸ್ಯರಲ್ಲಿ ಉಷಾ ಅವರು ಅತ್ಯಧಿಕ ಮತಗಳನ್ನು ಪಡೆದಿದ್ದರೂ ನಿಯಮ ಉಲ್ಲಂಘಿಸಿ ಅನ್ಯಾಯ ಮಾಡಲಾಯಿತು. ಇದನ್ನು ಸಹಿಸದೆ ನಾನು ಪ್ರಶ್ನೆ ಮಾಡಲೇಬೇಕಾಗಿದೆ. ಯಾಕೆಂದರೆ ಮುಂದೆ ಯಾರಿಗೂ ಈ ರೀತಿಯ ಅನ್ಯಾಯ ಆಗಬಾರದು ಎಂದು ಕಾವೇರಪ್ಪ ಭಾವುಕರಾದರು.
ಮಾಜಿ ಶಾಸಕರುಗಳಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಸಂಸದರಾದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಸುನಿಲ್ ಸುಬ್ರಮಣಿ ಅವರುಗಳು ಉಷಾ ಅವರಿಗೆ ಸಹಕಾರ ನೀಡಿದ್ದಾರೆ. ಆದರೆ ಪಕ್ಷದೊಳಗಿನ ಹಿರಿಯ ಮಾಜಿ ಶಾಸಕರೊಬ್ಬರು ಜಾತಿ ರಾಜಕಾರಣ ಮಾಡಿದ ಪರಿಣಾಮ ಉಷಾ ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿದೆ ಎಂದು ಆರೋಪಿಸಿದರು.
ನಾನು ಉಷಾ ಅವರ ಪತಿಯಾಗಿದ್ದರೂ ನಗರಸಭೆಯ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ. ಜನಸೇವೆಯೇ ಜನಾರ್ಧನನ ಸೇವೆ ಎಂದು ನಂಬಿರುವ ನಾನು ಜನರು ಸಮಸ್ಯೆ ಎಂದು ಬಂದಾಗ ಸ್ಪಂದಿಸುತ್ತಿದೆ. ನಮ್ಮ 14ನೇ ವಾರ್ಡ್ನಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಕೊರತೆ ಎದುರಾಗದಂತೆ ದಂಪತಿ ನೋಡಿಕೊಂಡಿದ್ದೇವೆ ಮತ್ತು ಜನಪ್ರಿಯತೆಯನ್ನು ಗಳಿಸಿದ್ದೇವೆ. ಪತ್ನಿ ಉಷಾ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲದಿದ್ದರೂ ಒತ್ತಡದಿಂದ ಚುನಾವಣಾ ಕಣಕ್ಕಳಿಸಿ ಇದೀಗ ಅವಮಾನ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಧಾರದಿಂದ ನಮಗೆ ಆಘಾತವಾಗಿದೆ. ಈ ರೀತಿಯ ಬೆಳವಣಿಗೆಗಳು ನಡೆಯುವುದಾದರೆ ಆಂತರಿಕ ಚುನಾವಣೆಯ ಅಗತ್ಯವೇನಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಕಲಾವತಿ ಹಾಗೂ ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇವರಿಬ್ಬರೂ ನಮಗೆ ಆತ್ಮೀಯರಾಗಿದ್ದು, ಅಭಿವೃದ್ಧಿಯ ವಿಚಾರದಲ್ಲಿ ಸಂಪೂರ್ಣ ಸಹಕಾರ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ. ಸದಸ್ಯರಾದ ಉಷಾ ಅವರು ಕೂಡ ಕಲಾವತಿ ಹಾಗೂ ಮಹೇಶ್ ಜೈನಿ ಅವರಿಗೆ ಸಂಪೂರ್ಣ ಸಹಕಾರ ನೀಡಲಿದ್ದು, ಅಭಿವೃದ್ಧಿ ಕಾರ್ಯಗಳೊಂದಿಗೆ ಕೈಜೋಡಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎಂ.ಕೆ.ಕಾವೇರಪ್ಪ ಅವರು ಪತ್ನಿಗೆ ಅಧ್ಯಕ್ಷ ಸ್ಥಾನ ತಪ್ಪಲು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪಿ.ಟಿ.ಉತ್ತಮ್ ಉಪಸ್ಥಿತರಿದ್ದರು.









