ಸೋಮವಾರಪೇಟೆ ಫೆ.1 : ಒಂದು ಕಾಲೇಜು ಉಳಿಯಬೇಕಾದರೆ ಪೋಷಕರ ಸಹಕಾರ ಅಗತ್ಯ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಯಡೂರು ಬಿ.ಟಿ.ಸಿ.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೋಷಕರ ಮತ್ತು ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಥಳೀಯರು ತಮ್ಮ ಮಕ್ಕಳನ್ನು ದೂರದ ಊರಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಬಾರದು. ಮಕ್ಕಳನ್ನು ಕಾಲೇಜಿಗೆ ಕಳುಹಿಸಿದ ನಂತರ ತನ್ನ ಜವಾಬ್ದಾರಿ ಮುಗಿದಿದೆ ಎಂದು ಭಾವಿಸದೇ ಆಗಿಂದಾಗ್ಗೆ ಮಕ್ಕಳ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಪ್ರಾಧ್ಯಾಪಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಪೋಷಕರ ಬೇಜಬ್ದಾರಿಯಿಂದ ಮಕ್ಕಳು ತಪ್ಪುದಾರಿ ಹಿಡಿಯುತ್ತಾರೆ ಎಂದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಎಂಸಿಎ, ಹೋಟೆಲ್ ಮ್ಯಾನೆಜ್ಮೆಂಟ್, ಟೂರಿಸಂ ಕೋರ್ಸ್ ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಆಸಕ್ತಿ ಮತ್ತು ಮುತುವರ್ಜಿ ವಹಿಸಬೇಕು. ಕಾಲೇಜಿನ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ಹೆಚ್ಚಿನ ಮುತುವರ್ಜಿ ಇರಬೇಕು. ಕಾಲೇಜಿನ ವಾತಾವರಣ ಉತ್ತಮ ರೀತಿಯಲ್ಲಿದೆ. ಎಲ್ಲ ಸೌಲಭ್ಯಗಳು ಕೂಡ ಖಾಸಗಿ ಕಾಲೇಜಿಗಿಂತಲೂ ಹೆಚ್ಚಾಗಿದೆ. ಈ ಬಗ್ಗೆ ಸಮರ್ಪಕವಾದ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಗುತ್ತಿಗೆದಾರ ಮನುಕುಮಾರ್ ರೈ ಮಾತನಾಡಿ, ಕಾಲೇಜಿನ ಅಭಿವೃದ್ಧಿಯ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಮುಂದಿನ ದಿನಗಳಲ್ಲಿ ಕಾಲೇಜಿಗೆ ನ್ಯಾಕ್ ಸಮಿತಿ ಆಗಮಿಸಲಿದ್ದು, ಕಾಲೇಜಿನ ಎಲ್ಲ ಕಾರ್ಯಗಳಿಗೂ ಸ್ಪಂದಿಸಬೇಕು ಎಂದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಹೇಶ್ ಮಾತನಾಡಿ, ಈ ಹಿಂದಿನ ಪರಿಸ್ಥಿತಿಗಳನ್ನು ದೂರವಿಟ್ಟು ಕಾಲೇಜಿನ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣಾ ಎಂದರು.
ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಸಲಹೆ ಸೂಚನೆಗಳನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್.ರಾಜು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಗೋಪಾಲ್, ಧರ್ಮಪ್ಪ, ತಂಗಮ್ಮ, ಶರತ್, ಪ್ರಕಾಶ್, ಬಾನುಪ್ರಕಾಶ್,
ಉಪನ್ಯಾಸಕರಾದ ಧನಲಕ್ಷ್ಮಿ, ದೇವರಾಜು, ಫೌಜೀಯಾ, ವಿಂದ್ಯಾ, ವೇಣುಗೋಪಾಲ್, ಸಂಗೀತಾ, ಆಶೀಕಾ, ಸಿದ್ದೇಶ್ ಇದ್ದರು.











