
ವಿರಾಜಪೇಟೆ ಫೆ.27 NEWS DESK : ಬಿಟ್ಟಂಗಾಲ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿಟ್ಟಂಗಾಲದಲ್ಲಿ ಬೃಹತ್ ಹಿಂದೂ ಸಂಗಮ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ಬಿಟ್ಟಂಗಾಲದ ಬಿ.ಶೆಟ್ಟಿಗೇರಿ ಜಂಕ್ಷನ್ನಿಂದ ಶೋಭಾಯಾತ್ರೆ ಪ್ರಾರಂಭಗೊಂಡು ಆರ್ಕೆ.ಎಫ್ ಸಭಾಂಗಣದವರೆಗೆ ಸಾಗಿ ಬಂತು. ಶೋಭಾಯಾತ್ರೆಯಲ್ಲಿ ಕೇಸರಿ ಶಾಲು ಹಾಗೂ ಪೇಟ ಧರಿಸಿದ ಮಹಿಳೆಯರು ಪುರುಷರು ಸರತಿ ಸಾಲಿನಲ್ಲಿ, ಘೋಷಣೆಗಳನ್ನು ಕೂಗುತ್ತ ಸಾಗಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೇರಳದ ಚಂಡೆ ಮೇಳ, ತಮಟೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಾರತಮಾತೆಯ ಭಾವಚಿತ್ರ ಹೊತ್ತಿರುವ ವಾಹನದೊಂದಿಗೆ ಮೆರವಣಿಗೆ ಆರ್.ಕೆ.ಎಫ್ ಸಭಾಂಗಣದವರೆಗೆ ನಡೆಸಿದರು. ನಂತರ ಹಿಂದೂ ಸಂಗಮದ ಸಮಾವೇಶದ ಸಭೆ ಜರುಗಿತು. ಈ ಸಂದರ್ಭ ಅತಿಥಿಗಳು ದೀಪ ಬೆಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭ ಸ್ವಯಂ ಸೇವಕ ಸಂಘದ ಪ್ರಮುಖರಾದ ಪಿ.ಎನ್. ವಿನೋದ್ ಮಾತನಾಡಿ, ಭಾರತೀಯ ಸಂಸ್ಕøತಿಯನ್ನು ರಕ್ಷಿಸುವುದೊಂದೆ ನಮ್ಮ ಧರ್ಮ. ಸ್ವಯಂ ಸೇವಕ ಸಂಘದಲ್ಲಿರುವ ಸೇವಕರು ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಾರೆ. ರಾಷ್ಟ್ರವನ್ನು ಉಳಿಸುವ ಸಲುವಾಗಿ ಹಿಂದೂತ್ವ ಬೇಕು. ಪ್ರತಿ ಮನೆಯಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಆಚಾರ ವಿಚಾರ, ಹಬ್ಬ ಹರಿದಿನಗಳ ಮಹತ್ವ ತಿಳಿಸಿಕೊಡುವಂತಾಗಬೇಕು. ಗ್ರಾಮಗಳಲ್ಲಿ ಉತ್ತಮ ಕೆಲಸ ಮಾಡುವ ಯುವಜನತೆಗೆ ಹಿರಿಯರು ಪ್ರೋತ್ಸಾಹ ನೀಡುವಂತಾಗಬೇಕು. ಪೂರ್ವಜರಿಂದ ಉಳಿಸಿಕೊಂಡು ಬಂದಿರುವ ಸಂಸ್ಕøತಿಯನ್ನು ಮನದಟ್ಟುಮಾಡಿಕೊಂಡು ಸಮಾಜದಲ್ಲಿ ಮಕ್ಕಳನ್ನು ಶ್ರೇಷ್ಟರನ್ನಾಗಿ ಬೆಳೆಸಬೇಕು ಎಂದು ಕರೆ ನೀಡಿದರು. ಕಾಸರಗೋಡಿನ ಪ್ರಚಾರಕ್, ಸ್ವಯಂ ಸೇವಕ ಸಂಘದ ಹಿರಿಯರಾದ ನಾಣಮಂಡ ವೇಣು ಮಾಚಯ್ಯ, ಪ್ರಮುಖರಾದ ಕುಪ್ಪಂಡ ಮನು ಪೂವಯ್ಯ, ಹಿಂದೂ ಸಂಗಮ ಆಯೋಜನಾ ಸಮಿತಿಯ ಗಣೇಶ್ ಗೌಡ, ರೇಖಾ ಗಣೇಶ್, ಅಮ್ಮುಣಿಚಂಡ ರಂಜು ಸೇರಿದಂತೆ ಪ್ರಮುಖರು ಹಾಜರಿದ್ದರು. ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಟ್ಟಂಗಾಲ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಿಂದೂ ಭಾಂಧವರು ಪಾಲ್ಗೊಂಡಿದ್ದರು. ಶೋಭಾಯಾತ್ರೆ ಸಂದರ್ಭ ತಂಪು ಪಾನೀಯ ವಿತರಿಸಲಾಯಿತು.









